ಕೋವಿ ಹಕ್ಕಿನ ವಿಮರ್ಶೆ ವಿಪರ್ಯಾಸ : ಬ್ರಿಜೇಶ್ ಕಾಳಪ್ಪ

Update: 2021-09-23 14:17 GMT
 ಬ್ರಿಜೇಶ್ ಕಾಳಪ್ಪ

ಮಡಿಕೇರಿ ಸೆ.23 : ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ 1959ರ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಕೋವಿ ಹೊಂದಲು ನೀಡಿರುವ ವಿಶೇಷ ವಿನಾಯಿತಿಯನ್ನು ಪ್ರತಿ ಹತ್ತು ವರ್ಷಕ್ಕೊಮ್ಮೆ ವಿಮರ್ಶೆಗೆ ಒಳಪಡಿಸುವಂತೆ ನಿಯಮ ಜಾರಿಯಾಗಿರುವುದು ವಿಪರ್ಯಾಸವೆಂದು ಎಐಸಿಸಿ ವಕ್ತಾರ ಹಾಗೂ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೋವಿ ಹಕ್ಕಿನ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆ ಸಂಭ್ರಮಾಚರಣೆ ಮಾಡುವ ಜೊತೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಕೂಡ ಇದು ಸೂಕ್ತ ಕಾಲವೆಂದು ಅಭಿಪ್ರಾಯಪಟ್ಟಿದ್ದಾರೆ.

1959ರ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಸೂರ್ಯ, ಚಂದ್ರ ಇರುವವರೆಗೆ ಕೊಡವರು ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದುವ ಹಕ್ಕನ್ನು ನೀಡಲಾಗಿದೆ. ಆದರೆ, ನ್ಯಾಯಾಲಯದಲ್ಲಿ ಚೇತನ್ ಎಂಬುವವರು ಅರ್ಜಿ ಸಲ್ಲಿಸಿದ ನಂತರ ಪ್ರತೀ ಹತ್ತು ವರ್ಷಕ್ಕೊಮ್ಮೆ ಕೋವಿ ಹಕ್ಕಿನ ವಿಮರ್ಶೆಯಾಗಬೇಕೆಂದು ಆದೇಶಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೊಡಗಿನ ಜನತೆಗೆ ಮಾಡಿರುವ ದ್ರೋಹವಾಗಿದೆ ಎಂದು ಟೀಕಿಸಿದ್ದಾರೆ. 

ಕೊಡಗು ಜಿಲ್ಲೆ ಸೇನಾಪಡೆಗೆ 50 ಸಾವಿರಕ್ಕೂ ಅಧಿಕ ಸೈನಿಕರನ್ನು ಕೊಡುಗೆಯಾಗಿ ನೀಡಿದೆ. ವೀರಸೇನಾನಿಗಳಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳು ಸೇನಾಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಏರಲು ಶಸ್ತ್ರಾಸ್ತ್ರ ಕಾಯ್ದೆಯನ್ವಯ ವಿಶೇಷ ವಿನಾಯಿತಿ ಪಡೆದಿರುವುದೂ ಒಂದು ಕಾರಣವಾಗಿದೆ. ಕೊಡವರ ಹುಟ್ಟು, ಸಾವು, ವಿವಾಹ, ಹಬ್ಬದ ಆಚರಣೆಗಳಲ್ಲಿ ಕೋವಿಗೆ ವಿಶೇಷ ಸ್ಥಾನಮಾನವಿದೆ.

ಸಿಖ್ ರ ಆಯುಧ ಕಿರ್ಪನ್ ಗೆ ಕೇಂದ್ರ ಸರ್ಕಾರ ಸಂವಿಧಾನದ ಚೌಕಟ್ಟಿನಡಿ ವಿಶೇಷ ವಿನಾಯಿತಿ ಮತ್ತು ಭದ್ರತೆಯನ್ನು ನೀಡಿದೆ. ಆದರೆ ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿರುವ ಕೋವಿಗೆ ಶಾಶ್ವತ ವಿನಾಯಿತಿಯನ್ನು ಯಾಕೆ ನೀಡುತ್ತಿಲ್ಲವೆಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.

ದೇಶದ ಸೇನೆ, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆಯನ್ನು ನೀಡಿರುವ ಮತ್ತು ಬಿಜೆಪಿಯನ್ನೇ ಬೆಂಬಲಿಸುತ್ತಾ ಬರುತ್ತಿರುವ ಕೊಡಗಿನ ಜನತೆಗೆ ಕೇಂದ್ರ ಸರ್ಕಾರ ಈ ರೀತಿ ದ್ರೋಹ ಮಾಡುವ ಬದಲು ತಾನೇ ಕಾನೂನಾತ್ಮಕ ಹೋರಾಟ ನಡೆಸಿ ನ್ಯಾಯ ಒದಗಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಮಾಡಬೇಕಾದ ಕೆಲಸವನ್ನು ಇಂದು ಸಂಘ, ಸಂಸ್ಥೆಗಳು ಸತತ ಹೋರಾಟದ ಮೂಲಕ ಮಾಡುತ್ತಿದ್ದು, ಸರ್ಕಾರದ ಬದ್ಧತೆಯ ಬಗ್ಗೆ ಸಂಶಯಗಳು ಮೂಡುತ್ತಿದೆ. ಬಿಜೆಪಿಯನ್ನೇ ಬೆಂಬಲಿಸುತ್ತಾ ಬರುತ್ತಿರುವ ಮಂದಿ ಈಗ ಕೊಡವರ ಹಕ್ಕಿನ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಕಾಲ ಕೂಡಿ ಬಂದಿದೆ. ಹತ್ತು ವರ್ಷಕ್ಕೊಮ್ಮೆ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾದರೆ ಮುಂದೊಂದು ದಿನ ಕೋವಿ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆಗಳಿದೆ. ಆದ್ದರಿಂದ 1959ರ ಶಸ್ತ್ರಾಸ್ತ್ರ ಕಾಯ್ದೆಯನ್ವಯ ನೀಡಲಾಗಿರುವ ಕೋವಿ ಹಕ್ಕಿನ ವಿನಾಯಿತಿಯನ್ನು ಶಾಶ್ವತವಾಗಿ ಮುಂದುವರೆಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News