ಸಚಿವ ಮಾಧುಸ್ವಾಮಿ-ಡಾ.ಜಿ.ಪರಮೇಶ್ವರ್ ಜಟಾಪಟಿ: ಎತ್ತಿನಹೊಳೆ ಯೋಜನೆ ಭೂಸ್ವಾಧೀನಕ್ಕೆ ಹಣ ನೀಡಲು ಒತ್ತಾಯ

Update: 2021-09-14 12:33 GMT

ಬೆಂಗಳೂರು, ಸೆ. 14: ಎತ್ತಿನಹೊಳೆ ಯೋಜನೆ ಭೂಸ್ವಾಧೀನಕ್ಕೆ ಪರಿಹಾರದ ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಡಾ.ಜಿ. ಪರಮೇಶ್ವರ್ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಚಾರವನ್ನು ಪ್ರಸ್ತಾಪಿಸಿದ ಜಿ.ಪರಮೇಶ್ವರ್, `ಉದ್ದೇಶಿತ ಯೋಜನೆಗೆ ಕೊರಟಗೆರೆ ತಾಲೂಕಿನ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ಏಕರೂಪದ ಪರಿಹಾರ ನೀಡಬೇಕು. ಆ ಉದ್ದೇಶಕ್ಕೆ ಸರಕಾರ 319 ಕೋಟಿ ರೂ.ಹಣ ನೀಡದಿರುವ ಕಾರಣಕ್ಕೆ ಯೋಜನೆ ವಿಳಂಬವಾಗುತ್ತಿದೆ’ ಎಂದು ದೂರಿದರು.

`ಯೋಜನೆಯನ್ನೇ ತಿರಸ್ಕಾರ ಮಾಡ್ತೇವೆ ಎಂದರೆ ಹೇಗೆ? 12,900 ಕೋಟಿ ರೂ. ಮೊತ್ತದ ಈ ಯೋಜನೆ 23,251 ಕೋಟಿ ರೂ.ಮೊತ್ತದ ಪುನರ್ ಪರಿಷ್ಕøತ ಯೋಜನಾ ವರದಿ ಏಕೆ? ಇಚ್ಛಾಶಕ್ತಿಯಿದ್ದರೆ ಹಿಂದೆ ನಿಗದಿಪಡಿಸಿದ ಮೊತ್ತದಲ್ಲೇ ಯೋಜನೆ ಪೂರ್ಣಗೊಳಿಸಬಹುದು’ ಎಂದು ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

`ಯೋಜನೆ ಅನುಷ್ಠಾನಕ್ಕೆ ನಾವು ಪ್ರಯತ್ನ ನಡೆಸಿದ್ದೇವೆ. ಹಣವಿಲ್ಲದಿದ್ದರೂ ರೈತರನ್ನು  ಒಪ್ಪಿಸಿದ್ದೇವೆ. ಯೋಜನೆ ಕಾಮಗಾರಿಗೆ ಅನುವು ಮಾಡಿದ್ದೇವೆ. ಆದರೆ, ಕೊರಟಗೆರೆ ಕ್ಷೇತ್ರದಲ್ಲಿ ಸಮಸ್ಯೆ ಆರಂಭವಾಗಿದೆ. ಹಾಗಾಗಿ ಯೋಜನೆಗೆ ತೊಡಕಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು. ಇದಕ್ಕೆ ಆಕ್ರೋಶಿತರಾದ ಸಚಿವ ಮಾಧುಸ್ವಾಮಿ `ನಿಮ್ಮ ಅವಧಿಯಲ್ಲಿ ಈ ಸಮಸ್ಯೆ ಆಗಿದೆ. ನೀವೇ ಇದಕ್ಕೆ ಜವಾಬ್ದಾರಿ' ಎಂದು ಪ್ರತಿಕ್ರಿಯಿಸಿದರು.

ಇದರಿಂದ ಪರಮೇಶ್ವರ್ ಹಾಗೂ ಮಾಧುಸ್ವಾಮಿ ನಡುವೆ ಏರಿದ ಧ್ವನಿಯಲ್ಲಿ ಜಟಾಪಟಿ ನಡೆಯಿತು. ಕೆಲ ಕಾಲ ಇಬ್ಬರು ಸದಸ್ಯರು ಪರಿಸ್ಪರ ಮಾತಿನ ಚಕಮಕಿಯನ್ನು ನಡೆಸಿದರು. ಹೀಗಾಗಿ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಸದನದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಯಿತು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, `ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಇಷ್ಟರಲ್ಲಿಯೇ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು’ ಎಂದರು.

`ಎತ್ತಿನಹೊಳೆಯಿಂದ ನೀರು ಎತ್ತಿಯೇ ತೀರುತ್ತೇವೆ. ಇತ್ತೀಚೆಗೆ ತಾವು ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಭೇಟಿಕೊಟ್ಟು, ಭೂಸ್ವಾಧೀನವೂ ಸೇರಿದಂತೆ, ಯೋಜನೆಯ ಅಡ್ಡಿ ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮಕೈಗೊಂಡು ಪರಿಹರಿಸಲು ಮಾಡಿದ ಪ್ರಯತ್ನ ಫಲವಾಗಿ ಎರಡು ಬಹುದೊಡ್ಡ ಅಡ್ಡಿ ಅಡೆತಡೆಗಳು ನಿವಾರಣೆಯಾಗಿದ್ದು, ಒಂದೆರಡು ತಿಂಗಳಲ್ಲಿ ಎತ್ತಿನಹೊಳೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಗೋವಿಂದ ಕಾರಜೋಳ ತಿಳಿಸಿದರು.

ಎತ್ತಿನಹೊಳೆಯಂತಹ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಗೆ ಇರುವ ಅಡ್ಡಿ ಆತಂಕ ಪರಿಹರಿಸಿ ತಕ್ಷಣ ಕ್ರಮಕೈಗೊಳ್ಳಲು ಕಾರ್ಯಪ್ರವೃತ್ತವಾಗಿದ್ದು, ಆದಷ್ಟು ಬೇಗ ಫಲಿತಾಂಶ ನಿಮ್ಮ ಕಣ್ಣಿಗೆ ಕಾಣಿಸಲಿದೆ. ಭೂಸ್ವಾಧೀನ ಪ್ರಕ್ರಿಯೆಗೆ 195 ಕೋಟಿ ರೂ.ಹಣ ಒದಗಿಸಲಾಗಿದ್ದರೂ, ಕೆಲ ಅಧಿಕಾರಿಗಳು ರೈತರಿಗೆ ಹಣವಿಲ್ಲವೆಂದು ಹೇಳುತ್ತಿದ್ದರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಪ್ರಕರಣಗಳಲ್ಲಿ ರೈತರಿಗೆ ಹಣಪಾವತಿ ಮಾಡುವುದು ವಿಳಂಬವಾದಲ್ಲಿ ಭೂಸ್ವಾಧೀನ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿಸಲಾಗುವುದು ಎಂದು ವಿವರಿಸಿದರು.

ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ರೈತರ 5078 ಎಕರೆ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಏಕರೂಪದ ದರ ನಿಗದಿಪಡಿಸುವಲ್ಲಿ ಸಮಸ್ಯೆಗಳಿದ್ದು, ಈ ಸಮಸ್ಯೆ ಪರಿಹಾರಕ್ಕೆ 2018ರಲ್ಲಿ ಅಂದಿನ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನೇತೃತ್ವದ ಸಂಪುಟ ಉಪಸಮಿತಿ ಸಭೆ ನಡೆದಿದ್ದರೂ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲಾಗಲಿಲ್ಲ. ಈಗ ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಎತ್ತಿನಹೊಳೆ ಯೋಜನೆಯ ಅನುಷ್ಠಾ ನದಲ್ಲಿ ಸಣ್ಣ-ಪುಟ್ಟ ಅಡ್ಡಿಗಳನ್ನು ನಿವಾರಿಸಿಕೊಂಡು ಮುಂದಿನ ಹೆಜ್ಜೆ ಇರಿಸುವುದಾಗಿ, ಆದಷ್ಟು ಬೇಗ ಯೋಜನೆ ಸಾಕಾರಗೊಳಿಸಲು ಪ್ರಯತ್ನ ಮಾಡಲಾಗುವುದು. ಉದ್ದೇಶಿತ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾರೊಬ್ಬರಿಗೂ ಆತಂಕ ಬೇಡ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News