ದಾವಣಗೆರೆ: ಉತ್ತಮ ಶಿಕ್ಷಕ ಮತ್ತು ಶಿಕ್ಷಕಿಯನ್ನು ಗುರುತಿಸಿ, ಪಟ್ಟಿ ಮಾಡಿದರೆ 10 ಸಾವಿರ ರೂ. ನಗದು;ಸಚಿವ ಬಿ.ಎ.ಬಸವರಾಜ

Update: 2021-09-05 16:14 GMT
ಸಚಿವ ಬಿ.ಎ.ಬಸವರಾಜ

ದಾವಣಗೆರೆ,ಸೆ.05 : ಜಿಲ್ಲಾಡಳಿತ ಪ್ರತಿ ತಾಲೂಕಿನಲ್ಲೂ ಓರ್ವ ಉತ್ತಮ ಶಿಕ್ಷಕ ಮತ್ತು ಶಿಕ್ಷಕಿಯನ್ನು ಗುರುತಿಸಿ, ಪಟ್ಟಿ ಮಾಡಿದರೆ ಅಂತಹವರಿಗೆ ವೈಯಕ್ತಿಕವಾಗಿ 10 ಸಾವಿರ ರೂ. ನಗದು ಪುರಸ್ಕಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ತಿಳಿಸಿದರು.

ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷದ ಉತ್ತಮ ಶಿಕ್ಷಕ-ಶಿಕ್ಷಕಿ ಪಟ್ಟಿಯನ್ನು ಜಿಲ್ಲಾಡಳಿತ ಆದಷ್ಟು ಬೇಗ ನೀಡಿದರೆ ಬರುವ ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ದಿನದಂದು ಸನ್ಮಾನಿಸಲಾಗುವುದು ಎಂದರು. 

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರ ನಾಣ್ಣುಡಿಯಂತೆ ವೇದಗಳು ಹುಟ್ಟಿಕೊಂಡ ಕಾಲದಿಂದಲೂ ಗೌರವಾದಾರಗಳಿಂದ ಗುರುಗಳನ್ನು ಕಾಣುತ್ತಿದ್ದೇವೆ. ಅಂಧಕಾರದ ಅಜ್ಞಾನದಿಂದ ಬೆಳಕಿನ ಜ್ಞಾನದೆಡೆಗೆ ದಾರಿ ತೋರುವವರೇ ಶಿಕ್ಷಕರು. ನಮ್ಮ ದೇಶ ಶಿಕ್ಷಕರಿಗೆ ಪೂಜ್ಯನೀಯ ಸ್ಥಾನವನ್ನು ಹಿಂದೆಯೇ ನೀಡಿದೆ ಎಂದರು. 

ಉತ್ತಮ ನಾಗರೀಕ ಸಮಾಜ ನಿರ್ಮಾಣವಾಗಬೇಕಾದರೆ, ಅತ್ಯುತ್ತಮ ಪ್ರಜೆಗಳು ಬೇಕು. ಜ್ಞಾನವನ್ನು ಪಡೆದ ಒಂದು ಮಗು ಸುಶಿಕ್ಷಿತ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಸತ್ಪ್ರಜೆಗಳಿಂದ ಕೂಡಿದ ದೇಶ ಸಂಪತ್‍ಭರಿತವಾಗಿ ಬೆಳೆಯುವುದಲ್ಲದೆ, ಇತರೆ ದೇಶಗಳಿಗೂ ಮಾದರಿಯಾಗುವುದು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ಉತ್ತಮ ಸಂಸ್ಕಾರವನ್ನು ಕಲಿಸಿ, ದೇಶದ ಸತ್ಪ್ರಜೆಗಳನ್ನಾಗಿ ಮಾಡುವುದು ಶಿಕ್ಷಕರ ಕರ್ತವ್ಯವೆಂದು ಎಚ್ಚರಿಸಲು ಪರಿಪಾಠ ಒಂದೆಡೆಯಾದರೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಒಂದು ಸ್ಥಾನಕ್ಕೆ ಏರಲು ಶಿಕ್ಷಕರು ಪಟ್ಟ ಶ್ರಮ, ಅವರು ಹೇಳಿಕೊಟ್ಟ ಶಿಕ್ಷಣದ ಮೌಲ್ಯಗಳು ಎಷ್ಟಿದೆ ಎಂಬುದನ್ನು ಅರಿಯಲು ಶಿಕ್ಷಕರ ದಿನಾಚರಣೆ ಮುಖ್ಯವಾದದ್ದು ಎಂದರು. 

ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಹಲವು ಭಾರಿ ಭೇಟಿ ನೀಡಿ ಪ್ರತಿ ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡಿದ್ದು, ಜಿಲ್ಲೆಯ ಪರಿಚಯ ನನಗಿದೆ. ಇಲ್ಲಿ ಹೆಚ್ಚಾಗಿ ರೈತಾಪಿ ವರ್ಗದವರು ಇದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಕರು ಹೆಚ್ಚು ಉಡಾಳರಾಗಿದ್ದು, ಮಕ್ಕಳ ಬಗೆಗೆ ಹೆಚ್ಚು ಗಮನಹರಿಸಬೇಕಿದೆ. ಕೋವಿಡ್ ಲಾಕ್‍ಡೌನ್‍ನಿಂದಾಗಿ ಕಳೆದ ಒಂದುವರೆ ವರ್ಷದಿಂದ ಶಾಲಾ-ಕಾಲೇಜುಗಳಿಲ್ಲದೇ ಶಿಕ್ಷಕರು ಕೆಲಸದ ಒತ್ತಡವಿಲ್ಲದೆ ನಿರಂತಕವಾಗಿದ್ದರು. ಈಗಾ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು ಮಕ್ಕಳ ಬಗೆಗೆ ವಿಶೇಷ ಗಮನಹರಿಸಬೇಕು. ಶಿಕ್ಷಕರ ವೃತ್ತಿ ಮಾಡಿದವರ ಪೈಕಿ ಹೆಚ್ಚು ಜನ ಇಂದು ಉನ್ನತ ಮಟ್ಟದ ಅಧಿಕಾರದಲ್ಲಿದ್ದು ಗ್ರಾಮೀಣ ಭಾಗದ ಶಾಲೆಗಳಲ್ಲಿ ಇಂದಿಗೂ ಶೌಚಾಲಯ, ನೀರಿನ ಸಮಸ್ಯೆಯಿದೆ. ಅಂತಹ ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜಕಾರಣಿಗಳು ಅನುದಾನ ಬಿಡುಗಡೆ ಮಾಡುತ್ತೇವೆ ಹೊರತು ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ಉನ್ನತ ಶೌಚಾಲಯದ ನಿರ್ಮಾಣ ಮಾಡಿ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಹಾಪೌರರಾದ ಎಸ್.ಟಿ.ವೀರೇಶ್ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತ ತನ್ನ ಸಂಸ್ಕøತಿಯಿಂದ ಇಡೀ ವಿಶ್ವಕ್ಕೆ ದಾರಿದೀಪವಾಗಿದೆ. ಮನುಕುಲಕ್ಕೆ ಬೇಕಾದ ಸಂಸ್ಕಾರ, ಸಂಸ್ಕøತಿಯನ್ನು ನೀಡಿರುವ ಭಾರತದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು. ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಹಾಗೂ ಸ್ವಾತಂತ್ರ್ಯ ಬಂದ ನಂತರವೂ ದೇಶ, ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 14 ಮತ್ತು ಪ್ರೌಢಶಾಲಾ ವಿಭಾಗದಿಂದ 7 ಜನ ಶಿಕ್ಷಕರು ಸೇರಿದಂತೆ ಒಟ್ಟು 21 ಜನ ಶಿಕ್ಷಕರಿಗೆ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್., ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಾಲಾಕ್ಷಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News