ಜೀತಮುಕ್ತರಿಗೆ ಕೃಷಿ ಭೂಮಿ, ಪುನವರ್ಸತಿ ಸೌಲಭ್ಯ ಒದಗಿಸಿ: ದಲಿತ, ಜನಪರ ಸಂಘಟನೆಗಳ ಆಗ್ರಹ

Update: 2021-09-19 16:52 GMT
ಫೈಲ್ ಚಿತ್ರ 

ಬೆಂಗಳೂರು, ಸೆ.19: ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಗಂಗೂರು ಗ್ರಾಮದ ಜೀತ ವಿಮುಕ್ತ ಭೂರಹಿತ ಪರಿಶಿಷ್ಟ ಜಾತಿ 101 ಕುಟುಂಬಗಳಿಗೆ ಕೃಷಿ ಭೂಮಿ ಮಂಜೂರು ಮಾಡಿ, ಶಾಶ್ವತ ಪುನರ್ವಸತಿ ಸೌಲಭ್ಯ ಕಲ್ಪಿಸುವಂತೆ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ. ಜತೆಗೆ ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಈ ಸಮಸ್ಯೆ ಕುರಿತು ಚರ್ಚಿಸಲು ಒತ್ತಾಯಿಸಿದೆ.  

ಈ ಸಂಬಂಧ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿರುವ ಸಂಘಟನೆಯ ರಾಜಶೇಖರ್ ಅವರು, ಜೀತವಿಮುಕ್ತಗೊಂಡು 27 ವರ್ಷ ಕಳೆದರೂ ಜಿಲ್ಲಾಡಳಿತ ಕೃಷಿ ಭೂಮಿಯನ್ನು ನೀಡದೆ, ಪುನರ್ವಸತಿ ಸೌಲಭ್ಯ ಕಲ್ಪಿಸದಿರುವುದು ಅತ್ಯಂತ ನಿರ್ಲಕ್ಷ್ಯ ಧೋರಣೆಯಾಗಿದೆ. ದಮನಿತ ಸಮುದಾಯ ಜೀವನ ನಿರ್ವಹಣೆ ಮಾಡಲು ಭೂಮಿ, ಉದ್ಯೋಗವಿಲ್ಲದೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮತ್ತಷ್ಟು ಅಂಚಿಗೆ ಒತ್ತರಿಸಲ್ಪಟ್ಟು, ಶೋಚನೀಯ ಪರಿಸ್ಥಿತಿ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

27 ವರ್ಷಗಳಿಂದಲೂ ಪರಿಹಾರ ಕಾಣದ ಜೀತವಿಮುಕ್ತ ಕುಟುಂಬಗಳಿಗೆ ಸರಕಾರ ತುರ್ತಾಗಿ ನ್ಯಾಯಯುತ ಪರಿಹಾರ ದೊರಕಿಸಿಕೊಡಲು ವಿಧಾನಸಭಾ ಅಧಿವೇಶನದಲ್ಲಿ ಸಮಸ್ಯೆ ಕುರಿತು ಕೂಲಂಕಷ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಬೇಕು. ಕೃಷಿ ಭೂಮಿ ಹಕ್ಕಿಗಾಗಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸರಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದೆ. ಅರಣ್ಯ ಇಲಾಖೆಯೂ ಆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ಅಡ್ಡಿ ಮಾಡುತ್ತಿರುವುದರಿಂದ ಸದ್ಯ ಜೀತವಿಮುಕ್ತರು ಅಕ್ಷರಶಃ ಬೀದಿಗೆ ಬಿದ್ದಿದ್ದು, ಮರಳಿ ಜೀತಗಾರರಾಗುವ ದುರಂತದ ಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.

ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 101 ಕುಟುಂಬಗಳಿಗೆ ತಲಾ 4 ಎಕರೆ ಕೃಷಿ ಭೂಮಿಯನ್ನು, ಅವರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಗೊಬ್ಬಳಿ ಅರಣ್ಯ ಪ್ರದೇಶದಲ್ಲೇ ಮಂಜೂರು ಮಾಡಬೇಕು. ಇದಾಗದಿದ್ದ ಪಕ್ಷದಲ್ಲಿ ಅವರಿಗೆ ಅರಕಲಗೂಡು ತಾಲೂಕಿನ ಇತರೆಡೆ ಪರ್ಯಾಯ ಕೃಷಿ ಭೂಮಿ ನೀಡಬೇಕು. ಕೃಷಿ ಭೂಮಿ ಇವರ ಹೆಸರಿಗೆ ಮಂಜೂರು ಆಗುವವರೆಗೆ ಸಾಗುವಳಿ ಮಾಡುತ್ತಿದ್ದ ಗೊಬ್ಬಳಿ ಅರಣ್ಯ ಪ್ರದೇಶದಲ್ಲಿಯೇ ಸದ್ಯಕ್ಕೆ ಕೃಷಿ ಚಟುಚಟಿಕೆ ನಡೆಸಿಕೊಂಡು ಬದುಕಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ ಪ್ರತಿ ತಿಂಗಳು ತಲಾ 6 ಸಾವಿರ ಪರಿಹಾರ ಧನ ಮತ್ತು ಉಚಿತ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News