ಅತ್ತಿಬೆಲೆ: ಆ್ಯಂಬುಲೆನ್ಸ್- ಲಾರಿ ನಡುವೆ ಭೀಕರ ಅಪಘಾತ; ವೈದ್ಯ, ರೋಗಿ ಸಹಿತ ಮೂವರು ಮೃತ್ಯು

Update: 2021-09-16 05:22 GMT

ಆನೇಕಲ್, ಸೆ.16: ಆ್ಯಂಬುಲೆನ್ಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ, ಓರ್ವ ವೈದ್ಯ ಹಾಗೂ ಆ್ಯಂಬುಲೆನ್ಸ್ ಸಹ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ನೆರಳೂರು ಬಳಿ ಇಂದು ಮುಂಜಾನೆ ಸಂಭವಿಸಿದೆ. ಘಟನೆಯಲ್ಲಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮಹಾರಾಷ್ಟ್ರದ ನಾಸಿಕ್ ಮೂಲದ ಡಾ.ಜಾಧವ್ ಅಶೋಕ್, ಚೆನ್ನೈ ಮೂಲದ ಅನ್ವರ್ ಖಾನ್(68) ಹಾಗೂ ಆ್ಯಂಬುಲೆನ್ಸ್ ಸಹ ಚಾಲಕ ಬಬಿಯಾ ಎಂದು ಗುರುತಿಸಲಾಗಿದೆ. ಅನ್ವರ್ ಖಾನ್ ಪಾರ್ಶ್ವವಾಯು ಬಾಧಿತ ರೋಗಿಯಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬಯಿ‌ಯ ಕಲ್ಯಾಣ್ ನಿಂದ ಚೆನ್ನೈಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಪನ್ವೇಲ್ ಮೂಲದ ವೈದ್ಯ ಡಾ ಜಿತೇಂದ್ರ ಬಿರಾದರ್, ಅನ್ವರ್ ಖಾನ್ ಸಹೋದರ ಯೂಸುಫ್ ಖಾನ್, ಅಹ್ಮದ್ ರಾಜ್ ಶೇಖ್ ಹಾಗೂ ಆ್ಯಂಬುಲೆನ್ಸ್ ಚಾಲಕ ಅಸ್ಕಾನ್ ಮೆನಾನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಮುಂಬೈಯಿಂದ ಬುಧವಾರ ಚೆನ್ನೈಗೆ ಆ್ಯಂಬುಲೆನ್ಸ್ ‌ಮೂಲಕ ಹೊರಟಿದ್ದರು. ಇಂದು ಮುಂಜಾನೆ ಅತ್ತಿಬೆಲೆ ಸಮೀಪದ ನೆರಳೂರು ಬಳಿ ತಲುಪಿದಾಗ ಚಾಲಕ ಆ್ಯಂಬುಲೆನ್ಸ್ ನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News