ಚಿಕ್ಕಮಗಳೂರು: ಭಾರೀ ಮಳೆಗೆ 142.41 ಕೋ. ರೂ.ನಷ್ಟ; ಎಡಿಸಿ ರೂಪಾ

Update: 2021-09-15 16:59 GMT
 ಎಡಿಸಿ ರೂಪಾ 

ಚಿಕ್ಕಮಗಳೂರು, ಸೆ.15: ಕಾಫಿನಾಡಿನಲ್ಲಿ ಜು.21ರಿಂದ ಆ.11ರವರೆಗೆ ಸುರಿದ ಮಳೆಗೆ 142.41 ಕೋಟಿ ರೂ. ನಷ್ಟವಾಗಿದ್ದು, ಜಿಲ್ಲಾಡಳಿತ ಈಗಾಗಲೇ ಸರಕಾರಕ್ಕೆ ವರದಿ ಸಲ್ಲಿ ಸಿದ್ದು, ಸೂಕ್ತ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿರುವುದಾಗಿ ಎಡಿಸಿ ರೂಪಾ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರಿಗೆ ಈ ಸಂಬಂಧ ಮಾಹಿತಿ ನೀಡಿದ ಅವರು, ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಅತಿವೃಷ್ಟಿ ಉಂಟಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಈ ವರ್ಷವು ಮಲೆನಾಡು ಭಾಗದಲ್ಲಿ ಭೂಕುಸಿತ, ಅಪಾರ ಪ್ರಮಾಣದ ಬೆಳೆನಷ್ಟ ಉಂಟಾಗಿದೆ. ಅತೀಹೆಚ್ಚು ಹಾನಿಯಾಗಿರುವ ತಾಲೂಕುಗಳನ್ನು ಅತೀವೃಷ್ಟಿ ತಾಲೂಕುಗಳೆಂದು ಘೋಷಿಸುವಂತೆ ಜಿಲ್ಲಾಡಳಿತ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನರಸಿಂಹರಾಜಪುರ ಹಾಗೂ ಮೂಡಿಗೆರೆ ತಾಲೂಕುಗಳನ್ನು ಸರಕಾರ ಈಗಾಗಲೇ ಅತಿವೃಷ್ಟಿ ಪೀಡಿತ ತಾಲೂಕುಗಳು ಎಂದು ಘೋಷಿಸಿದೆ ಎಂದರು.

ಈ ವರ್ಷ ಜಿಲ್ಲಾದ್ಯಂತ ಸುರಿದ ಭಾರೀ ಮಳೆಯಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಚಿಕ್ಕಮಗಳೂರು ಮತ್ತು ನರಸಿಂಹರಾಜಪುರ ತಾಲೂಕಿನಲ್ಲಿ ತಲಾ 1 ಜಾನುವಾರು ಮೃತಪಟ್ಟಿವೆ. 535.11 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, 222 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಯ 50.53 ಕೋಟಿ ರೂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 77.50 ಕೋಟಿ ರೂ. ಸಣ್ಣ ನೀರಾವರಿ ಇಲಾಖೆಯಲ್ಲಿ 9.38 ಕೋಟಿ ರೂ. ಸ್ವತ್ತುಗಳಿಗೆ ಹಾನಿಯಾಗಿದೆ. ಯುಎಲ್‍ಬಿಎಸ್‍ನಲ್ಲಿ 89ಲಕ್ಷ ರೂ. ಹಾಗೂ ಮೆಸ್ಕಾಂ ಇಲಾಖೆಯಲ್ಲಿ 54.48 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಲಸಾಗಿದೆ ಎಂದರು.

ಚಿಕ್ಕಮಗಳೂರು ತಾಲೂಕಿನಲ್ಲಿ 6ಹೆಕ್ಟೇರ್, ಕೊಪ್ಪ 8.1ಹೆಕ್ಟೇರ್, ಶೃಂಗೇರಿ 7.60ಹೆಕ್ಟೇರ್, ನರಸಿಂಹರಾಜಪುರ 511 ಹೆಕ್ಟೇರ್, ತರೀಕೆರೆ 0.50 ಹೆಕ್ಟೇರ್ ಸೇರಿದಂತೆ ಒಟ್ಟು 533.11 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ತರೀಕೆರೆ ತಾಲೂಕಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಕೊಪ್ಪ ತಾಲೂಕಿನಲ್ಲಿ ಕನಿಷ್ಠ ಪ್ರಮಾಣದಲ್ಲಿ ಮನೆಗಳಿಗೆ ಹಾನಿಯಾಗಿದೆ ಎಂದರು.

ಚಿಕ್ಕಮಗಳೂರು ತಾಲೂಕಿನಲ್ಲಿ 23 ಮನೆಗಳಿಗೆ ಹಾನಿಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 22 ಮನೆಗಳಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನಲ್ಲಿ 8, ಶೃಂಗೇರಿ 10, ನರಸಿಂಹ ರಾಜಪುರ 29, ಕಡೂರು 31, ತರೀಕೆರೆ 62 ಹಾಗೂ ಅಜ್ಜಂಪುರ ತಾಲೂಕಿನಲ್ಲಿ 37ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ತಾಲೂಕಿನಲ್ಲಿ 5.75 ಕೋಟಿ ರೂ., ಮೂಡಿಗೆರೆ 25.78 ಕೋಟಿ ರೂ., ಕೊಪ್ಪ 5.40 ಕೋಟಿ ರೂ., ಶೃಂಗೇರಿ 7.15 ಕೋಟಿ ರೂ., ನರಸಿಂಹರಾಜಪುರ 2.90 ಕೋಟಿ ರೂ., ತರೀಕೆರೆ 3.45ಕೋಟಿ ರೂ., ಅಜ್ಜಂಪುರ 10 ಲಕ್ಷ ಮೊತ್ತದಷ್ಟು ರಸ್ತೆಗಳು, ಸೇತುವೆ, ಮೋರಿಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ತಾಲೂಕಿನಲ್ಲಿ 1.7ಕೋಟಿ ರೂ., ಮೂಡಿಗೆರೆ 1.57 ಕೋಟಿ ರೂ., ಕೊಪ್ಪ 17.81ಕೋಟಿ, ಶೃಂಗೇರಿ 15.36, ನರಸಿಂಹರಾಜಪುರ 41.21 ಕೋಟಿ, ತರೀಕೆರೆ 48 ಲಕ್ಷ ರೂ. ಸೇರಿ ದಂತೆ ಒಟ್ಟು 77.50 ಕೋಟಿ ರೂ.ನಷ್ಟು ಹಾನಿಯಾಗಿದ್ದರೆ, ಸಣ್ಣನೀರಾವರಿ ಇಲಾಖೆಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 3.5 ಕೋಟಿ, ಮೂಡಿಗೆರೆ 60 ಲಕ್ಷ, ಕೊಪ್ಪ 19ಲಕ್ಷ, ನರಸಿಂಹರಾಜಪುರ 84 ಲಕ್ಷ, ತರೀಕೆರೆ 4.70 ಕೋಟಿ ರೂ. ಕೆರೆಕಟ್ಟೆಗಳಿಗೆ ಧಕ್ಕೆಯಾಗಿದೆ ಎಂದರು.

ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ಒಟ್ಟು 54.48 ಲಕ್ಷ ರೂ. ನಷ್ಟವಾಗಿದ್ದು, ಚಿಕ್ಕಮಗಳೂರು ತಾಲೂಕು 14.19 ಲಕ್ಷ ರೂ., ಮೂಡಿಗೆರೆ 5.66, ಲಕ್ಷ,ಕೊಪ್ಪ 14.07 ಲಕ್ಷ, ಶೃಂಗೇರಿ 4.62 ಲಕ್ಷ,ನ.ರಾ.ಪುರ 10.94 ಲಕ್ಷ ರೂ. ಕಡೂರು 2.65 ಲಕ್ಷ, ತರೀಕೆರೆ 1.88 ಲಕ್ಷ ಹಾಗೂ ಅಜ್ಜಂಪುರ 47 ಸಾವಿರ ರೂ.ನಷ್ಟವಾಗಿದ್ದರೆ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 65 ಲಕ್ಷ, ಮೂಡಿಗೆರೆ 14 ಲಕ್ಷ, ನರಸಿಂಹರಾಜಪುರ 10 ಲಕ್ಷ ರೂ. ನಷ್ಟವಾಗಿದೆ. ಈ ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News