"ನಮ್ಮ ಪಕ್ಷದ ಸೋತ ಅಭ್ಯರ್ಥಿಗಳಿಗೆ ಅನ್ಯ ಪಕ್ಷಗಳು ಗಾಳ ಹಾಕುತ್ತಿವೆ, ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ":ಎಚ್ ಡಿಕೆ

Update: 2021-09-27 14:37 GMT

ಬೆಂಗಳೂರು, ಸೆ.27: ಪಕ್ಷದಿಂದ ಹೊರಗೆ ಕಾಲಿಟ್ಟಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಹೋಗಬೇಕು ಎಂದುಕೊಂಡವರು ಹೋಗಬಹುದು. ಅಲ್ಲದೆ, ಕಳೆದ ಬಾರಿಯ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಸೆಳೆಯುವ ಕೆಲಸ ಕೆಲವರಿಂದ ಆಗುತ್ತಿದೆ. ಹೀಗಾಗಿ ನಾನು ಅಂತ ಕೆಲ ಅಭ್ಯರ್ಥಿಗಳನ್ನು ಕಾರ್ಯಾಗಾರಕ್ಕೆ ಕರೆದಿಲ್ಲ. ಅಂಥ ಕಡೆಯಲ್ಲ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ನಗರದ ಹೊರವಲಯದಲ್ಲಿರುವ ಬಿಡದಿ ಫಾರ್ಮ್ ಹೌಸ್‍ನಲ್ಲಿ ಆಯೋಜಿಸಲಾಗಿದ್ದ ಜನತಾ ಪರ್ವ 1.0 ಹಾಗೂ ಮಿಷನ್ 123ಗಾಗಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾರ್ಯಾಗಾರದ ಮೊದಲ ದಿನದ ಅಂತ್ಯದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಪಕ್ಷ ಬಿಡಬೇಕು ಅಂದುಕೊಂಡವರಿಗೆ ಅದೊಂದು ನೆಪ ಅಷ್ಟೇ ನಾನು ಯಾರನ್ನೂ ಕಡೆಗಣಿಸಿಲ್ಲ. ಜನ ಸಾಮಾನ್ಯರ ಕಷ್ಟವನ್ನೇ ಕೇಳುವವನು ನಾನು. ನಮ್ಮ ಶಾಸಕರ ಕಷ್ಟ ಕೇಳಲ್ವಾ? ಪಕ್ಷ ಬಿಡಬೇಕು ಅಂದುಕೊಂಡವರು ನೀಡುವ ಸಬೂಬು ಇದು ಅಷ್ಟೇ ಎಂದು ಅವರು ದೂರಿದರು.

ಪಕ್ಷ ಬಲವಾಗುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಇಂಥ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಸಮಯ ಇದಲ್ಲ. ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಪಕ್ಷದ ಸಂಘಟನೆ ಹಾಗೂ ಬೆಳವಣಿಗೆ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಹಲವಾರು ಆಯಾಮಗಳಲ್ಲಿ ತರಬೇತಿ ಕೊಡುವ ಕಾರ್ಯಕ್ರಮ ಇದಾಗಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ತರಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಾಗಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಸುದೀರ್ಘ ರಾಜಕೀಯದ ದಾರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದು ಮುಂದಿನ ಚುನಾವಣೆ ಅಭ್ಯರ್ಥಿಗಳಿಗೆ ದಾರಿದೀಪವಾಗಲಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಇರುವ ಚುನಾವಣೆ ಪದ್ಧತಿ ಬದಲಾಗಿದ್ದು, ಜಾತ್ಯತೀತ ಜನತಾದಳಕ್ಕೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಪಕ್ಷದ ಸಂಘಟನೆಗೆ ಹೊಸ ರೀತಿಯಾಗಿ ಸಜ್ಜಾಗುತ್ತಿದ್ದೇವೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದು, ಮುಂದಿನ ಚುನಾವಣೆಗೆ ಸಕಲ ರೀತಿಯ ಸಿದ್ಧತೆಗಳು ಆಗಿವೆ ಎಂದು ಕುಮಾರಸ್ವಾಮಿ ಹೇಳಿದರು.

ಅಭ್ಯರ್ಥಿಗಳಿಗೆ ಪ್ರಶ್ನಾವಳಿ: ಮೊದಲ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳೆಲ್ಲರಿಗೂ ಪ್ರಶ್ನಾವಳಿಯ ಕಿರು ಹೊತ್ತಿಗೆ ನೀಡಲಾಗಿತ್ತು. ಪ್ರತಿಯೊಬ್ಬರು ಆಸಕ್ತಿಯಿಂದ ಬರೆದಿದ್ದಾರೆ. ಅವರವರ ಕ್ಷೇತ್ರಗಳಿಗೆ ಯಾವ ರೀತಿ ಒತ್ತು ಕೊಟ್ಟಿದ್ದಾರೆ. ಅವರಿಗಿರುವ ಅಡೆತಡೆಗಳು ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಉತ್ತರ ನೀಡಿದ್ದಾರೆ. ಒಟ್ಟು 61 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅಭ್ಯರ್ಥಿಗಳಾಗಿ ಏನು ಸಿದ್ಧತೆ ಮಾಡಿಕೊಂಡಿದ್ದಾರೆ ಅನ್ನೋದನ್ನು ಅವರು ಬರೆದಿದ್ದಾರೆ ಎಂದು ಕುಮಾರಸ್ವಾಮಿ ವಿವರಿಸಿದರು.

ನಾಳೆಯ ದಿನದ ಕಾರ್ಯಾಗಾರದಲ್ಲಿ ಪಂಚರತ್ನ ಕಾರ್ಯಕ್ರಮದ ಬಗ್ಗೆ ಜನತೆ ಮುಂದೆ ತೆಗೆದುಕೊಂಡು ಹೋಗುವುದು ಹೇಗೆ? ಮಿಷನ್ 123 ಪ್ಲಸ್‍ಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಕಾರ್ಯಕ್ರಮ ಇರಲಿದೆ ಎಂದು ಅವರು ಹೇಳಿದರು.

ಚುನಾವಣೆಗೆ 18 ತಿಂಗಳು ಬಾಕಿ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಕ್ರಮ ವಹಿಸಲಾಗಿದೆ. ಈ ಸಮಯದಲ್ಲಿ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡುವೆ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News