ಕೃಷಿ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಸುವಂತೆ ಆಗಬೇಕು: ಸಚಿವ ಬಿ.ಸಿ.ಪಾಟೀಲ್

Update: 2021-09-21 18:01 GMT

ಬೆಂಗಳೂರು, ಸೆ.21: ವಿದ್ಯಾರ್ಥಿಗಳು ತಮಗೆ ಉದ್ಯೋಗದ ಅವಶ್ಯಕತೆ ಇದೆ ಎಂದು ಹೇಳುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು. ಇಂಥ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯಗಳಿಂದ ಹೊರ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಕೃಷಿ ಸಚಿವರೂ ಆಗಿರುವ ಬೆಂಗಳೂರು ಜಿಕೆವಿಕೆ ಸಹಕುಲಾಧಿಪತಿ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಬೆಂಗಳೂರು ಜಿಕೆವಿಕೆ 55ನೆ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿ ಹಾಗೂ ರಾಜಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಭಾಗವಹಿಸಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿ, ಬಂಗಾರದ ಪದಕ ಹಾಗೂ ಪ್ರಮಾಣಪತ್ರ ಡಾಕ್ಟರೇಟ್ ಗೌರವ ನೀಡಿ ಗೌರವಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೃಷಿ ಹಾಗೂ ರೈತರ ಅಭಿವೃದ್ಧಿಗೆ ಇಲಾಖೆ ಹಾಗೂ ಸರಕಾರ ಬದ್ಧವಾಗಿದ್ದು, 770 ಕೋಟಿ ರೂ.ಬಂಡವಾಳ ಹೂಡಿಕೆಯಲ್ಲಿ ಕೃಷಿ ತಂತ್ರಜ್ಞಾನಕ್ಕೆ ಮಹತ್ತರ ಹೆಜ್ಜೆ ಇಟ್ಟು ಇದೇ ಗುರುವಾರ ಕೃಷಿ ಇಲಾಖೆ ಕರ್ನಾಟಕ ಸರಕಾರ ಹೆಸ್ಕಾನ್ ಕಂಪೆನಿ ಜೊತೆ ಶೇ.85-ಶೇ.15ರಂತೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದಾಗಿ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.

ಕೃಷಿ ವಿವಿಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಗಮನಿಸಿದರೆ ಕೃಷಿಯತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿರುವುದು ಕಂಡುಬರುತ್ತದೆ. ವಿದ್ಯಾರ್ಥಿಗಳು ಇಷ್ಟಕ್ಕೆ ತಮ್ಮ ಸಾಧನೆ ಮುಗಿಯಿತೆಂದು ಭಾವಿಸದೆ, ಕೃಷಿ ಅಭಿವೃದ್ಧಿಯಲ್ಲಿ ತಮ್ಮ ವಿದ್ಯೆ ತಂತ್ರಜ್ಞಾನವನ್ನು ಬಳಸಿ ಪ್ರಗತಿಪರರಾಗಬೇಕು. ಕೃಷಿ ಉದ್ಯಮ ನವೋದ್ಯಮ ಪ್ರಾರಂಭಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬೆನ್ನೆಲೆಬು ರೈತ ಎನ್ನುವುದನ್ನು ಮನಗಂಡು ರೈತರ ಆದಾಯ ದ್ವಿಗುಣ ಮಾಡಲು ದೃಢ ಸಂಕಲ್ಪದ ಹೆಜ್ಜೆ ಇಟ್ಟು ಆಹಾರ ಉತ್ಪಾದಕ ಸಂಸ್ಥೆಗಳಿಗಾಗಿ ಹೆಚ್ಚು ಆದ್ಯತೆ ನೀಡಿದ್ದಾರೆ. ರೈತರ ಆದಾಯ ಹೆಚ್ಚಳಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು. 

ವಿದ್ಯೆ ಹಾಗೂ ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯಿದ್ದರೆ ಯಾವುದೇ ಕಾಲೇಜಾಗಲೀ ವಿಶ್ವವಿದ್ಯಾಲಯವಾಗಲೀ ಬೆಳಕಿಗೆ ಬಂದೇ ಬರುತ್ತದೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು.

ಕೃಷಿ ಭೂಮಿ ತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡುವುದಿಲ್ಲ. ಉದ್ಯೋಗವನ್ನು ಹುಡುಕಿಕೊಂಡು ಬೇರೆ ಕಡೆಗೆ ಹೋಗುವುದಕ್ಕಿಂತ ಇರುವ ವಿದ್ಯೆ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿಯೇ ಸಾಧನೆ ಮಾಡಬಹುದೆನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಅಲ್ಲದೆ, ಹೆಚ್ಚೆಚ್ಚು ಐಎಎಸ್, ಐಪಿಎಸ್‍ಗಳಲ್ಲಿ ಕೃಷಿ ವಿದ್ಯಾರ್ಥಿಗಳೇ ಮುಂದೆ ಬರುತ್ತಿರುವುದು ಸಂತಸದ ವಿಷಯ ಎಂದು ಸಚಿವರು ಹೇಳಿದರು.

ಆನ್‍ಲೈನ್ ಮೂಲಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಐಸಿಆರ್ ಕಾರ್ಯದರ್ಶಿಗಳಾದ ಡಾ.ತ್ರಿಲೋಚನಾ ಮೊಹಪಾತ್ರ ಪಾಲ್ಗೊಂಡರು. ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್ ಸ್ವಾಗತಿಸಿ ವಿಶ್ವವಿದ್ಯಾಲಯದ ಸಾಧನೆ ಹಾಗೂ ನಡೆದು ಬಂದ ಹಾದಿಯನ್ನು ವಿವರಿಸಿದರು. ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತ್ತರರ ಉಪಸ್ಥಿತರಿದ್ದರು.

ಚಿನ್ನದ ಪದಕ ವಿಜೇತರು 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 55ನೆ ಘಟಿಕೋತ್ಸವದಲ್ಲಿ ಮಂಡ್ಯ ಮೂಲದ ಮೋನಿಕಾ ಜಿ., ಅವರು ಬಿ.ಎಸ್ಸಿ(ಕೃಷಿ) ಸ್ನಾತಕ ಪದವಿಯಲ್ಲಿ ರಾಜ್ಯಪಾಲರಿಂದ 10 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಆಶಾಕಿರಣ್ ಅವರು ಬಿಎಸ್ಸಿ(ಕೃಷಿ) ಸ್ನಾತಕ ಪದವಿಯಲ್ಲಿ 7 ಚಿನ್ನದ ಪದಕ ಪಡೆದಿದ್ದಾರೆ. ಕೃಷಿ ವಿಸ್ತರಣಾ ವಿಭಾಗದ ದಿಶಾಂತ್ ಜೋಜಿತ್ ಜೇಮ್ಸ್ ಅವರು ಡಾಕ್ಟರ್ ಆಫ್ ಫಿಲಾಸಫಿಯಲ್ಲಿ 3 ಚಿನ್ನದ ಪದಕ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News