ಆರೋಪಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ: ಹೈಕೋರ್ಟ್

Update: 2021-09-23 15:10 GMT

ಬೆಂಗಳೂರು, ಸೆ.23: ಲಾಕ್‍ಡೌನ್ ಸಂದರ್ಭದಲ್ಲಿ ಸಿಗರೇಟ್ ಮಾರಾಟಕ್ಕೆ ಅನುಮತಿ ನೀಡಲು ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪ ಸಂಬಂಧ ಕೇಂದ್ರೀಯ ಅಪರಾಧ ದಳ(ಸಿಸಿಬಿ)ದ ಡಿವೈಎಸ್‍ಪಿ ಪ್ರಭುಶಂಕರ್ ವಿರುದ್ಧ ದಾಖಲಾಗಿದ್ದ ಸುಲಿಗೆ ಮತ್ತು ಭ್ರಷ್ಟಾಚಾರ ಪ್ರಕರಣಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಆರೋಪಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದೆ.  

ಕಳೆದ ವರ್ಷದ ಲಾಕ್‍ಡೌನ್ ಸಂದರ್ಭದಲ್ಲಿ ಸಿಗರೇಟು ಉತ್ಪನ್ನಗಳ ಮಾರಾಟಗಾರರಿಂದ ಹಣ ಸುಲಿಗೆ ಮಾಡಿದ್ದರು ಎಂದು ಪ್ರಭುಶಂಕರ್ ಮತ್ತು ಸಿಸಿಬಿ ಆರ್ಥಿಕ ಅಪರಾಧಗಳ ವಿಭಾಗದ ಇಬ್ಬರು ಇನ್‍ಸ್ಪೆಕ್ಟರ್‍ಗಳ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪ್ರಕರಣ ದಾಖಲಿಸಿರುವುದು ಇಲಾಖೆಯ ಒಳಗೆ ನಡೆಯುತ್ತಿರುವ ಆಂತರಿಕ ತಿಕ್ಕಾಟ ಮತ್ತು ಪ್ರತೀಕಾರವಲ್ಲದೇ ಮತ್ತೇನು ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಳಪೆ ದರ್ಜೆಯ ಮಾಸ್ಕ್‍ಗಳನ್ನು ಮಾರಾಟ ಮಾಡುತ್ತಿದ್ದ ಬಾಣಸವಾಡಿಯಲ್ಲಿರುವ ಕಂಪೆನಿ ಮತ್ತು ಸಿಗರೇಟು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಲಂಚ ಪಡೆಯಲಾಗುತ್ತಿತ್ತು ಎಂಬುದು ಸೇರಿ ಹಲವು ಆರೋಪಗಳನ್ನು ಡಿವೈಎಸ್‍ಪಿ ಪ್ರಭುಶಂಕರ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಮಾಡಲಾಗಿತ್ತು. ತನಿಖೆಗೆ ಹೈಕೋರ್ಟ್ ತಡೆ ನೀಡಿದಾಗ ಎಸಿಬಿಯಲ್ಲಿ ಇದೇ ಅಪರಾಧಕ್ಕೆ ಸಂಬಂಧಿಸಿದಂತೆ ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ ಎಂದು ಅರ್ಜಿದಾರರು ತಗಾದೆ ಎತ್ತಿದ್ದರು.

ಉಲ್ಲೇಖಿಸಲಾದ ಆರೋಪಿಗಳ ವಿರುದ್ಧ ಯಾರೂ ಆರೋಪ ಮಾಡಿಲ್ಲ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಂಚದ ಹಣವನ್ನು ವಶಪಡಿಸಿಕೊಳ್ಳದಿರುವಾಗ ಅಧಿಕಾರಿಗಳು ಮಹಜರ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂಬ ವಾದವನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ದಾಖಲಿಸಿಕೊಂಡಿದ್ದರು.

ಪಿ.ಪಿ.ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಉಲ್ಲೇಖಿಸಿದ ಸರಕಾರಿ ವಕೀಲರು, ಎಫ್‍ಐಆರ್ ವಜಾ ಮಾಡುವುದು ಇನ್ನಷ್ಟೇ ಜನ್ಮ ತಳೆಯಬೇಕಿರುವ ಭ್ರೂಣವನ್ನು ಕೊಂದಂತೆ ಎಂದರು. ಇದಕ್ಕೆ ಪೀಠವು ಮಗು ಕಾನೂನಾತ್ಮಕವಾಗಿ ಜನ್ಮ ಪಡೆಯಬೇಕೆ ವಿನಹ ದುರುದ್ದೇಶದಿಂದ ಸೃಷ್ಟಿಸಿದ ದಾಖಲೆಗಳಿಂದಲ್ಲ ಎಂದಿತು.

“ಸಿಆರ್‍ಪಿಸಿ ಸೆಕ್ಷನ್ 482ರ ಅಡಿ ಈ ನ್ಯಾಯಾಲಯವು ತನಗೆ ನೀಡಿರುವ ಅಧಿಕಾರವನ್ನು ಚಲಾಯಿಸದಿದ್ದರೆ, ಕಾನೂನು ದುರ್ಬಳಕೆ ತಡೆಯುವ ತನ್ನ ಕರ್ತವ್ಯದಿಂದ ವಿಮುಖವಾದಂತೆ ಆಗುತ್ತದೆ. ಇದು ನ್ಯಾಯದಾನದ ವಿಫಲತೆಗೆ ನಾಂದಿ ಹಾಡಲಿದೆ. ಆರೋಪಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ದುರುದ್ದೇಶದಿಂದ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಇದು ನ್ಯಾಯದಾನ ಪ್ರಕ್ರಿಯೆಯ ದುರ್ಬಳಕೆಯಲ್ಲದೆ ಮತ್ತೇನು ಅಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ” ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News