ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸುವ ದೃಢ ನಿರ್ಧಾರ ನಮ್ಮದು : ಸಿಎಂ ಬಸವರಾಜ ಬೊಮ್ಮಾಯಿ

Update: 2021-09-19 11:25 GMT

ಬೆಂಗಳೂರು : ಜನರ ನೋವು ಸಮಸ್ಯೆಗಳಿಗೆ ಸ್ಪಂದಿಸುವ ದೃಢ ನಿರ್ಧಾರ ನಮ್ಮದು. ವಿಧಾನಸಭಾ ಉಪ ಚುನಾವಣೆಗಳು, ವಿಧಾನಪರಿಷತ್ ಚುನಾವಣೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‍ಗಳು ಸೇರಿದಂತೆ ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬೆಳಗಾವಿ ಸೇರಿದಂತೆ ಎಲ್ಲ 3 ಪಾಲಿಕೆಗಳ ಚುನಾವಣೆಯಲ್ಲಿ ಅಧಿಕಾರ ಪಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸಲಿದ್ದೇವೆ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿಯವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಡಿ ಕೋವಿಡ್ ಲಸಿಕೆ ನೀಡುವಿಕೆಯಲ್ಲಿ ದಾಖಲೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೂ ಅಭಿನಂದನೆಗಳು ಎಂದರು.

ಜನಸ್ಪಂದನ ಸರಕಾರವಾಗಿ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಶ್ರೀ ವಿಜಯಭಾಸ್ಕರ್ ಅವರ ಅಧ್ಯಯನ ವರದಿ ಪ್ರಮುಖ ಅಂಶಗಳನ್ನು ನವೆಂಬರ್ ನಿಂದ ಜಾರಿಗೊಳಿಸಲಾಗುವುದು. ಜನರ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಬಿಜೆಪಿ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ರಾಜ್ಯ ಸರಕಾರ ಕಾರ್ಯ ನಿರ್ವಹಿಸಲಿದೆ ಎಂದರು.

ನಂಜನಗೂಡು ಮಂದಿರದ ವಿಚಾರವಾಗಿ ತಜ್ಞರು, ಪಕ್ಷದ ಮುಖಂಡರು ಸೇರಿದಂತೆ ಹಲವರ ಜೊತೆ ಚರ್ಚಿಸಿದ್ದೇನೆ. ಇಂಥ ಅಚಾತುರ್ಯ ನಡೆಯದಂತೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇವೆ. ನಂಜನಗೂಡಿನ ಭಕ್ತರ ಮನಸ್ಸಿಗೆ ನೋವಾಗದಂತೆ ಸರಿದೂಗಿಸುವ ಕೆಲಸ ಮಾಡಲಿದ್ದೇವೆ ಎಂದು ವಿವರಿಸಿದರು.

ಕೆಲವೊಮ್ಮೆ ಪರಿಣಾಮಗಳನ್ನು ಯೋಚಿಸದೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಇದು ಪ್ರಥಮ ಬಾರಿಯೇನಲ್ಲ. ಶಾಂತಿ ಕದಡುವಂತಹ ಸ್ಥಿತಿ ಬರುತ್ತದೆ. ನಂಜನಗೂಡು ಮಂದಿರದ ಒಂದು ಘಟನೆ, ಕಾರ್ಯಕರ್ತರ ಮೇಲೆ ವಿನಾಕಾರಣ ದೌರ್ಜನ್ಯ, ಸಾಮಾಜಿಕ ಜಾಲತಾಣದಲ್ಲಿ ದೇಶವಿರೋಧಿಗಳಿಗೆ ಉತ್ತೇಜನ ನೀಡುವ ಪರಿಸ್ಥಿತಿ- ಇವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿದ್ದೇವೆ. ಇವೆಲ್ಲವನ್ನೂ ಪಕ್ಷ ಮತ್ತು ಸರಕಾರ ಎದುರಿಸಲಿದೆ ಎಂದು ತಿಳಿಸಿದರು.

ದೇಶದಲ್ಲಿ ರಾಜಕೀಯ ಪಕ್ಷಗಳ ನಡತೆ ಅತ್ಯಂತ ಪ್ರಮುಖವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರ್ಯಕರ್ತರು ಮತ್ತು ನಾಯಕರನ್ನು ಹೊಂದಿರುವ ಅತಿ ದೊಡ್ಡ ಪಕ್ಷ ಬಿಜೆಪಿ. ಆದರೆ, ವೈಚಾರಿಕತೆ ಇಲ್ಲದ ನಿಖರ ನಿರ್ಣಯಗಳಿಲ್ಲದ ಪಕ್ಷವೇ ಕಾಂಗ್ರೆಸ್ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ಪರಂಪರೆ, ಸರ್ವಾಧಿಕಾರ ಪ್ರವೃತ್ತಿಯ ಇನ್ನೊಂದು ಗಾಂಧಿ ಕುಟುಂಬ ಸಂಪೂರ್ಣವಾಗಿ ತದ್ವಿರುದ್ಧವಾಗಿವೆ. ದ್ವಂದ್ವ, ವಿರೋಧಾಭಾಸಗಳಿಂದ ಕೂಡಿದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯದ ಅಲೆಯ ಮೇಲೆ ರಾಜಕೀಯ ಮಾಡಿದ್ದ ಪಕ್ಷ ಕಾಂಗ್ರೆಸ್. ಆ ಪಕ್ಷದ ವಿಸರ್ಜನೆಗೆ ಮಹಾತ್ಮ ಗಾಂಧೀಜಿ ಅವರು ಸೂಚಿಸಿದ್ದರು. ಆದರೆ, ಅದನ್ನು ಕಾಂಗ್ರೆಸ್ಸಿಗರು ಪಾಲಿಸಲಿಲ್ಲ ಎಂದರು.

ಸ್ವಚ್ಛತೆಯ ಮೇಲ್ಪಂಕ್ತಿ ಹಾಕಿಕೊಟ್ಟು ದೇಶಕ್ಕಾಗಿ ಜನರನ್ನು ಜೋಡಿಸುವ ಕೆಲಸ ಮಾಡಿದ ಮಹಾನ್ ನಾಯಕ ನರೇಂದ್ರ ಮೋದಿ ಅವರು ಎಂದರಲ್ಲದೆ, ಹಿಂದೆ ದೇಶಕ್ಕಾಗಿ ಒಂದು ಹೊತ್ತಿನ ಊಟ ತ್ಯಜಿಸಲು ಲಾಲ್ ಬಹದ್ದೂರ್ ಶಾಸ್ತ್ರಿ ಕರೆ ಕೊಟ್ಟಿದ್ದರು ಎಂದು ವಿವರಿಸಿದರು. ಕೃಷಿಕ ಸಮ್ಮಾಮ್, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆ ಕೇವಲ ಯೋಜನೆಗಳಲ್ಲ. ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೃಷಿಕರ ಆದಾಯ ದ್ವಿಗುಣಗೊಳಿಸಲು ಮುಂದಾಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆಯ ಸವಾಲನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತ ಅವರದು. ರಾಜ್ಯದಲ್ಲಿ ಎರಡು ಬಾರಿ ಆಡಳಿತ ಸುಲಭವಲ್ಲ. ಯಡಿಯೂರಪ್ಪ ಅವರು ಜನರ ಧ್ವನಿಯಾಗಿ ಕೆಲಸ ಮಾಡಿದ್ದೇ ಇದಕ್ಕೆ ಕಾರಣ. ಯುವಕರು, ರೈತರು, ಎಲ್ಲ ವರ್ಗದ ಜನರು ಬಿಜೆಪಿ ಜೊತೆಗಿದ್ದಾರೆ. ಇದರ ಹಿಂದೆ ದಣಿವರಿಯದ ಶ್ರಮ ಇದೆ. ಕಾರ್ಯಕರ್ತರು ಮತ್ತು ಮುಖಂಡರು ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್, ಕೃಷಿಕ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ರೂ. 4 ಸಾವಿರ ಕೊಡುಗೆ, ಹಾಲು ಉತ್ಪಾದಕರಿಗೆ ವಿಶೇಷ ಬೋನಸ್, ಭಾಗ್ಯಲಕ್ಷ್ಮಿ ಯೋಜನೆ- ಹಲವು ಯೋಜನೆಗಳನ್ನು ಯಡಿಯೂರಪ್ಪ ಅವರ ಸರಕಾರ ಜಾರಿಗೊಳಿಸಿದೆ ಎಂದರು.

ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಟ್ಟ ದೇಶದ ಮೊದಲ ರಾಜ್ಯ ನಮ್ಮದು. ಇದರಿಂದ 20 ಲಕ್ಷ ರೈತ ಕುಟುಂಬಕ್ಕೆ ಪ್ರಯೋಜನ ಲಭಿಸಲಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನ ಹೆಚ್ಚಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. 5 ಲಕ್ಷ ಮನೆ ನಿರ್ಮಾಣದ ನಿರ್ಣಯ ಜಾರಿಯಾಗಲಿದೆ. ಸ್ತ್ರೀಶಕ್ತಿ ಸಂಘಗಳಿಗೆ ಪ್ರೋತ್ಸಾಹ, ಮೀನುಗಾರರು, ಕೃಷಿಕರಿಗೆ ಉತ್ತೇಜನ ನೀಡಲಾಗುವುದು. ಎಲ್ಲ ಜನರ ಜೀವನದ ಗುಣಮಟ್ಟ ಹೆಚ್ಚಳಕ್ಕೆ ನಮ್ಮ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಒಳ್ಳೆಯ ಆಡಳಿತ ಮತ್ತು ಒಳ್ಳೆಯ ರಾಜಕೀಯ ಕೊಡಲು ಬದ್ಧರಿದ್ದೇವೆ. ಜನಪರ ರಾಜಕಾರಣ ಮಾಡಿ ನೂರಕ್ಕೆ ನೂರು ಯಶಸ್ಸು ಪಡೆಯಲಿದ್ದೇವೆ. ಪಕ್ಷದ ಜೊತೆ ಹೆಜ್ಜೆ ಇಟ್ಟು ಸಂಘಟನೆಗೆ ನಾವು ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು. ಕಠಿಣ ಸವಾಲುಗಳು, ಸಮಸ್ಯೆಗಳನ್ನು ಒಗ್ಗೂಡಿ ಚರ್ಚಿಸಿ ಬಗೆಹರಿಸಲು ಸಾಧ್ಯವಿದೆ. ಜನಸಂಖ್ಯೆ ಹೆಚ್ಚಳದ ಜೊತೆ ಜನರ ಆಶೋತ್ತರ ಹೆಚ್ಚಾಗಿದೆ. ಎಲ್ಲ ಸಮುದಾಯಗಳಿಗೆ ಸ್ಪಂದಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿವರಿಸಿದರು. 

ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿಗಳಾದ ಅರುಣ್ ಸಿಂಗ್, ರಾಜ್ಯದ ಸಹ ಉಸ್ತುವಾರಿಗಳಾದ ಬಿ.ಕೆ.ಅರುಣಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,  ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಷಿ,  ಭಗವಂತ್ ಖೂಬಾ,  ನಾರಾಯಣಸ್ವಾಮಿ, ಕು. ಶೋಭಾ ಕರಂದ್ಲಾಜೆ ಸೇರಿದಂತೆ ಪಕ್ಷದ ಮುಖಂಡರು, ಆಹ್ವಾನಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News