ಓ ಮೆಣಸೇ...

Update: 2021-09-26 19:30 GMT

*ನನ್ನ ಜನ್ಮದಿನದಂದು 2.5 ಕೋಟಿ ಲಸಿಕೆಗಳನ್ನು ನೀಡಿದ್ದನ್ನು ನೋಡಿ ಪಕ್ಷವೊಂದಕ್ಕೆ ಜ್ವರ ಬಂದು ಬಿಟ್ಟಿದೆ - ನರೇಂದ್ರ ಮೋದಿ, ಪ್ರಧಾನಿ
ಇಷ್ಟೊಂದು ಅಗ್ಗದ ಮಾತನಾಡುವ ವ್ಯಕ್ತಿಯೊಬ್ಬರು ಪ್ರಧಾನಮಂತ್ರಿಯ ಸ್ಥಾನದಲ್ಲಿ ಕೂತಿರುವುದನ್ನು ಕಂಡು, ದೇಶದ ಹಿತ ಬಯಸುವ ಪ್ರತಿಯೊಬ್ಬರಿಗೂ ಜ್ವರ ಬಂದಿದೆ.


‘ರಾಜ್ಯೋತ್ಸವ ಪ್ರಶಸ್ತಿ’ಗೆ ಆನ್‌ಲೈನ್ ಮೂಲಕ ಸಾರ್ವಜನಿಕರೇ ಸಾಧಕರನ್ನು ಶಿಫಾರಸು ಮಾಡಬಹುದು -ಸುನೀಲ್ ಕುಮಾರ್, ಸಚಿವ
ನಿಮ್ಮ ಐಟಿ ಸೆಲ್ ಕಾರ್ಮಿಕರಿಗೆ ಮುಂದಿನ ಕೆಲವು ದಿನ ಸಂಘಿಗಳ ಹೆಸರು ಶಿಫಾರಸು ಮಾಡುವ ಅಸೈನ್ಮೆಂಟ್ ಕೊಟ್ಟುಬಿಟ್ಟಂತಿದೆ!


ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಅಭಿವ್ಯಕ್ತಿ ಪಡಿಸುವ ನುಡಿಗಟ್ಟನ್ನು ಕಂಡುಕೊಳ್ಳಲು ಸಾಹಿತಿಗಳು ಯತ್ನಿಸಬೇಕಿದೆ - ಡಿ.ಚಂದ್ರಶೇಖರ್ ಕಂಬಾರ, ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ
ಶ್ರೀಮಂತಿಕೆಗೆ ಕಳಂಕವಾದ ಹಸಿವು, ದಾರಿದ್ರ, ನಿರುದ್ಯೋಗ, ಆತ್ಮಹತ್ಯೆ ಮುಂತಾದ ನುಡಿಗಟ್ಟುಗಳನ್ನು ಇಲ್ಲವಾಗಿಸುವ ಯತ್ನವೂ ನಡೆದರೆ ಚೆನ್ನ.


ಪಲ್ಸ್ ಪೋಲಿಯೊ ಮಾದರಿಯಲ್ಲಿ ರಾಸುಗಳ ಕಾಲುಬಾಯಿ ರೋಗಕ್ಕೆ ಲಸಿಕೆ ಅಭಿಯಾನ ನಡೆಸಲಾಗುವುದು - ಪ್ರಭು ಚವ್ಹಾಣ್, ಸಚಿವ
ಒಟ್ಟಿನಲ್ಲಿ ಜನರು, ಜಾನುವಾರುಗಳು ಲಸಿಕೆಗಳಿಂದಲೇ ಹೊಟ್ಟೆ ತುಂಬಿಸಿ ಕೊಳ್ಳುವ ಸ್ಥಿತಿ ಬಂದಿದೆ.


ದಂಗೆ, ಬಡಿದಾಟಗಳಿಗೆ ಹೆಸರಾಗಿದ್ದ ಉತ್ತರಪ್ರದೇಶದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಂದೇ ಒಂದು ದರೋಡೆ ಪ್ರಕರಣವೂ ನಡೆಯದಂತೆ ಕಾನೂನು ವ್ಯವಸ್ಥೆ ಕಾಪಾಡಿಕೊಂಡು ಬರಲಾಗಿದೆ - ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
 ಎಲ್ಲ ಅಕ್ರಮಗಳಿಗೆ ರಾಜಾಶ್ರಯ ಒದಗಿಸಿ, ಕೊಲೆ ದರೋಡೆ ಇತ್ಯಾದಿ ಎಲ್ಲ ಅಪರಾಧಗಳ ಗುತ್ತಿಗೆಯನ್ನು ಸರಕಾರವೇ ವಹಿಸಿಕೊಂಡ ಮೇಲೆ ಅಪರಾಧವೆಂದು ಗುರುತಿಸುವುದಕ್ಕೆ ಏನು ತಾನೇ ಉಳಿದಿರುತ್ತದೆ?


ಜಗತ್ತಿನಲ್ಲಿಯೇ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಿದ ಏಕೈಕ ದೇಶವೆಂದರೆ ಅದು ಭಾರತ ಮಾತ್ರ - ನಳಿನ್ ಕುಮಾರ್ ಕಟೀಲು, ಸಂಸದ
ಕೋವಿಡ್, ಮಾಸ್ಕ್, ಚಿಕಿತ್ಸೆ, ಆಸ್ಪತ್ರೆ, ವ್ಯಾಕ್ಸಿನ್, ಸರ್ಟಿಫಿಕೇಟ್ ಹೀಗೆ ಬೇರೆ ಬೇರೆ ಹೆಸರಲ್ಲಿ ಪದೇ ಪದೇ ಜನರನ್ನು ದೋಚಿ ಈ ದರೋಡೆಯನ್ನೇ ಸೇವೆ ಎಂದು ಬಣ್ಣಿಸಿದ ಸರಕಾರ ಜಗತ್ತಿನ ಬೇರೆಲ್ಲೂ ಖಂಡಿತ ಇಲ್ಲ.


ಪ್ರಧಾನಿ ಮೋದಿ ಹೆಸರಲ್ಲಿ ಲೋಕಸಭೆ ಚುನಾವಣೆ ಗೆಲ್ಲುವುದು ಸುಲಭ, ಆದರೆ ವಿಧಾನ ಸಭೆ ಚುನಾವಣೆ ಗೆಲ್ಲುವುದು ಕಷ್ಟ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

  ಇದು, ನೀವು ಪ್ರಾಮಾಣಿಕವಾಗಿ ನಂಬಿದ ಮಾತಾಗಿದ್ದರೆ, ನೀವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶ್ರಮಿಸುತ್ತಿರಲಿಲ್ಲವೇ?


ಕಾಂಗ್ರೆಸ್ ತನ್ನದೇ ತಪ್ಪುಗಳಿಂದ ಅವನತಿಯ ಹಾದಿ ಹಿಡಿದಿದೆ - ಅರುಣ್ ಸಿಂಗ್, ಬಿಜೆಪಿ ರಾಜ್ಯ ಉಸ್ತುವಾರಿ

ಅವನತಿಯ ಪಾತಾಳದಲ್ಲಿರುವವರು, ಇನ್ನೊಬ್ಬರ ಬಗ್ಗೆ ಅವರು ಅವನತಿಯ ಹಾದಿಯಲ್ಲಿದ್ದಾರೆ ಎನ್ನುವುದು ಪ್ರಶಂಸೆಯಂತೆ ಕೇಳಿಸುತ್ತದೆ.


ಎಲ್ಲ ಪಕ್ಷಗಳಿಗೂ ಬಿಕ್ಕಟ್ಟಿನ ಸಮಯದಲ್ಲಿ ಮಾತ್ರ ದಲಿತರು ನೆನಪಾಗುತ್ತಾರೆ - ಮಾಯಾವತಿ, ಬಿಎಸ್ಪಿ ನಾಯಕಿ

ಕನಿಷ್ಠ ನೀವೊಬ್ಬರಾದರೂ ಸ್ವಲ್ಪ ಭಿನ್ನರಾಗಿದ್ದರೆ ಎಷ್ಟು ಚೆನ್ನಾಗಿತ್ತು! ನೀವಂತೂ ಚುನಾವಣಾ ವರ್ಷದಲ್ಲೂ ಮೇಲ್ಜಾತಿಯವರನ್ನು ಓಲೈಸುವುದರಲ್ಲಿ ನಿರತರಾಗಿದ್ದೀರಿ.


ಕೇಂದ್ರ ಸರಕಾರದ ಕೃಷಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಪ್ರಾಯೋಜಿತವಾದುದು - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
  ಈ ಪ್ರತಿಭಟನೆಯನ್ನು ಸಂತ್ರಸ್ತ ರೈತರು ಪ್ರಾಯೋಜಿಸಿ ದ್ದಾರೆಂಬುದನ್ನು ರೈತರೇ ಒಪ್ಪಿಕೊಂಡಿದ್ದಾರಲ್ಲವೇ!


ನಾಡಗೀತೆಯನ್ನು ಎಷ್ಟು ಸಮಯದೊಳಗೆ ಹಾಡಬೇಕು ಹಾಗೂ ಯಾವ ದಾಟಿಯಲ್ಲಿ ಹಾಡಬೇಕು ಎಂಬುದನ್ನು ನಿರ್ಧರಿಸಲು ಪರಿಣಿತರ ಸಮಿತಿ ರಚಿಸಲಾಗಿದೆ - ಸುನೀಲ್ ಕುಮಾರ್, ಸಚಿವ
  ಆ ಒಂದು ಕಾರ್ಯ ಆಗಿ ಬಿಟ್ಟರೆ ಮತ್ತೆ ಬೆಲೆ ಏರಿಕೆ, ನಿರುದ್ಯೋಗ ಭ್ರಷ್ಟಾಚಾರ ಇತ್ಯಾದಿಗಳ ಇತಿ ಮಿತಿ ನಿರ್ಧರಿಸುವುದಕ್ಕೆ ಯಾವುದೇ ಕ್ರಮದ ಅಗತ್ಯವಿರುವುದಿಲ್ಲ.


ವಿಶ್ವ ಎರಡು ವಿಭಾಗವಾಗಿ ವಿಂಗಡನೆ ಆಗುವುದನ್ನು ಅಮೆರಿಕ ಬಯಸುವುದಿಲ್ಲ - ಜೋ ಬೈಡನ್, ಅಮೆರಿಕ ಅಧ್ಯಕ್ಷ
  ವಿಶ್ವವನ್ನು ಛಿದ್ರಗೊಳಿಸುವುದೇ ಗುರಿಯಾಗಿರುವಾಗ ಎರಡು ಅಥವಾ ಮೂರು ವಿಭಾಗಗಳಿಂದ ಎಲ್ಲಿ ತೃಪ್ತಿ ಸಿಗುತ್ತದೆ? 


 
ನಮ್ಮ ಪಕ್ಷದ ಶಾಸಕರಿಗೆ ಬಿಡಿಗಾಸೂ ಅನುದಾನ ನೀಡುತ್ತಿಲ್ಲ - ಎಚ್.ಡಿ.ರೇವಣ್ಣ, ಜೆಡಿಎಸ್ ಶಾಸಕ

ಅವರೆಲ್ಲಾ ಪಕ್ಷಾಂತರಕ್ಕೆ ಸಿದ್ಧರಾಗಲಿ - ಅನುದಾನದ ಮಳೆ ಸುರಿಯಲಾರಂಭಿಸುತ್ತದೆ.


ಆಮಿಷವೊಡ್ಡಿ ನನ್ನ ಅಮ್ಮನನ್ನೇ ಮತಾಂತರ ಮಾಡಲಾಗಿದೆ - ಗೂಳಿಹಟ್ಟಿ ಶೇಖರ್, ಶಾಸಕ


ಮಗನ ಮೇಲೆ ನಂಬಿಕೆ ಕಳೆದುಕೊಂಡ ಅಮ್ಮ ಇರಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರಿಂದಲೇ ನಾನು ಎರಡು ಬಾರಿ ವಿಧಾನ ಸಭೆಗೆ ಆಯ್ಕೆಯಾಗಿ ಬಂದಿದ್ದೇನೆ - ಶಿವಲಿಂಗೇಗೌಡ, ಜೆಡಿಎಸ್ ಶಾಸಕ

ಪಕ್ಷಾಂತರಕ್ಕೆ ಒಳ್ಳೆಯ ಮುನ್ನುಡಿ.


  ಅಸ್ಸಾಂ ಮತ್ತೊಂದು ಕಾಶ್ಮೀರವಾಗುತ್ತಿದೆ- ಹಿಮಂತ್ ಬಿಸ್ವ, ಅಸ್ಸಾಂ ಮುಖ್ಯಮಂತ್ರಿ

  ಬೇರೆ ಪಕ್ಷಗಳ ಆಡಳಿತವಿದ್ದಾಗ ಹಾಗಿರಲಿಲ್ಲವಲ್ಲಾ!


ಜೂಜುಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ - ಆರಗ ಜ್ಞಾನೇಂದ್ರ, ಗೃಹ ಸಚಿವ

ಹಾಗಾದಲ್ಲಿ ರಾಜಕಾರಣಿಗಳು ಜೂಜಾಡುವುದಕ್ಕೆ ವಿದೇಶಕ್ಕೆ ಹೋಗುವ ಪರಿಸ್ಥಿತಿ ಬಂದೀತು.


ಯೋಗವು ನಮ್ಮಲ್ಲಿ ಇಲ್ಲದಿರುವ ಕುಶಲತೆಗಳನ್ನು ಪಡೆಯಲು ಸಹಾಯ ಮಾಡುತ್ತದೆ - ಶ್ರೀರವಿಶಂಕರ ಗುರೂಜಿ, ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕ

ನಿಮ್ಮಲ್ಲಿ ಕುಶಲತೆ ಇಲ್ಲದಿದ್ದರೂ ಯೋಗದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬಾಚಿದ್ದೇ ಅದಕ್ಕೆ ಉದಾಹರಣೆ.


ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ? - ಉಮಾಭಾರತಿ, ಬಿಜೆಪಿ ನಾಯಕಿ
  ಅಂದರೆ ಹಿಂಸೆಯೇ ಭಾಷೆಯಾಗಿರುವ ಪರಿವಾರವನ್ನು ತೊರೆಯುತ್ತೀರಾ?


ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲಾಗುವುದು -ನಾರಾಯಣಗೌಡ, ಸಚಿವ

ಎತ್ತಿದ ಗುಂಡುಕಲ್ಲನ್ನು ರಾಜಕಾರಣಿಗಳ ತಲೆಗೆ ಹಾಕಿದರೆ ಅದಕ್ಕೆ ಒಂದು ಸಾವಿರ ಸೇರಿಸಿ ಕೊಡಲು ಜನರು ಸಿದ್ಧರಿದ್ದಾರೆ.


ಕಾಂಗ್ರೆಸ್‌ನ 20 ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದು, ಅವರಿಗೆ ಬಲೆ ಹಾಕಿ ಸೆಳೆಯುವ ಕೆಲಸವನ್ನು ಸಚಿವ ಮುನಿರತ್ನರಿಗೆ ನೀಡಲಾಗಿದೆ - ನಳಿನ್‌ಕುಮಾರ್ ಕಟೀಲು, ಸಂಸದ

ಬಲೆಯ ಜೊತೆಗೆ ಬೆಲೆಯೂ ನಿಗದಿಯಾಗಿರಬೇಕು.


ಮುಂದಿನ ವಿಧಾನ ಸಭೆ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಎರಡು ಹೋಳಾಗಲಿದೆ - ಕೆ.ಎಸ್.ಈಶ್ವರಪ್ಪ, ಸಚಿವ

ನೀವು ಯಾವ ಹೋಳಿನ ಜೊತೆ ಸೇರಲಿದ್ದೀರಿ?


ನಾನು ಗೃಹ ಸಚಿವನಾಗಿದ್ದರೆ ಮೈಸೂರು ಯುವತಿ ಅತ್ಯಾಚಾರಿ ಆರೋಪಿಗಳನ್ನು ತೆಲಂಗಾಣ ಮಾದರಿಯಲ್ಲಿ ಎನ್‌ಕೌಂಟರ್ ಮಾಡಿಸುತ್ತಿದ್ದೆ - ಸಾ.ರಾ.ಮಹೇಶ್, ಶಾಸಕ

ಒಟ್ಟಿನಲ್ಲಿ ನೀವು ಗೃಹ ಸಚಿವರಾಗಿದ್ದರೂ ಅತ್ಯಾಚಾರ ನಡೆಯುತ್ತಿತ್ತು ಎನ್ನುವುದನ್ನು ಒಪ್ಪಿಕೊಂಡಿರಿ.


ವಲಸಿಗ ಭಾರತೀಯ ಸಮುದಾಯವೇ ನಮ್ಮ ಶಕ್ತಿ - ನರೇಂದ್ರ ಮೋದಿ, ಪ್ರಧಾನಿ

 ಹಾಗಾದರೆ ಶಕ್ತಿ ವರ್ಧನೆಗಾಗಿ ಭಾರತೀಯರನ್ನೆಲ್ಲ ವಿದೇಶಗಳಿಗೆ ಸಾಗಹಾಕಿ ಅವರನ್ನು ವಲಸಿಗರಾಗಿ ಪರಿವರ್ತಿಸಲಾಗುವುದೇ?


ರಾಜ್ಯದಲ್ಲಿ ಕೊರೋನ ಮೂರನೇ ಅಲೆ ಎದುರಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ - ಡಾ.ಸುಧಾಕರ, ಸಚಿ
  ಅಂದರೆ ಆಸ್ಪತ್ರೆಗಳೆಲ್ಲಾ ದರೋಡೆಗೆ ಸನ್ನದ್ಧವಾಗಿವೆಯೇ?


ಜಿಎಸ್ಟಿ ವ್ಯಾಪ್ತಿಗೆ ಇಂಧನಗಳನ್ನು ತರಲು ರಾಜ್ಯಗಳು ಒಪ್ಪುತ್ತಿಲ್ಲ ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಳಿಯುತ್ತಿಲ್ಲ - ಹರದೀಪ್ ಸಿಂಗ್ ಪುರಿ, ಕೇಂದ್ರ ಸಚಿವ
  ಜನರು ಇಂಧನ ಬಳಕೆಯನ್ನೇ ನಿಲ್ಲಿಸಿಬಿಟ್ಟರೆ ಇಂಧನ ಬೆಲೆ ಖಂಡಿತ ಕುಸಿಯುತ್ತದೆ. ಮೂರ್ಖ ಜನರಿಗೆ ಇದೆಲ್ಲಾ ಅರ್ಥವಾಗುತ್ತಿಲ್ಲವೇಕೆ?


ಗೋವಿನ ಸೌಂದರ್ಯಕ್ಕೆ ವಿಶ್ವದ ಯಾವ ಸೌಂದರ್ಯ ಸ್ಪರ್ಧೆಯೂ ಸಾಟಿಯಲ್ಲ -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನೀವಿನ್ನೂ ಹೋರಿಗಳ ಸೌಂದರ್ಯ ನೋಡಿಲ್ಲ.


ಸಿದ್ದುಗೆ ಅಧಿಕಾರ ಸಿಕ್ಕರೆ ಪಂಜಾಬನ್ನು ಮುಳುಗಿಸುವುದು ಗ್ಯಾರೆಂಟಿ - ಕ್ಯಾ.ಅಮರೀಂದರ್ ಸಿಂಗ್, ಪಂಜಾಬ್ ಮಾಜಿ ಸಿಎಂ

ಈ ರೀತಿ ತನ್ನನ್ನು ಮೋದಿಗೆ ಹೋಲಿಸಿದ್ದನ್ನು ಕೇಳಿದ ಸಿದ್ದು ಕೆರಳಿ ಕೆಂಡವಾಗಿ ರುದ್ರ ನೃತ್ಯ ಆರಂಭಿಸಿದ್ದಾರಂತೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...