ಆಕ್ಟೀವ್ ಹೋಂಡಾ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿ: ಸ್ಥಳದಲ್ಲೇ ಮಹಿಳೆ ಮೃತ್ಯು

Update: 2021-09-22 15:11 GMT

ಮೈಸೂರು,ಸೆ.22:  ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರರಿಗೆ ಟಿಪ್ಪರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸಾವಿಗೀಡಾದ ಘಟನೆ ನಂಜುನಗೂಡು ನಗರದಲ್ಲಿ ನಡೆದಿದೆ.

ನಂಜನಗೂಡು ನಗರದ ಚಾಮರಾಜನಗರ ಬೈಪಾಸ್ ರಸ್ತೆಯ ಅಂಬೇಡ್ಕರ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಮೃತ ಮಹಿಳೆ ಜಯಶೀಲ (37) ಎಂದು ತಿಳಿದು ಬಂದಿದೆ.

ನಂಜನಗೂಡು ತಾಲ್ಲೂಕು ಚುಂಚುನಹಳ್ಳಿ ಗ್ರಾಮದ ಚನ್ನಬಸವಣ್ಣ ಮತ್ತು ಅವರ ಪತ್ನಿ ಜಯಶೀಲಾ ಆಕ್ಟೀವ್ ಹೋಂಡಾ ಬೈಕ್ ನಲ್ಲಿ ಮೈಸೂರು ಕಡೆಯಿಂದ ಚಾಮರಾಜನಗರ ಕಡೆಗೆ ತೆರಳುವ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಆಯತಪ್ಪಿ ಬಿದ್ದ ಜಯಶೀಲ ಅವರ ಮೇಲೆ ಟಿಪ್ಪರ್ ಲಾರಿ ಹರಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಚನ್ನಬಸವಣ್ಣ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ನಂಜನಗೂಡು ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ನಡೆದ ನಂತರ  ಚಾಲಕ ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ನಂಜನಗೂಡು ಸಂಚಾರಿ ಠಾಣಾ ಪೊಲೀಸರು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂಚಾರಿ ಠಾಣಾ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಲೋಹಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News