'ಆರೆಸ್ಸೆಸ್ ನಿಷೇಧ'ವೆಂಬ ಮೂರು ಪ್ರಹಸನಗಳು!

Update: 2021-09-21 19:30 GMT

ಆರೆಸ್ಸೆಸನ್ನು ಮೂರೂ ಬಾರಿ ನಿಷೇಧಿಸಿದ್ದು ಅದರ ರಾಜಕೀಯ ವೈರಿ ಎಂದು ಹೇಳಲ್ಪಡುವ ಕಾಂಗ್ರೆಸೇ. ಆದರೆ ಈ ಮೂರೂ ಸಂದರ್ಭಗಳನ್ನು ಗಮನಿಸಿದರೆ ಇತರ ಸರಕಾರ ವಿರೋಧಿ ಸಂಘಟನೆಗಳಂತೆ ಆರೆಸ್ಸೆಸ್ ಕೂಡಾ ''ನಿಷೇಧವಾಯಿತು'' ಎಂದಾಗಲಿ, ''ಕಾಂಗ್ರೆಸ್ ಆರೆಸ್ಸೆಸನ್ನು ನಿಷೇಧಿಸಿತು'' ಎಂದಾಗಲಿ ಹೇಳಲು ಸಾಧ್ಯವೇ ಇಲ್ಲ! ಅವೆಲ್ಲವೂ ಅಯಾ ಸಂದರ್ಭಗಳಲ್ಲಿ ಉಕ್ಕೇರಿದ ಜನವಿರೋಧದ ಒತ್ತಡಗಳಿಗೆ ಮಣಿದು ತೆಗೆದುಕೊಂಡ ತಾತ್ಕಾಲಿಕ ಅರೆಮನಸ್ಸಿನ ಕ್ರಮಗಳು ಮಾತ್ರ ಎಂಬುದು ಸ್ಪಷ್ಟವಾಗುತ್ತದೆ.


ಸರಕಾರಗಳು ಯಾವುದಾದರೂ ಸಂಘ ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ? ಇತಿಹಾಸವು ತಿಳಿಸುವಂತೆ ಆಳುವ ವರ್ಗಗಳ ಅಸ್ತಿತ್ವಕ್ಕೆ, ಅವರ ಹಿತಾಸಕ್ತಿಗೆ ಧಕ್ಕೆ ತರುವಷ್ಟು ಜನಚಳವಳಿಗಳು ತೀವ್ರಗತಿಯನ್ನು ಪಡೆದುಕೊಂಡಾಗ ಅಂತಹ ಚಳವಳಿಗಳು, ಸಂಘಟನೆಗಳು, ಪಕ್ಷಗಳು ಹಾಗೂ (2019ರಲ್ಲಿ ಯುಎಪಿಎಗೆ ಮೋದಿ ಸರಕಾರ ತಿದ್ದುಪಡಿ ತಂದ ನಂತರ) ವ್ಯಕ್ತಿಗಳನ್ನ್ನು ಆಳುವ ಸರಕಾರ ನಿಷೇಧಿಸುತ್ತದೆ. ಅದೇ ರೀತಿ ಸರಕಾರ ಹಾಗೂ ಸರಕಾರದ ಮೇಲೆ ನಿಯಂತ್ರಣ ಹೊಂದಿರುವ ಶಕ್ತಿಗಳು ಬಯಸದ ವಿದ್ಯಮಾನಗಳಿಂದಾಗಿ ಹಾಲಿ ಇರುವ ''ಕಾನೂನು ಮತ್ತು ಸುವ್ಯವಸ್ಥೆ''ಗೆ ಧಕ್ಕೆ ಒದಗುತ್ತಿದೆ ಎಂದು ಸರಕಾರ 'ಭಾವಿಸಿದಾಗಲೂ' ಸಂಘ-ಸಂಸ್ಥೆಗಳನ್ನು, ಅವರ ಸಿದ್ಧಾಂತಗಳ ಪ್ರಚಾರಗಳನ್ನು ನಿಷೇಧಿಸುತ್ತವೆ. ಆ ಸಂಸ್ಥೆಗಳ ಕಾರ್ಯಕರ್ತರನ್ನು ಹಲವು ವರ್ಷಗಳ ಕಾಲ ವಿಚಾರಣೆಯನ್ನೂ ಮಾಡದೆ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತವೆ ಆಥವಾ ನಕಲಿ ಎನ್‌ಕೌಂಟರ್‌ಗಳಲ್ಲಿ ಕೊಂದುಹಾಕುತ್ತವೆ. ಭೀಮಾ-ಕೋರೆಗಾಂವ್ ಪ್ರಕರಣ ಕಣ್ಣಮುಂದಿರುವ ಹಲವಾರು ನಿದರ್ಶನಗಳಲ್ಲಿ ಒಂದು.

ಆದರೆ ಅಸ್ತಿತ್ವದಲ್ಲಿರವ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು, ಆಳುವ ವರ್ಗಗಳನ್ನು ರಕ್ಷಿಸಲೆಂದೇ ಅವತರಿಸಿರುವ ಆರೆಸ್ಸೆಸ್ ಕೂಡಾ ಸ್ವಾತಂತ್ರ್ಯಾನಂತರದಲ್ಲಿ ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಹಾಗಿದ್ದಲ್ಲಿ ಈ ನಿಷೇಧವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಮೂರೂ ಬಾರಿ ಅದನ್ನು ನಿಷೇಧಿಸಿದ್ದು ಅದರ ರಾಜಕೀಯ ವೈರಿ ಎಂದು ಹೇಳಲ್ಪಡುವ ಕಾಂಗ್ರೆಸೇ. ಆದರೆ ಈ ಮೂರೂ ಸಂದರ್ಭಗಳನ್ನು ಗಮನಿಸಿದರೆ ಇತರ ಸರಕಾರ ವಿರೋಧಿ ಸಂಘಟನೆಗಳಂತೆ ಆರೆಸ್ಸೆಸ್ ಕೂಡಾ ''ನಿಷೇಧವಾಯಿತು'' ಎಂದಾಗಲೀ, ''ಕಾಂಗ್ರೆಸ್ ಆರೆಸ್ಸೆಸನ್ನು ನಿಷೇಧಿಸಿತು'' ಎಂದಾಗಲಿ ಹೇಳಲು ಸಾಧ್ಯವೇ ಇಲ್ಲ! ಅವೆಲ್ಲವೂ ಅಯಾ ಸಂದರ್ಭಗಳಲ್ಲಿ ಉಕ್ಕೇರಿದ ಜನವಿರೋಧದ ಒತ್ತಡಗಳಿಗೆ ಮಣಿದು ತೆಗೆದುಕೊಂಡ ತಾತ್ಕಾಲಿಕ ಅರೆಮನಸ್ಸಿನ ಕ್ರಮಗಳು ಮಾತ್ರ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಆಗಲಿ, ಅದರ ಜೊತೆ ಅಧಿಕಾರ ಹಂಚಿಕೊಂಡಿದ್ದ ಇತರ ಯಾವುದೇ ಪಕ್ಷಗಳಾಗಲಿ ಆರೆಸ್ಸೆಸ್ ಮತ್ತದರ ಸಿದ್ಧಾಂತಗಳನ್ನು ಭಾರತೀಯ ಪ್ರಜಾತಂತ್ರಕ್ಕಿರುವ ಸವಾಲೆಂದು ಪರಿಗಣಿಸಿಯೇ ಇರಲಿಲ್ಲವೆಂಬುದು ಕೂಡಾ ಸ್ಪಷ್ಟವಾಗುತ್ತದೆ. ಹೀಗಾಗಿ ಆರೆಸ್ಸೆಸ್ ನಿಷೇಧವೆಂಬುದು ಭಾರತದ ರಾಜಕಾರಣದ ಮೂರು ಪ್ರಹಸನಗಳೆಂಬಂತೆಯೇ ಕಾಣುತ್ತವೆ. ಮೂರೂ ನಿಷೇಧಗಳ ಇತಿಹಾಸವನ್ನು ಸ್ವಲ್ಪವಿವರವಾಗಿ ನೋಡೋಣ..

ಆರೆಸ್ಸೆಸ್ ನಿಷೇಧ -1 (1948-49)
ಬ್ರಾಹ್ಮಣಶಾಹಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತನಾಗಿದ್ದ ನಾಥೂರಾಮ್ ಗೂಡ್ಸೆ ಎಂಬ ಸ್ವತಂತ್ರ ಭಾರತದ ಮೊತ್ತಮೊದಲ ಭಯೋತ್ಪಾದಕ 1948ರ ಜನವರಿ 30ರಂದು ಸಂಜೆ 5:30ರ ಸುಮಾರಿಗೆ ದಿಲ್ಲಿಯಲ್ಲಿ ಗಾಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ. ಕೊಂದ ಕೈಗಳು ಆತನದ್ದಾಗಿದ್ದರೂ ಅದರ ಹಿಂದಿದ್ದ ಮೆದುಳು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾವೇ ಆಗಿತ್ತು. ತಾಂತ್ರಿಕವಾಗಿ ಗೋಡ್ಸೆ ಆರೆಸ್ಸೆಸ್‌ನ ಸದಸ್ಯ ಅಲ್ಲ ಎಂದು ಅರೆಸ್ಸೆಸ್ ಆಗ ವಾದಿಸಿದರೂ ಈಗ ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳೂ ಅವನನ್ನು ತನ್ನ ಮಾರ್ಗದರ್ಶಿ ಎಂದೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿವೆ. ಗಾಂಧಿಯನ್ನು ಕೊಂದ ನಂತರವಂತೂ ಆರೆಸ್ಸೆಸ್‌ನ ಎಲ್ಲ ಶಾಖೆಗಳಲ್ಲೂ ಸಿಹಿ ಹಂಚಿ ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ಹೀಗಾಗಿ 1949ರ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾವರ್ಕರ್‌ರನ್ನು ಬಂಧಿಸಲಾಯಿತಲ್ಲದೆ ಆರೆಸ್ಸೆಸನ್ನು ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರನ್ನೂ ಒಳಗೊಂಡಂತೆ ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಇದೇ ಗುಂಪು 1948ಕ್ಕೂ ಮುನ್ನ ಆರು ಬಾರಿ ಗಾಂಧಿಯವರ ಮೇಲೆ ಹತ್ಯಾ ಪ್ರಯತ್ನಗಳನ್ನು ನಡೆಸಿತ್ತು.

ಸ್ವತಂತ್ರ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳ ಪ್ರಯತ್ನಕ್ಕೆ ಗಾಂಧಿ ಅಡ್ಡಿಯಾಗಿದ್ದದ್ದು ಅದಕ್ಕೆ ಪ್ರಮುಖ ಕಾರಣ. ಆದರೆ ಭಾರತವು ಒಂದು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಬೇಕೆಂಬ ಆಸೆ ಇದ್ದದ್ದು ಕೇವಲ ಅರೆಸ್ಸೆಸ್‌ಗೆ ಮಾತ್ರವಲ್ಲ. ಕಾಂಗ್ರೆಸ್‌ನಲ್ಲಿದ್ದ ಮದನ ಮೋಹನ ಮಾಳವೀಯರಂತಹ ನಾಯಕರಿಗೂ ಅದೇ ಆಸೆಯಿತ್ತು. ಆಗಿನ ಉಪಪ್ರಧಾನಿ ಮತ್ತು ಗೃಹಮಂತ್ರಿ ವಲ್ಲಭಭಾಯಿ ಪಟೇಲ್‌ರಂತಹವರಿಗೆ ಸ್ವತಂತ್ರ ಭಾರತದಲ್ಲಿ ಮುಸ್ಲಿಮರಿಗೆ ''ಅವರ ಜಾಗವನ್ನು ತೋರಿಸಲು'' ಸಹಾಯ ಮಾಡುವ ಆರೆಸ್ಸೆಸ್‌ನ ಸಿದ್ಧಾಂತ ಮತ್ತು ಸಂಘಟನೆಯ ಬಗ್ಗೆ ಆಳವಾದ ಮಮತೆಯೇ ಇತ್ತು. ವಾಸ್ತವವಾಗಿ ವಿಭಜನೆಯ ನಂತರದಲ್ಲಿ ಭಾರತ ಸರಕಾರವು ಹಿಂದೂ ರಕ್ಷಣೆಯ ಹೆಸರಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಅರೆಸ್ಸೆಸ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತ್ತು. ಅಲ್ಲದೆ ಭಾರತದೊಡನೆ ವಿಲೀನಕ್ಕೆ ಒಪ್ಪಲು ಕಾಶ್ಮೀರದ ರಾಜನ ಮನ ಒಲಿಸುವಂತೆ ಗೋಳ್ವಾಲ್ಕರ್ ಅವರಿಗೆ ಪಟೇಲರು ಅಧಿಕೃತವಾಗಿಯೇ ಕೇಳಿಕೊಂಡಿದ್ದರು. ಹೀಗಾಗಿ ಅರೆಸ್ಸೆಸ್‌ನ ಹಿಂದುತ್ವವಾದಿ ತೀವ್ರಗಾಮಿ ಚಟುವಟಿಕೆಗಳಿಗೆ ಸರಕಾರದಲ್ಲಿ ಮತ್ತು ಕಾಂಗ್ರೆಸ್‌ನ ಒಂದು ವರ್ಗದಲ್ಲಿ ವಿಶೇಷ ಮಾನ್ಯತೆಯೇ ಇತ್ತು.

ಈಗ ಆರೆಸ್ಸೆಸಿಗರು ವಲ್ಲಭಭಾಯಿ ಪಟೇಲರನ್ನು ನೆಹರೂಗೆ ಪ್ರತಿನಾಯಕರಾಗಿ ಹಾಗೂ ತಮ್ಮ ಹಿಂದುತ್ವ ರಾಜಕಾರಣದ ಐಕಾನ್ ಆಗಿ ಮಾಡಿಕೊಳ್ಳುತ್ತಿರುವುದು ಸುಮ್ಮನೇ ಏನಲ್ಲ. ಆದರೆ ಗಾಂಧಿ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಸರಕಾರ ಆರೆಸ್ಸೆಸನ್ನು ನಿಷೇಧಿಸದೆ ಗತ್ಯಂತರವಿರಲಿಲ್ಲ. ಆದರೆ ಆಗ ಭಾರತದ ಗೃಹಮಂತ್ರಿಯಾಗಿದ್ದದ್ದು ಆರೆಸ್ಸೆಸ್ ಬಗ್ಗೆ ವಿಶೇಷ ಮಮತೆಯಿದ್ದ ಪಟೇಲರೇ. ಆದರೂ ಆರೆಸ್ಸೆಸನ್ನು ನಿಷೇಧ ಮಾಡಿದ್ದು ಪಟೇಲರೇ ಆದ್ದರಿಂದ ಅವರು ಆರೆಸ್ಸೆಸ್ ವಿರೋಧಿಯಾಗಿದ್ದರು ಎಂಬ ವಾದವನ್ನು ಪ್ರಗತಿಪರರು ಮುಂದಿಡುತ್ತಿದ್ದಾರೆ. ಇದು ಸುಳ್ಳಲ್ಲ. ಆದರೆ ಪೂರ್ತಿ ನಿಜವೂ ಅಲ್ಲ. ಗಾಂಧಿ ಹತ್ಯೆಯು ಪಟೇಲರನ್ನು ಒಳಗೊಂಡಂತೆ ಎಲ್ಲಾ ಕಾಂಗ್ರೆಸಿಗರನ್ನು ದಿಗ್ಭ್ರಾಂತಗೊಳಿಸಿದ್ದು ನಿಜವಾಗಿರಬಹುದು. ಆದರೆ ಅದರ ನೆಪದಲ್ಲಿ ಆರೆಸ್ಸೆಸ್‌ನ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಷೇಧವನ್ನು ಹೇರುವುದು ಪಟೇಲರಿಗೂ, ಆಗಿನ ಮುಂಬೈ ಪ್ರಾಂತದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯಂತಹವರಿಗೂ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿ ಆರೆಸ್ಸೆಸ್ ತನಗೊಂದು ಸಂವಿಧಾನವನ್ನು ಬರೆದುಕೊಂಡು ತನ್ನದು ರಾಜಕೀಯ ಸಂಘಟನೆಯಲ್ಲವೆಂದು ಸಾರಿದರೆ ಸಾಕು ನಿಷೇಧವನ್ನು ತೆಗೆಯಬಹುದೆಂದು ಸ್ವಯಂ ಪಟೇಲರೇ ಬಂಧನದಲ್ಲಿದ್ದ ಗೋಳ್ವಾಲ್ಕರ್ ಅವರೊಂದಿಗೆ ಮಾತುಕತೆ ಪ್ರಾರಂಭಿಸುತ್ತಾರೆ.

ಈ ಮಾತುಕತೆಯ ಪ್ರಕ್ರಿಯೆಯಲ್ಲಿ ಗೋಳ್ವಾಲ್ಕರ್ ಅವರು 1948ರ ಸೆಪ್ಟಂಬರ್ 24ರಂದು ಪಟೇಲರಿಗೆ ಪತ್ರವೊಂದನ್ನು ಬರೆದು: ''ತಾವು ತಮ್ಮ ಸರಕಾರದ ಶಕ್ತಿಯೊಂದಿಗೆ ಹಾಗೂ ನಾವು ನಮ್ಮ ಸಂಘಟಿತ ಸಾಂಸ್ಕೃತಿಕ ಶಕ್ತಿಯೊಂದಿಗೆ ಜೊತೆಗೂಡಿ ಕೆಲಸ ಮಾಡಿದರೆ ನಮ್ಮ ಮುಂದಿರುವ 'ಕಮ್ಯುನಿಸ್ಟ್ ಪೀಡೆ'ಯನ್ನು ನಿರ್ನಾಮ ಮಾಡಬಹುದು'' ಎಂದು ಆಶ್ವಾಸನೆ ನೀಡುತ್ತಾರೆ. ಇದು ಕಾಂಗ್ರೆಸ್‌ನಲ್ಲಿದ್ದ ಒಂದು ಪ್ರಭಾವಶಾಲಿ ಗುಂಪಿಗೂ ಹಾಗೂ ಅರೆಸ್ಸೆಸ್‌ಗೂ ಇದ್ದ ಸೈದ್ಧಾಂತಿಕ ಸಾಮೀಪ್ಯ. ಅದರಂತೆ ಆರೆಸ್ಸೆಸ್ ಭಾರತದ ಗೃಹ ಇಲಾಖೆಯು ಸೂಚಿಸಿದ ಯಾವ ಮಹತ್ತರ ಮಾರ್ಪಾಡುಗಳನ್ನೂ ಮಾಡಿಕೊಳ್ಳದೆ ಸಂವಿಧಾನವನ್ನು ರಚಿಸಿಕೊಳ್ಳುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು ಸರಕಾರ ಅದರ ಮೇಲಿನ ನಿಷೇಧವನ್ನು ತೆಗೆಯುತ್ತದೆ. ಆನಂತರ 1949ರ ಅಕ್ಟೋಬರ್‌ನಲ್ಲಿ ನೆಹರೂ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ನಡೆದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕಾಂಗ್ರೆಸ್‌ನ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತರಾತುರಿಯಲ್ಲಿ ಪಟೇಲರು ಮಂಡಿಸುತ್ತಾರೆ. ಆದರೆ ನೆಹರೂ ಹಿಂದಿರುಗಿದ ನಂತರದ 1949ರ ನವೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಆರೆಸ್ಸೆಸ್ ಸದಸ್ಯತ್ವವನ್ನು ತೊರೆದು ಕಾಂಗ್ರೆಸ್ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಆಸಕ್ತರು ಪಟೇಲ್ ಮತ್ತು ಗೋಳ್ವಾಲ್ಕರ್ ನಡುವೆ ಆರೆಸ್ಸೆಸ್ ಮಧ್ಯವರ್ತಿ ಏಕನಾಥ್ ರಾನಡೆಯ ಮೂಲಕ ನಡೆದ ಪತ್ರ ವಿನಿಮಯಗಳನ್ನು ಗಮನಿಸಬಹುದು ಅಥವಾ ಆರೆಸ್ಸೆಸ್ ಇತಿಹಾಸದ ಅಧಿಕೃತ ದಾಖಲೆಯೆಂದು ಆರೆಸ್ಸೆಸ್ ಹಾಗೂ ವಿದ್ವಾಂಸರೂ ಒಪ್ಪಿಕೊಳ್ಳುವ ವಾಲ್ಟರ್ ಆ್ಯಂಡರ್ಸೆನ್ ಮತ್ತು ಶ್ರೀಧರ್ ದಾಮ್ಲೆ ಅವರು ಬರೆದಿರುವ 'Brotherhood in Saffron' ಪುಸ್ತಕವನ್ನು ಗಮನಿಸಬಹುದು ಅಥವಾ ಈ ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡುವ ಈ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು : https://caravanmagazine.in/extract/gandhi-assassination-rss-vallabhbhai-golwalkar

ಆರೆಸ್ಸೆಸ್ ನಿಷೇಧ-2 (1975-77)
ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದಾಗ ತಮ್ಮನ್ನು ವಿರೋಧಿಸುತ್ತಿದ್ದ ಎಲ್ಲಾ ವಿರೋಧಪಕ್ಷಗಳ ಮೇಲೆ ನಿಷೇಧ ಹೇರಿ ಸರ್ವಾಧಿಕಾರವನ್ನು ಜಾರಿ ಮಾಡಿದ್ದರು. ಆ ಸಮಯದಲ್ಲಿ ಇತರ ವಿರೋಧ ಪಕ್ಷಗಳು ಜೈಲುಪಾಲಾಗಿ ತಮ್ಮ ರಾಜಕೀಯ ಹಕ್ಕುಗಳನ್ನು ಕಳೆದುಕೊಂಡಿದ್ದು ನಿಜವಾದರೂ ತುರ್ತುಸ್ಥಿತಿಯ ಕ್ರೂರ ದಮನಕ್ಕೆ ಬಲಿಯಾದದ್ದು ರೈತಾಪಿ, ಕಾರ್ಮಿಕರು ಮತ್ತು ಎಡಪಂಥೀಯ ವಿದ್ಯಾರ್ಥಿಗಳು ಹಾಗೂ ನಾಯಕರು. ಇಂತಹ ಸಾವಿರಾರು ಕಾರ್ಯಕರ್ತರು ದೇಶಾದ್ಯಂತ ಪೊಲೀಸರ ಗುಂಡಿಗೆ ಬಲಿಯಾದರು. ಇಂದಿರಾಗಾಂಧಿಯನ್ನು ವಿರೋಧಿಸಿದ ಕಾರಣಕ್ಕೆ ಆರೆಸ್ಸೆಸ್ ಕೂಡಾ ಆಗ ಎರಡನೇ ಬಾರಿಗೆ ನಿಷೇಧಕ್ಕೊಳಗಾಯಿತು. 1975ರ ಜುಲೈನಲ್ಲಿ ನಿಷೇಧಕ್ಕೆ ಗುರಿಯಾದ ಆರೆಸ್ಸೆಸ್‌ನ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟ್‌ನಿಂದಲೇ ಇಂದಿರಾ ಗಾಂಧಿಯವರಿಗೆ ಪತ್ರವನ್ನು ಬರೆಯಲು ಪ್ರಾರಂಭಿಸಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆರೆಸ್ಸೆಸ್ ಬಗ್ಗೆ ಸರಕಾರಕ್ಕೆ ತಪ್ಪುಅಭಿಪ್ರಾಯ ಇದೆಯೆಂದೂ, ತಾವು ಇಂದಿರಾ ಗಾಂಧಿಯವರ ಜೊತೆಗೆ ಹೆಜ್ಜೆ ಹಾಕಲು ಸಿದ್ಧವೆಂದು ಹೇಳುತ್ತಾ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕಲು ಗೋಗೆರೆಯಲು ಪ್ರಾರಂಭಿಸಿದರು.

ಈ ರೀತಿ ಮೂರು ಪತ್ರಗಳನ್ನು ಬರೆದರೂ ಇಂದಿರಾ ಗಾಂಧಿಯವರಿಂದ ಯಾವ ಉತ್ತರವೂ ಬರದೇ ಹೋದಾಗ ಕಡು ಕಮ್ಯುನಿಸ್ಟ್ ವಿರೋಧಿಯೂ ಹಾಗೂ ಆರೆಸ್ಸೆಸ್‌ನ್ ಹಿತೈಷಿಯೂ ಮತ್ತು ಇಂದಿರಾ ಗಾಂಧಿಯವರ ಅಭಿಮಾನಿಯೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಪ್ರವೇಶವನ್ನು ಆರೆಸ್ಸೆಸ್ ಕೋರಿತು. ಈ ಎಲ್ಲದರ ಪರಿಣಾಮವಾಗಿ ಆರೆಸ್ಸೆಸ್‌ನ ಮೇಲೆ ಅಧಿಕೃತವಾಗಿ ಬ್ಯಾನ್ ತೆಗೆಯದಿದ್ದರೂ ಆರೆಸ್ಸೆಸ್‌ನ ಬಹುಪಾಲು ಕಾರ್ಯಕರ್ತರು ಮಾತ್ರ ಬಿಡುಗಡೆಯಾದರು. ಆರೆಸ್ಸೆಸ್‌ನ ಸರಸಂಘಚಾಲಕ ದೇವರಸ್ ಮತ್ತು ಇಂದಿರಾ ಗಾಂಧಿಯವರ ಈ ರಾಜಕೀಯ ಮೈತ್ರಿ 1980ರಲ್ಲಿ ಅವರು ಮತ್ತೆ ಪ್ರಧಾನಿಯಾದ ನಂತರವೂ ಮುಂದುವರಿಯಿತು. ಈ ಅವಧಿಯಲ್ಲಿ ಇಂದಿರಾ ಗಾಂಧಿ ಸರಕಾರ ಪಂಜಾಬಿನಲ್ಲಿ ಸಿಖ್ 'ಉಗ್ರಗಾಮಿ'ತ್ವವನ್ನು ಹತ್ತಿಕ್ಕುವ ಹೆಸರಲ್ಲಿ ತೆಗೆದುಕೊಂಡ ಎಲ್ಲಾ ಬರ್ಬರ ದಮನಕಾರಿ ಕ್ರಮಗಳನ್ನು ಆರೆಸ್ಸೆಸ್ ಬೆಂಬಲಿಸಿತಲ್ಲದೆ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ ಋಣ ತೀರಿಸಿಕೊಂಡಿತು. ಹೆಚ್ಚಿನ ವಿವರಗಳಿಗಾಗಿ ಆಸಕ್ತರು ದೇವರಸ್ ಅವರೇ ಬರೆದಿರುವ 'ಹಿಂದೂ ಸಂಘಟನ್ ಔರ್ ಸತ್ತಾವಾದೀ ರಾಜನೀತಿ' ಪುಸ್ತಕವನ್ನು ಗಮನಿಸಬಹುದು. ಅಥವಾ ವಿದ್ವಾಂಸರಾದ ಕ್ರಿಸ್ಟೋಫೊ ಜಾಫರ್ಲೆ ಮತ್ತು ಪ್ರತಿನಾವ್ ಅನಿಲ್ ಅವರ ಇತೀಚಿನ India's First Dictatorship: The Emergency, 1975-1977-ಪುಸ್ತಕವನ್ನು ಓದಬಹುದು ಅಥವಾ ಅದರ ಸಂಕ್ಷಿಪ್ತ ಓದಿಗಾಗಿ ಕೆಳಗಿನ ವೆಬ್ ವಿಳಾಸದಲ್ಲಿರುವ ಈ ಲೇಖನವನ್ನೂ ಗಮನಿಸಬಹುದು: https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htm

ಆರೆಸ್ಸೆಸ್ ನಿಷೇಧ-3 (1992-93)
1992ರ ಡಿಸೆಂಬರ್ 6ರಂದು ಆರೆಸ್ಸೆಸ್‌ನ ಅಂಗಸಂಸ್ಥೆಗಳು ಹಾಡಹಗಲೇ ಕಾನೂನು ಸಂವಿಧಾನಗಳನ್ನೆಲ್ಲಾ ಗೇಲಿ ಮಾಡುತ್ತಾ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ನಂತರದಲ್ಲಿ ಮೂರನೇ ಬಾರಿಗೆ ಆರೆಸ್ಸೆಸ್ ನಿಷೇಧಕ್ಕೊಳಗಾಯಿತು. ದೇಶಾದ್ಯಂತ ಕೋಮು ಸಾಮರಸ್ಯ ಕದಡಿದ ಹಾಗೂ ಸಂವಿಧಾನ ಬದ್ಧ ಆಡಳಿತವನ್ನು ಯೋಜಿತವಾಗಿ ಧ್ವಂಸ ಮಾಡುವ ಆರೋಪಗಳು ಅವರ ಮೇಲಿತ್ತು. ಅದನ್ನು ಜಾರಿ ಮಾಡಲು ಸಂಚು, ಸಂಘಟನೆ ಮತ್ತು ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಮತ್ತೊಂದು ಆರೋಪ. ಇದನ್ನು ಸಾಬೀತು ಮಾಡಲು ಯಾವ ವಿಶೇಷ ಪುರಾವೆಗಳು ಬೇಕಿರಲಿಲ್ಲ. ಅವರು ಮಾಡಿದ ಭಾಷಣಗಳು ಮತ್ತು ಅವರು ಖುದ್ದಾಗಿ ಭಾಗವಹಿಸಿದ್ದನ್ನು ಸಾಬೀತು ಮಾಡುವ ಚಿತ್ರಗಳು ಹಾಗೂ ಪೊಲೀಸ್ ವರದಿಗಳೇ ಸಾಕಿತ್ತು. ಆರೆಸ್ಸೆಸ್ ಮೇಲಿನ ನಿಷೇಧವನ್ನು ವಿಚಾರಣೆ ಮಾಡಲು ನ್ಯಾಯಮೂರ್ತಿ ಪಿ.ಕೆ. ಬಾಹ್ರಿ ಅವರ ನೇತೃತ್ವದಲ್ಲಿ ಒಂದು ಟ್ರಿಬ್ಯುನಲ್ ಅನ್ನು ಸ್ಥಾಪಿಸಲಾಯಿತು. ಅದು ಸತತವಾಗಿ ವಿಚಾರಣೆ ನಡೆಸಿ ನಿಷೇಧ ವಿಧಿಸಿದ ಕೇವಲ ಆರೇ ತಿಂಗಳಲ್ಲಿ ಆರೆಸ್ಸೆಸನ್ನು ದೋಷ ಮುಕ್ತಗೊಳಿಸಿತು. ಕಾರಣ: ಆರೆಸ್ಸೆಸನ್ನು ದೋಷಿಯೆಂದು ಪರಿಗಣಿಸುವ ಯಾವ ಪುರಾವೆಯನ್ನು ಸರಕಾರ ಒದಗಿಸದೇ ಇದ್ದದ್ದು!! ಹಾಗೆಯೇ ನ್ಯಾಯಮೂರ್ತಿ ಕೆ. ರಾಮಮೂರ್ತಿ ಅವರ ಟ್ರಿಬ್ಯುನಲ್ ಸಹ 1995ರಲ್ಲಿ ವಿಶ್ವ ಹಿಂದೂ ಪರಿಷತ್ ಮೇಲೆ ಹಾಕಿದ್ದ ನಿರ್ಬಂಧವನ್ನು ಹಿಂದೆಗೆದುಕೊಂಡಿತು. ಕಾರಣ: ಕಾಂಗ್ರೆಸ್ ಸರಕಾರ ನಿಷೇಧವನ್ನು ಮುಂದುವರಿಸಲು ಬೇಕಾದ ಪೂರಕ ಮಾಹಿತಿಯನ್ನು ಒದಗಿಸದಿದ್ದದ್ದು. ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಗಮನಿಸಬಹುದು: https://frontline.thehindu.com/politics/article30160463.ece

ಇದು ಆರೆಸ್ಸೆಸ್ ನಿಷೇಧವೆಂಬ ರಾಜಕೀಯ ದಿವಾಳಿಕೋರತನದ ಹಾಗೂ ದುರಂತ ಪ್ರಹಸನಗಳ ಇತಿಹಾಸ..

ಮೃದು ಹಿಂದುತ್ವದಿಂದ ಉಗ್ರ ಹಿಂದುತ್ವವನ್ನು ಮಣಿಸಬಹುದೇ?  

ಇನ್ನು ಬಾಬರಿ ಮಸೀದಿ ನಾಶದಲ್ಲಿ ಅಡ್ವಾಣಿ ಹಾಗೂ ಇನ್ನಿತರ ಪರಿವಾರಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಿದ ಲಿಬರ್‌ಹಾನ್ ಮತ್ತು ನಾನಾವತಿ ಆಯೋಗಗಳ ವರದಿ ಕಾಂಗ್ರೆಸ್ ಕಾಲದಲ್ಲೇ ಡಸ್ಟ್‌ಬಿನ್ ಸೇರಿದ್ದವು. ಮೊದಲ ನಿಷೇಧದ ಸಂದರ್ಭದಲ್ಲಿ ಆರೆಸ್ಸೆಸ್‌ಗೆ ಅಲ್ಪಸ್ವಲ್ಪ ಅಳುಕಿತ್ತು. ಕಾಂಗ್ರೆಸ್‌ನಲ್ಲಿ ಕೆಲವರಲ್ಲಾದರೂ ಬಲವಾದ ಆರೆಸ್ಸೆಸ್ ವಿರೋಧವಿತ್ತು. ಆದರೆ ಎರಡನೇ ಬಾರಿ ಆರೆಸ್ಸೆಸನ್ನು ನಿಷೇಧ ಮಾಡಿದ ಇಂದಿರಾ ಗಾಂಧಿಯವರೇ 1980ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಮೇಲೆ ಭಾರತದ ರಾಜಕಾರಣದಲ್ಲಿ ''ಹಿಂದೂ'' ಮತ್ತು ''ಭಾರತ ಆತಂಕದಲ್ಲಿದೆ'' ಎಂಬ ರಾಜಕಾರಣವನ್ನು ಪ್ರಾರಂಭಿಸಿಬಿಟ್ಟರು! ಅದನ್ನೇ ಆನಂತರದಲ್ಲಿ ಆರೆಸ್ಸೆಸ್-ಬಿಜೆಪಿಗಳು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುತ್ತಿದ್ದಾರೆ. ಮೂರನೇ ನಿಷೇಧದ ವೇಳೆಗೆ ಆರೆಸ್ಸೆಸ್ ಸಂವಿಧಾನ ಹಾಗೂ ಸಮಾಜದ ಬಗ್ಗೆ ಯಾವುದೇ ಅಳುಕನ್ನು ಇಟ್ಟುಕೊಳ್ಳದೆ ಬಹಿರಂಗ ಆಕ್ರಮಣಕ್ಕಿಳಿದಿತ್ತು. ಆರೆಸ್ಸೆಸ್ ಬಗ್ಗೆ ಅಲ್ಪಸ್ವಲ್ಪವಿರೋಧವಿದ್ದ ಕಾಂಗ್ರೆಸ್ ರೂಪಾಂತರಗೊಂಡು ಆರೆಸ್ಸೆಸ್‌ನ ಮೃದು ರೂಪವಾಗಿ ಬದಲಾಗಿತ್ತು. ಇದು ಕೇವಲ ಕಾಂಗ್ರೆಸ್‌ನ ಸಮಸ್ಯೆ ಅಲ್ಲ. ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಎಲ್ಲಾ ವಿರೋಧಪಕ್ಷಗಳ ಪರಿಸ್ಥಿತಿಯೂ ಹೌದು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News