ನಕಲಿ ಕಾರ್ಮಿಕರ ನೋಂದಣಿ ರದ್ದುಗೊಳಿಸಿ: ರಾಮಲಿಂಗಾ ರೆಡ್ಡಿ

Update: 2021-09-27 18:10 GMT

ಬೆಂಗಳೂರು, ಸೆ.27: ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಭಾರೀ ಅಕ್ರಮಗಳ ವಿರುದ್ಧ ತನಿಖೆ ನಡೆಸಬೇಕು. ಭ್ರಷ್ಟರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೆಪಿಸಿಸಿ ಕಾರ್ಮಿಕ ವಿಭಾಗ ಪದಾಧಿಕಾರಿಗಳು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಮುಂಭಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಕಲ್ಯಾಣ ಮಂಡಳಿ ನೈಜ ಕಾರ್ಮಿಕರಿಂದ ದೂರವಾಗುತ್ತಿದ್ದು, ಕಾರ್ಮಿಕರಿಗೆ ಸೂಕ್ತ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಮಂಡಳಿಯಲ್ಲಿ ನಕಲಿ ಕಾರ್ಮಿಕರು ನುಸುಳುತ್ತಿದ್ದು, ಇದನ್ನು ತಡೆಯದಿದ್ದರೆ ಇಡೀ ಮಂಡಳಿ ದಿವಾಳಿಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಮಂಡಳಿಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಕಾರ್ಮಿಕರ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ. ಸಂಕಷ್ಟದಲ್ಲಿರುವವರಿಗೆ ಸೂಕ್ತ ನೆರವು ನೀಡುತ್ತಿಲ್ಲ. ಕಟ್ಟಡ ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸಬೇಕಾದ ಮಂಡಳಿ ಗುತ್ತಿಗೆದಾರರು, ರಾಜಕಾರಣಿಗಳ ಮರ್ಜಿಯಂತೆ ಕೆಲಸ ಮಾಡುತ್ತಿದೆ. ಇದರಿಂದ ನೈಜ ಕಾರ್ಮಿಕರಿಗೆ ಪರಮ ಅನ್ಯಾಯವಾಗಿದೆ ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಸಿ.ಎಸ್.ಸಿ ಸೆಂಟರ್ ಮಾಲಕರು ಕಟ್ಟಡ ಕಾರ್ಮಿಕರಲ್ಲದವರನ್ನು ನಕಲಿ ಮಾಲಕರ ಸಹಿಯೊಂದಿಗೆ ನೋಂದಣಿ ಮಾಡಿಸುತ್ತಿದ್ದು, ಇದರಿಂದ ಮಂಡಳಿಗೆ ನಕಲಿ ಫಲಾನುಭವಿಗಳು ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ತಕ್ಷಣ ಸಿ.ಎಸ್.ಸಿ ಸೆಂಟರ್‍ಗಳಲ್ಲಿ ನೋಂದಣಿ ನಿಲ್ಲಿಸಬೇಕು. ಇಲ್ಲಿ ಈಗಾಗಲೇ ನೀಡಿರುವ ನೋಂದಣಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಬೇಕು. ಕಾರ್ಮಿಕ ಕಚೇರಿ ಹಾಗೂ ಟ್ರೇಡ್ ಯೂನಿಯನ್ ಮುಖಾಂತರ ನೋಂದಣಿ ಪ್ರಕ್ರಿಯೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಮಾತನಾಡಿ, 2019ರ ಜನವರಿಯಿಂದ 2021ರ ಆಗಸ್ಟ್‍ವರೆಗೆ ಆಹಾರ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಪ್ರತಿರಕ್ಷಣಾ ಕಿಟ್ ಹಾಗೂ ಹಿರಿಯ, ಕಾರ್ಮಿಕ ನಿರೀಕ್ಷಕರ ಕಚೇರಿಗಳಿಗೆ ನೀಡಿರುವ ಟಿ.ವಿ.ಗಳು ಹಾಗೂ ಮಂಡಳಿಗೆ ಖರೀದಿಸಿರುವ ವಾಹನಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು ಎಂದರು.

ಮೊದಲ ಮತ್ತು ಎರಡನೇ ಅಲೆಯಲ್ಲಿ ಘೋಷಿಸಿದ ಪರಿಹಾರ ವಿತರಣೆಯಾಗಿಲ್ಲ. ಮದುವೆ ಧನ ಸಹಾಯವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಬೇಕು, ತಾಯಿ ಲಕ್ಷ್ಮಿ ಬಾಂಡ್ ಅನ್ನು ರದ್ದುಗೊಳಿಸಬೇಕು ಹಾಗೂ ಹೆರಿಗೆ ಸೌಲಭ್ಯವನ್ನು ಮಹಿಳಾ ಫಲಾನುಭವಿಯ ಖಾತೆಗೆ ನೇರವಾಗಿ ಜಮಾ ಮಾಡಬೇಕು ಎಂದು ಅವರು ಹೇಳಿದರು.

ಪಿಂಚಣಿ ಸೌಲಭ್ಯವನ್ನು 5 ಸಾವಿರ ರೂ.ಗೆ ಹೆಚ್ಚಿಸುವ ಜತೆಗೆ ಕಚೇರಿಗಳಲ್ಲಿ ಪಿಂಚಣಿ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು. ಅಪಘಾತ ವಿಮೆ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು. ಸ್ವಾಭಾವಿಕ ಮರಣದ ಧನ ಸಹಾಯವನ್ನು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು. ವಸತಿ ಸೌಲಭ್ಯವನ್ನು 5 ಲಕ್ಷ ರೂ.ಗೆ ಹೆಚ್ಚಿಸಿ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಜಾರಿಗೊಳಿಸಬೇಕು. ಕಾರ್ಮಿಕರು ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರು ಕಾರ್ಮಿಕರಿಗೆ ಧನ ಸಹಾಯವನ್ನು ಮಂಜೂರು ಮಾಡಿಲ್ಲ ಎಂದು ಅವರು ತಿಳಿಸಿದರು.

ಅರ್ಜಿ ಸಲ್ಲಿಸುವ ಸೇವಾ ಸಿಂಧು ವೆಬ್‍ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಸೆಸ್ ಹಣ ಬಳಕೆಯಾಗಬೇಕು. ಖಾಸಗಿ ವಾಹನ ಚಾಲಕರಿಗೆ ನೀಡುವ ಅಪಘಾತ ಪರಿಹಾರ ಮೊತ್ತವನ್ನು ಹತ್ತು ಲಕ್ಷ ರೂ.ಗೆ ಏರಿಕೆ ಮಾಡಬೇಕು. ಖಾಸಗಿ ವಾಣಿಜ್ಯ ವಾಹನಗಳಿಗೆ ಒಂದು ವರ್ಷದ ತೆರಿಗೆ ವಿನಾಯಿತಿ ನೀಡಬೇಕು ಎಂದು ಪುಟ್ಟಸ್ವಾಮಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಿ.ಆರ್.ದಿನೇಶ್, ಶ್ರೀಕಾಂತ್, ಬಾಲರಾಜ್ ಗೌಡ, ಉಪಾಧ್ಯಕ್ಷ ಕೆ.ಸಿ.ಹರಿಣಿ ಗೌಡ, ಜಿಲ್ಲಾಧ್ಯಕ್ಷ ಸತ್ಯನಾರಾಯಣ, ತ್ರಿಭುವನ್ ಗೌಡ, ಇಮ್ರಾನ್ ಖಾನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News