ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಒಕ್ಕೂಟ ವ್ಯವಸ್ಥೆ ಕಗ್ಗೊಲೆಗೆ ಮುಂದಾದ ಕೇಂದ್ರ ಸರಕಾರ: ಪದ್ಮಶ್ರೀ ಡಾ.ಜಿ.ಎನ್.ದೇವಿ

Update: 2021-09-24 17:30 GMT

ಧಾರವಾಡ, ಸೆ. 24: `ಸಂವಿಧಾನದ ಶೆಡ್ಯೂಲ್ 7ರಲ್ಲಿ ಶಿಕ್ಷಣ ಬರುವುದರಿಂದ ಶಿಕ್ಷಣಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾಡಲು ಅವಕಾಶವಿದೆ. ಆದರೆ ಎನ್‍ಇಪಿಯಡಿ ರಾಷ್ಟ್ರೀಯ ಶಿಕ್ಷಾ ಆಯೋಗ ರಚನೆ ಮಾಡುವುದರ ಮೂಲಕ ರಾಜ್ಯಗಳಿಗೆ ಇರುವ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುತ್ತದೆ' ಎಂದು ಭಾಷಾ ಶಾಸ್ತ್ರಜ್ಞ, ಪದ್ಮಶ್ರೀ ಡಾ.ಗಣೇಶ ಎನ್.ದೇವಿ ಹೇಳಿದ್ದಾರೆ.

ಶುಕ್ರವಾರ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಎಸ್‍ಎಫ್‍ಐ, ಡಿವೈಎಫ್‍ಐ ಜಿಲ್ಲಾ ಸಮಿತಿಗಳು ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ದುಂಡು ಮೇಜಿನ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, `ಪಾಶ್ಚಿಮಾತ್ಯ ಶಿಕ್ಷಣದ ನಿಯಂತ್ರಣ ಮತ್ತು ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ಸನಾತನ ಧರ್ಮದ ಆಧಾರದಲ್ಲಿ ರಾಷ್ಟ್ರಕಟ್ಟುವ ಗುರಿಯನ್ನು ಹೊಂದಿದೆ. ಸನಾತನ ಧರ್ಮ ಎಂದರೆ ಮನುಸ್ಮೃತಿ ಆಧಾರದಲ್ಲಿ ಮಹಿಳೆಯರು ಹಾಗೂ ಶೋಷಿತ ಜನಾಂಗಗಳಿಗೆ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಶ್ಚಿಮಾತ್ಯ ಜ್ಞಾನವನ್ನು ವಿರೋಧಿಸುವ ಬಿಜೆಪಿ ಶಾಸಕರು, ಸಚಿವರ ಬಹುತೇಕ ಮಕ್ಕಳು ವಿದೇಶಗಳಲ್ಲಿ ಓದುತ್ತಿದ್ದಾರೆ. ಇದು ಕೇವಲ ಬಡವರ ಮಕ್ಕಳನ್ನು ವಿಜ್ಞಾನ ಮತ್ತು ವೈಚಾರಿಕ ಶಿಕ್ಷಣದಿಂದ ದೂರ ಮಾಡುವ ಕುತಂತ್ರವಾಗಿದೆ ಎಂದು ಅವರು ಹರಿಹಾಯ್ದರು.

ಶಿಕ್ಷಣ ತಜ್ಞ ಶಂಕರ ಹಲಗತ್ತಿ ಮಾತನಾಡಿ, ಒಕ್ಕೂಟ ಸರಕಾರವು ಜಾರಿ ಮಾಡುತ್ತಿರುವ ಎನ್‍ಇಪಿಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ದಿ ಕಲಿಸುವ ಘೋಷಣೆಯ ಹಿಂದೆ ಬಹುರಾಷ್ಟ್ರೀಯ ಕಾರ್ಪೊರೆಟ್ ಕಂಪೆನಿಗಳಿಗೆ ಕೇವಲ ಕಾರ್ಮಿಕರನ್ನು ಸೃಷ್ಟಿಸುವ ನೀತಿ ಹೊಂದಿದೆ. ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸಬೇಕು ಎನ್ನುವ ಈ ಕಾಯಿದೆಯು ಖಾಸಗಿ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಕಲಿಸಬಹುದು ಎಂದು ಸೂಚಿಸುತ್ತಿರುವುದರ ಕುಟಿಲತೆಯನ್ನು ಅರಿಯಬೇಕು ಎಂದರು.

ಕವಿವಿ ನಿವೃತ್ತ ಕುಲ ಸಚಿವ ಡಾ.ಕೆ.ಆರ್ ದುರ್ಗಾದಾಸ್ ಮಾತನಾಡಿ, ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಒಕ್ಕೂಟ ಸರಕಾರವು, ಕೇವಲ ಒಂದು ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿದೆಯೆ ವಿನಃ, ದೇಶದ ಸರ್ವ ಜನರನ್ನು ಸಮಾನವಾಗಿ ನೋಡಲು ವಿಷಯದಿಂದ ಹಿಂದೆ ಸರಿದಿದೆ. ಆಳುವವರ ಗುರಿಗೆ ತಕ್ಕಂತೆ ಮಕ್ಕಳನ್ನು ಬಳಸಿಕೊಳ್ಳಲು ಎನ್‍ಇಪಿ ಮೂಲಕ ಯೋಜನೆ ರೂಪಿಸಿರುವರು ಎಂದು ಹೇಳಿದರು.

ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ವಹಿಸಿದ್ದರು. ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಶಾರದಾ ದಾಬಡೆ, ಶಿಕ್ಷಕರ ಸಂಘಟನೆಯ ರಾಷ್ಟ್ರೀಯ ಮುಖಂಡ ಬಸವರಾಜ ಗುರಿಕಾರ, ವೈದ್ಯ ಗೋಪಾಲ ದಾಬಡೆ, ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ, ಎಐಎಲ್‍ಯು ಮುಖಂಡ ಕೆ.ಎಚ್ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಎಸ್.ನಾಗಕಲಾಲ್, ಸಿಐಟಿಯು ಕಾರ್ಯದರ್ಶಿ ಮಹೇಶ ಪತ್ತಾರ, ಎ.ಎಂ. ಖಾನ್, ಡಾ.ಆರ್.ಎನ್ ಪಾಟೀಲ, ಕೀರ್ತಿವತಿ, ರಾಜೇಶ್ವರಿ ಜೋಷಿ, ಬಿ.ಎನ್. ಪೂಜಾರಿ, ಎಂ.ವಿ.ಗಡಾದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News