ರಾಜಕೀಯ ಪಕ್ಷದ ಕೈಗೊಂಬೆಯಾದ ಸ್ಪೀಕರ್: ಸಿದ್ದರಾಮಯ್ಯ ವಾಗ್ದಾಳಿ

Update: 2021-09-24 17:07 GMT

ಬೆಂಗಳೂರು, ಸೆ. 24: `ಸ್ಪೀಕರ್ ಹುದ್ದೆ ರಾಜಕಿಯ ಮತ್ತು ಪಕ್ಷಗಳನ್ನು ಮೀರಿದ ಹುದ್ದೆ. ಅವರ ನಿರ್ಣಯಗಳು ಯಾವಾಗಲೂ ಪಕ್ಷಾತೀತವಾಗಿರಬೇಕು. ಆದರೆ, ಸ್ಪೀಕರ್ ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುವುದಾದರೆ ಆ ಹುದ್ದೆಗೆ ಮಹತ್ವವೇನಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ಶುಕ್ರವಾರ ವಿಧಾನಸಭೆ ಕಲಾಪ ಮುಂದೂಡಿಕೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಜಾಪ್ರಭುತ್ವದಲ್ಲಿ, ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಸಿಎಂ ಆದಿಯಾಗಿ ಇಡೀ ಸರಕಾರ ಆರೆಸೆಸ್ಸ್‍ನವರ ನಿರ್ದೇಶನದಲ್ಲಿ ಮುಖವಾಡ ಧರಿಸಿ, ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

`ಸರಕಾರದ ನಿರ್ದೇಶನದ ಮೇರೆಗೆ ಸ್ಪೀಕರ್ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದಾರೆ. 6 ತಿಂಗಳ ಬಳಿಕ ಅಧಿವೇಶನ ನಡೆಯುತ್ತಿದೆ. ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸರಕಾರದ ಗಮನ ಸೆಳೆಯಬೇಕಾದ ಸಮಸ್ಯೆಗಳಿವೆ, ಹೀಗಾಗಿ ಕನಿಷ್ಠ ಇಪ್ಪತ್ತು ದಿನ ಸದನ ನಡೆಸಬೇಕೆಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಹೇಳಿದ್ದೆ. ಸ್ಪೀಕರ್ ಇನ್ನೊಂದು ಸಭೆ ಕರೆದಾಗ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಭರವಸೆ ನೀಡಿದ್ದರು. ಆದರೆ ಈ ವಾರ ಸಭೆ ಕರೆಯಲೇ ಇಲ್ಲ, ಇನ್ನು ಐದು ದಿನವಾದರೂ ಸದನ ಮುಂದುವರೆಸುವಂತೆ ಆಗ ಸ್ಪೀಕರ್‍ಗೆ ಪತ್ರ ಬರೆದೆ. ಅದಕ್ಕವರು ಸರಕಾರ ಸಿದ್ಧವಿಲ್ಲ' ಎಂದು ಆಕ್ಷೇಪಿಸಿದರು.

`ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆಗೆ ನಾನು ಅವಕಾಶ ಕೇಳಿದ್ದೆ. ಸಮಯ ಇಲ್ಲ ಎಂದು ಅವಕಾಶವನ್ನೇ ನೀಡಿಲ್ಲ. ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ತೀರ ಕೆಟ್ಟದಾಗಿದೆ, ಹೀಗೆ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಬೇಕಿತ್ತು. ಸದನ ಮುಂದುವರೆಸಿದ್ದರೆ ಈ ಎಲ್ಲ ವಿಷಯಗಳ ಮೇಲೆ ಚರ್ಚಿಸಬಹುದಿತ್ತು. ಈವರೆಗೆ ಸದನದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆಯಾದರೂ ಸರಕಾರ ಸಕಾರಾತ್ಮಕವಾಗಿ ಉತ್ತರ ನೀಡಿದೆಯೇ, ಅದೂ ಇಲ್ಲ. ಸದನದಲ್ಲಿ ಧರಣಿ, ಪ್ರತಿಭಟನೆ ಮಾಡದೆ ಜನರ ಸಮಸ್ಯೆಗಳ ಚರ್ಚೆಗೆ ಹೆಚ್ಚು ಸಮಯ ಸಿಗಲಿ ಎಂದು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಿದ್ದೆವು. ಯಾವಾಗ ಸದನ ಮುಂದುವರೆಸಲು ಆಗುವುದೇ ಇಲ್ಲ ಎಂದು ಹೇಳಿದಾಗ ಅನಿವಾರ್ಯವಾಗಿ ಧರಣಿ ಮಾಡಬೇಕಾಯಿತು' ಎಂದು ಸ್ಪಷ್ಟಪಡಿಸಿದರು.

`ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರಕಾರ ಶೋಷಿತರು, ದಲಿತರು, ಮಹಿಳೆಯರನ್ನು ಸಂಘ ಪರಿವಾರದ, ಮೇಲ್ವರ್ಗದ ಜನರ ಗುಲಾಮರನ್ನಾಗಿಸಲು ಹೊರಟಿದೆ. ಇದನ್ನು ಸದನದಲ್ಲಿ ವಿರೋಧ ಮಾಡಿದರೆ ಸ್ಪೀಕರ್ ಅವರೆ ಸಮರ್ಥನೆಗೆ ಇಳಿಯುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

`ಕೆಐಎಡಿಬಿ ಅಧೀನದಲ್ಲಿರುವ ಸುಮಾರು 400 ಕೋಟಿ ರೂ.ಮೌಲ್ಯದ 116 ಎಕರೆ ಭೂಮಿಯನ್ನು ರಾಜ್ಯ ಸರಕಾರ ಕೇವಲ 50 ಕೋಟಿ ರೂ.ಗೆ ಸೆಸ್ ಎಂಬ ಆರೆಸೆಸ್ಸ್‍ನವರನ್ನು ಒಳಗೊಂಡ ಸಂಸ್ಥೆಗೆ ಮಾರಾಟ ಮಾಡಲು ನಿರ್ಧರಿಸಿದೆ. ಇದನ್ನು ಪ್ರಶ್ನಿಸಿದರೆ ಸ್ಪೀಕರ್ ಸರಕಾರದ ಕೈಗೊಂಬೆಯಂತೆ ವರ್ತಿಸಿದರು' ಎಂದು ದೂರಿದರು.

`ಕೊರೋನದಿಂದ ಸತ್ತವರ ಲೆಕ್ಕದಲ್ಲೂ ಸರಕಾರ ಸುಳ್ಳು ಹೇಳಿದೆ. ಹಿಂದಿನ ಸಿಎಂ ಮೃತರ ಕುಟುಂಬಗಳಿಗೆ ತಲಾ 1ಲಕ್ಷ ರೂ.ಪರಿಹಾರ ನೀಡಲು 300 ಕೋಟಿ ರೂ. ಘೋಷಣೆ ಮಾಡಿದ್ದರು. ಅವರು ಅಧಿಕಾರದಿಂದ ಇಳಿದು ಎರಡು ತಿಂಗಳಾಯಿತು. ಇನ್ನೂ ಒಂದು ಪೈಸೆ ಪರಿಹಾರ ಕೊಟ್ಟಿಲ್ಲ. ಶ್ರೀರಾಮುಲು ಪರಿಹಾರ ಕೊಟ್ಟಿದ್ದೀವಿ ಎಂದು ಹೇಳಿ ಸಿಕ್ಕಿಬಿದ್ದರು, ಕೊನೆಗೆ ಯಡಿಯೂರಪ್ಪ ಅವರೇ ಪರಿಹಾರ ಕೊಟ್ಟಿಲ್ಲ ಎಂದು ಸಮಜಾಯಿಷಿ ನೀಡಿದರು ಎಂದು ಟೀಕಿಸಿದರು.

`ಲೋಕಸಭೆಯ ಸ್ಪೀಕರ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ದೇಶದ 75 ವರ್ಷಗಳ ಇತಿಹಾಸದಲ್ಲಿ, ವಿಧಾನಸೌಧ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದ ದಿನದಿಂದ ಇವತ್ತಿನವರೆಗೆ ಲೋಕಸಭಾ ಸ್ಪೀಕರ್ ವಿಧಾನಮಂಡಲದ ಜಂಟಿ ಅಧಿವೇಶನ ಕುರಿತು ಭಾಷಣ ಮಾಡಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.

`ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಖಂಡಿಸಿ ನಾವು ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿಯಲ್ಲಿ ಅಧಿವೇಶನಕ್ಕೆ ಆಗಮಿಸುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ. ಮೋದಿ ಪ್ರಧಾನಿಯಾದ ಮೇಲೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಸ್ಪತ್ರೆ ಬಿಲ್, ದಿನಸಿ ಪದಾರ್ಥ, ಬಸ್ ದರ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳು ಹಾಗೂ ಸೇವೆಗಳ ಬೆಲೆ ಗಗನಕ್ಕೇರಿ, ಜನರು ಪರದಾಡುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ಒಂದು ಮಧ್ಯಮ ವರ್ಗದ ಕುಟುಂಬದ ಜೀವನ ನಿರ್ವಹಣೆಯ ವೆಚ್ಚ ಇಂದು ದುಪ್ಪಟ್ಟಾಗಿದೆ, ಆದರೆ ಸಂಬಳ, ಪಿಂಚಣಿ, ಕೂಲಿ ಇವೆಲ್ಲವೂ ಹಿಂದಿನಷ್ಟೇ ಇದೆ. ಹೀಗಾದರೆ ಸಾಮಾನ್ಯ ಜನ ಬದುಕುವುದು ಹೇಗೆ? ದೇಹದಲ್ಲಿ ರಕ್ತಕ್ಕೆಷ್ಟು ಮಹತ್ವದ ಪಾತ್ರವಿದೆಯೋ, ಜನರ ಬದುಕಿನಲ್ಲಿ ಡೀಸೆಲ್‍ಗೂ ಅಷ್ಟೇ ಮಹತ್ವವಿದೆ. ಹಿಂದೆ ಯುಪಿಎ ಸರಕಾರವಿದ್ದಾಗ ಡೀಸೆಲ್ ದರ 47 ರೂ.ಇತ್ತು, ಇಂದು 96 ರೂ.ಆಗಿದೆ. ಡೀಸೆಲ್ ಬೆಲೆಯೇರಿಕೆಯಿಂದ ಉಳಿದೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಬಾರದು ಎಂಬ ಕಾರಣಕ್ಕೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 50 ರೂ.ಗಳ ಗಡಿ ದಾಟದಂತೆ ನೋಡಿಕೊಂಡಿದ್ದರು. ಮೋದಿ ಸರಕಾರ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದೇ ಇಂದಿನ ಬೆಲೆಯೇರಿಕೆ ನೇರ ಕಾರಣ ಎಂದು ದೂರಿದರು.

`ಅಚ್ಚೇ ದಿನದ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಮೋದಿ ಅವರು ಜನರ ಜೇಬಿಗೆ ಕೈ ಹಾಕಿ, ದರೋಡೆಗಿಳಿದಿದ್ದಾರೆ. ಇದರಿಂದ ಜನ ತಮ್ಮ ಮನೆಯಲ್ಲಿದ್ದ ಬಂಗಾರವನ್ನೆಲ್ಲಾ ಅಡವಿಟ್ಟು ಜೀವನ ಸಾಗಿಸುವಂತಾಗಿದೆ. ಕೊರೋನ ಆರಂಭವಾದ ನಂತರ ಸುಮಾರು 4.17 ಲಕ್ಷ ಕೋಟಿ ರೂ.ಬೆಲೆಬಾಳುವ 1500 ಮೆಟ್ರಿಕ್ ಟನ್ ಬಂಗಾರವನ್ನು ಮುತ್ತೂಟ್ ಮತ್ತು ಮಣಪ್ಪುರಂನಲ್ಲಿ ಅಡವಿಟ್ಟಿದ್ದಾರೆ. ಇಂತಹ ಸ್ಥಿತಿಗೆ ದೇಶವನ್ನು ಮೋದಿ ಸರಕಾರ ತಂದು ನಿಲ್ಲಿಸಿದೆ. ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಕಾರ್ಪೊರೇಟ್ ಉದ್ದಿಮೆಗಳ ಮೇಲೆ ತೆರಿಗೆ ಹೆಚ್ಚು ಮಾಡಬೇಕಿತ್ತು. ಆದರೆ ಮೋದಿ ಸರಕಾರ ಬಂಡವಾಳಶಾಹಿಗಳು, ಉದ್ದಿಮೆದಾರರು, ಕಾರ್ಪೊರೇಟ್ ಕಂಪೆನಿಗಳ ಪರವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತ ಹೋರಾಟವನ್ನು `ಪ್ರಾಯೋಜಿತ ಚಳವಳಿ' ಎಂದು ಕರೆದು ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹೋರಾಟವನ್ನೇ ಮಾಡದೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದವರಿಗೆ ಹೋರಾಟದ ಬೆಲೆ ಗೊತ್ತೇ? ಪಕ್ಕದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು 3 ರೂ.ಕಡಿತ ಮಾಡಿದರು. ರಾಜ್ಯ ಸರಕಾರಕ್ಕೆ ನಿಜವಾಗಿ ಬಡವರ, ರೈತರ ಮೇಲೆ ಕಾಳಜಿ ಇದ್ದರೆ ಪೆಟ್ರೋಲ್, ಡೀಸೆಲ್ ಮೇಲೆ 10ರೂ. ತೆರಿಗೆ ಕಡಿತ ಮಾಡಲಿ ಎಂದು ಆಗ್ರಹಿಸಿದರು.

ಅ.2ರ ರಾಜ್ಯಾದ್ಯಂತ ಪ್ರತಿಭಟನೆ

`ಬಿಜೆಪಿ ಸರಕಾರದ ಜೊತೆ ಅಧಿವೇಶನದಲ್ಲಿ ಎಷ್ಟೇ ಗುದ್ದಾಡಿದರೂ ಇವರು ಯಾವುದಕ್ಕೂ ತಲೆಕೆಡಿಸಿಕೊಳ್ಳದಷ್ಟು ಭಂಡಗೆಟ್ಟಿದ್ದಾರೆ. ನಮ್ಮ ಪಕ್ಷವೇ ಇಂದು ಅಧಿಕಾರದಲ್ಲಿ ಇದ್ದಿದ್ದರೆ ಕನಿಷ್ಠ 10 ರೂ.ತೆರಿಗೆ ಕಡಿತ ಮಾಡುತ್ತಿದ್ದೆ. ಅ.2ರ ಗಾಂಧಿಜಯಂತಿಯಂದು ಬೆಲೆಯೇರಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಆರಂಭಿಸಿ, ಬೆಲೆ ಇಳಿಕೆಯಾಗುವವರೆಗೂ ಮುಂದುವರೆಸಿಕೊಂಡು ಹೋಗುತ್ತೇವೆ'

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News