ಕೆಎಎಸ್ ಅಧಿಕಾರಿಗೆ ಕೊಲೆ ಬೆದರಿಕೆ: ಆರೋಪ

Update: 2021-09-20 16:35 GMT

ಬೆಂಗಳೂರು, ಸೆ.20: ಸರಕಾರಿ ಕಚೇರಿಗೆ ನುಗ್ಗಿ ಕೆಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪ ಸಂಬಂಧ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಹಿರಿಯ ಕೆಎಎಸ್ ಅಧಿಕಾರಿ ಬಿ.ಕೆ.ನಾಗರಾಜಪ್ಪ ಅವರು ನೀಡಿದ ದೂರಿನನ್ವಯ ಕುಮಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಎಎಸ್ ಅಧಿಕಾರಿ ಬಿ.ಕೆ.ನಾಗರಾಜಪ್ಪ ಅವರು ಬೋವಿಪಾಳ್ಯದಲ್ಲಿರುವ ಬೋವಿ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರಾಗಿ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

ಸೆ.13ರಂದು ಮಧ್ಯಾಹ್ನ ಕುಮಾರ್ ಕಚೇರಿಗೆ ಅತಿಕ್ರಮವಾಗಿ ಪ್ರವೇಶಿಸಿದ್ದರು. ಈ ವೇಳೆ ನಕಲಿ ದಾಖಲಾತಿ ಸೃಷ್ಟಿಸಿ ಮಂಜೂರಾತಿ ಆಗಿರುವಂತೆ ನಂಬಿಸಿ, ಹಣ ಬಿಡುಗಡೆ ಮಾಡುವಂತೆ ಕುಮಾರ್ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ನಾವು ಹೇಳಿದ ವ್ಯಕ್ತಿಗಳಿಗೆ ಹಣ ಮಂಜೂರು ಮಾಡಬೇಕು ಎಂದು ನಕಲಿ ಸಹಿ ಇರುವ ಮಂಜೂರಾತಿ ಆದೇಶ ತೋರಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News