ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-09-12 15:57 GMT

ಬೆಂಗಳೂರು, ಸೆ. 12: `ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ' ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟದ್ದಾರೆ.

ರವಿವಾರ ಜಯನಗರದ ಕೆಎಸ್ಸಾರ್ಟಿಸಿ ಆಸ್ಪತ್ರೆಯ ಆವರಣದಲ್ಲಿ ನವೀಕೃತಗೊಂಡಿರುವ ಕೋವಿಡ್-19 ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಸರಕಾರ, ಬಿಬಿಎಂಪಿ, ಕಾರ್ಪೊರೇಟ್ ವಲಯ ಎಲ್ಲರೂ ಸೇರಿ ಈ ಮಕ್ಕಳ ಆಸ್ಪತ್ರೆಯನ್ನು ಪುನರ್ ನಿರ್ಮಿಸಿದ್ದಾರೆ' ಎಂದು ನೆನಪು ಮಾಡಿಕೊಂಡರು.

`ಕೋವಿಡ್ ಸೋಂಕಿನಿಂದಾಗಿ ಎಲ್ಲರಿಗೂ ಆರ್ಥಿಕ ತೊಂದರೆಗಳಾಗಿವೆ. ಜನ ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಆದರೆ ಮತ್ತೊಂದೆಡೆ ನಮ್ಮೆಲ್ಲರನ್ನು ಒಗ್ಗೂಡಿಸಿಸುವ ಕೆಲಸವನ್ನು ಮಾಡಿದೆ. ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕೆನ್ನುವ ಮನಸ್ಥಿತಿಗೆ ಬಂದದ್ದರಿಂದ ಇಂಥ ಕೆಲಸಗಳು ಆಗುತ್ತವೆ' ಎಂದು ಅವರು ಹೇಳಿದರು.

`ಮಾನವೀಯತೆ ಬಹಳ ಮುಖ್ಯ. ಇನ್ನೊಬ್ಬರಿಗಾಗಿ ಮನ ಮಿಡಿಯದಿದ್ದರೆ, ಮತ್ತೊಬ್ಬರಿಗಾಗಿ ನಾವು ಕೆಲಸ ಮಾಡದಿದ್ದರೆ, ಈ ಜೀವನ ಸಾರ್ಥಕವಾಗುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಕೋವಿಡ್ 1 ಮತ್ತು 2ನೆ ಅಲೆಯಿಂದ ಸಾಕಷ್ಟು ಪಾಠವನ್ನು ಕಲಿತಿದ್ದೇವೆ. ಕೋವಿಡ್ 3 ನೇ ಅಲೆ ಬರಬಾರದು. ಬಂದರೂ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು' ಎಂದು ಅವರು ತಿಳಿಸಿದರು.

`ಆಕ್ಸಿಜನ್ ಮಹತ್ವವನ್ನು ಕೋವಿಡ್ ಸಂದರ್ಭದಲ್ಲಿ ಅರಿತೆವು. ದಿನನಿತ್ಯದ ಆಹಾರದಲ್ಲಿನ ಮಹತ್ವವನ್ನು ಅರಿತು, ಪೌಷ್ಠಿಕ ಆಹಾರವನ್ನು ಪಡೆದುಕೊಂಡರೆ, ನಮ್ಮ ದೇಹದ ವ್ಯವಸ್ಥೆ ಸುಧಾರಿಸುತ್ತದೆ. ಏನಾದರೂ ಕೊರತೆಯಾದಾಗ ಮಾತ್ರ ನಮಗೆ ಅದರ ಮಹತ್ವ ತಿಳಿಯುತ್ತದೆ. ಜಯನಗರ ಟಿ.ಬ್ಲಾಕ್ ಆಸ್ಪತ್ರೆ ಕೊರತೆಯಾದ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು, ಎಲ್ಲಾರೂ ಈ ಆಸ್ಪತ್ರೆಗೆ ಸಹಾಯ ಮಾಡಿದ್ದಾರೆ. ಇದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಇಲ್ಲಿನ ಸಿಬ್ಬಂದಿಯದ್ದು. ನಿಖರವಾಗಿ ಯಾರದ್ದು ಯಾವ ಜವಾಬ್ದಾರಿ ಎನ್ನುವುದನ್ನು ಗುರುತಿಸಬೇಕು' ಎಂದು ಅವರು ತಿಳಿಸಿದರು.

`ಈ ಕೆಲಸವನ್ನು ಇತರರು ಅನುಕರಿಸಬೇಕು. ಕೊಡುಗೆ ನೀಡಿದ ಎಲ್ಲ ಸಂಸ್ಥೆಗಳನ್ನು ಅಭಿನಂದಿಸುತ್ತೇನೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಆಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಪ್ರವೃತ್ತಿಗಿಂತ ಕೊಡುವುದನ್ನು ರೂಢಿಸಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಸರಕಾರ ಉತ್ಸುಕವಾಗಿದೆ ಎಂದು ಅವರು ತಿಳಿಸಿದರು.

`ಜಯನಗರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದ ಮುಖ್ಯಮಂತ್ರಿ, ಬೆಂಗಳೂರಿನ ಆರೋಗ್ಯ  ವ್ಯವಸ್ಥೆ  ಒಂದೇ ಪ್ರಾಧಿಕಾರದಡಿಗೆ ಬರಬೇಕು ಎನ್ನುವ ಚಿಂತನೆ ಇದೆ. ಬೆಂಗಳೂರಿಗೆ ಯೋಜಿತ ಬೆಳವಣಿಗೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜನಸಾಮಾನ್ಯರಿಗೆ ಸೇವೆಗಳು ಸುಲಭವಾಗಿ ದೊರೆಯಬೇಕು. ಬೆಂಗಳೂರಿನಲ್ಲಿ ಮೆಗಾ ಯೋಜನೆಗಳು ಶೀಘ್ರದಲ್ಲಿಯೇ ಕಾರ್ಯಗತಗೊಳಿಸಿ ಇನ್ನಷ್ಟು ವಾಸಯೋಗ್ಯವನ್ನಾಗಿಸಲು ಪ್ರಯತ್ನಿಸಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯರೆಡ್ಡಿ, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News