ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ ಸೇರಿದಂತೆ 7ಮಂದಿ ಬಿಎಸ್ ಪಿ ಸದಸ್ಯರ ಸದಸ್ಯತ್ವ ರದ್ದು

Update: 2021-09-07 03:35 GMT

ಚಾಮರಾಜನಗರ: ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಗಂಗಮ್ಮ ಸೇರಿದಂತೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) 7 ಮಂದಿಯ ಸದಸ್ಯತ್ವವನ್ನು ಅನರ್ಹಗೊಳಿಸಿ ಚಾಮರಾಜನಗರ ಜಿಲ್ಲಾಧಿಕಾರಿ ನ್ಯಾಯಾಲಯ ರದ್ದುಗೊಳಿಸಿದೆ.

ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ ಎಲ್‌.ನಾಗಮಣಿ -2ನೇ ವಾರ್ಡ್‌, ನಾಸಿರ್‌ ಷರೀಫ್‌ -7ನೇ ವಾರ್ಡ್‌, ಎನ್‌.ಪವಿತ್ರ -13ನೇ ವಾರ್ಡ್, ಪ್ರಕಾಶ್‌ -21ನೇ ವಾರ್ಡ್‌, ರಾಮಕೃಷ್ಣ -25ನೇ ವಾರ್ಡ್‌, ನಾಗಸುಂದ್ರಮ್ಮ -26ನೇ ವಾರ್ಡ್‌ ಅವರು ಸದಸ್ಯತ್ವದಿಂದ ಅನರ್ಹರಾದ ಇತರ ಆರು ಸದಸ್ಯರು.

ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2020ರ ಅಕ್ಟೋಬರ್‌ 29ರಂದು ನಡೆದಿರುವ ಚುನಾವಣೆಯಲ್ಲಿ  ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪಕ್ಷದ  ಎಲ್ಲ ಸದಸ್ಯರಿಗೂ ವಿಪ್‌ ಜಾರಿಗೊಳಿಸಲಾಗಿತ್ತಾದರೂ ಇದನ್ನು ಉಲ್ಲಂಘಿಸಿದ್ದ ಏಳು ಮಂದಿ ಸದಸ್ಯರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಿದ್ದರು.

7ಮಂದಿ ಸದಸ್ಯರು ವಿಪ್‌ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಎಸ್ ಪಿ ಸದಸ್ಯೆ ಜಯಮೇರಿ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ನಗರಸಭೆ ಆಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಆಯುಕ್ತರು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ರವಾನಿಸಿದ್ದರು.

ಎಂಟು ತಿಂಗಳ  ಬಳಿಕ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ 7ಮಂದಿ ಸದಸ್ಯರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News