ತಜ್ಞರ ಜೊತೆ ಚರ್ಚಿಸಿ 1ರಿಂದ 5ನೆ ತರಗತಿ ಆರಂಭಕ್ಕೆ ನಿರ್ಧಾರ: ಸಚಿವ ಬಿ.ಸಿ.ನಾಗೇಶ್
ಹಾವೇರಿ, ಸೆ. 19: ವಿಧಾನ ಮಂಡಲ ಅಧಿವೇಶನದ ಬಳಿಕ ತಜ್ಞರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿ 1ರಿಂದ 5 ನೇ ತರಗತಿ ಶಾಲೆಗಳನ್ನು ಪುನರ್ ಆರಂಭಿಸುವ ಸಂಬಂಧ ತೀರ್ಮಾನ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ರವಿವಾರ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಶಾಲೆ ಪುನರ್ ಆರಂಭಿಸುವ ಸಂಬಂಧ ಸದಸ್ಯರ ಅಭಿಪ್ರಾಯ ಪಡೆದು ಆ ಬಳಿಕ ತಜ್ಞರೊಂದಿಗೆ ಚರ್ಚಿಸಿ ಶಾಲೆ ಆರಂಭಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಶಾಲೆ ಪುನಾರಂಭ ಮಾಡಬೇಕು ಎಂಬುದು ನಮ್ಮ ಅನಿಸಿಕೆ. ಆದರೆ. ಸಿಎಂ ಹಾಗೂ ತಜ್ಞರು ಶಾಲೆ ಪುನಾರಂಭ ಮಾಡಿ ಎಂದು ಸೂಚಿಸಿದರೆ, ನಮ್ಮ ಇಲಾಖೆ ಮತ್ತು ಶಿಕ್ಷಕರು ಅದಕ್ಕೆ ಸಿದ್ಧರಿದ್ದಾರೆ. ಕೋವಿಡ್ ಸೋಂಕು ಇರುವ ಹಿನ್ನೆಲೆ ಒಂದರಿಂದ ಮೂರನೇ ತರಗತಿ ಮಕ್ಕಳ ಬಗ್ಗೆ ನಮಗೆ ಆತಂಕವಿದೆ ಎಂದು ಅವರು ತಿಳಿಸಿದರು.