ಬಿಜೆಪಿಯದ್ದು ತಾಲಿಬಾನ್ ಸಂಸ್ಕೃತಿ: ಕಾಂಗ್ರೆಸ್ ಕಿಡಿ

Update: 2021-09-28 18:14 GMT

ಬೆಂಗಳೂರು, ಸೆ.28: ಮಹಿಳೆಯರು ಹೊರಬರದಂತೆ ಫಾರ್ಮಾನು ಹೊರಡಿಸುವುದು, ಅಕ್ಕಿ ಕೇಳಿದವರಿಗೆ ಹೋಗಿ ಸಾಯಿರಿ ಎನ್ನುವುದೇ ಬಿಜೆಪಿಯ ತಾಲಿಬಾನ್ ಸಂಸ್ಕøತಿ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಗಟ್ಟಿಯಾಗಿ ಸ್ಥಾಪಿಸಿದೆ, ನಿಮ್ಮ ತಾಲಿಬಾನ್ ಸಂಸ್ಕೃತಿಯ ಆಟ ನಡೆಯದು. ಅಂದಹಾಗೆ ತಾವು ಸದಾ ನಶೆಯಲ್ಲಿರಬೇಡಿ, ಇನ್ನಷ್ಟು ಜೀವಗಳನ್ನು ತೆಗೆಯಬೇಡಿ ಸಿ.ಟಿ.ರವಿ ಎಂದು ಕಾಂಗ್ರೆಸ್ ಕಿಡಿಗಾರಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ‘ಗುಂಡು' ಹಾಕುವುದು, ‘ಗುಂಡು' ಹಾರಿಸುವುದು ಬಿಜೆಪಿಯ ತಾಲಿಬಾನ್ ಸಂಸ್ಕೃತಿಯ ಭಾಗ. ಕೊರೋನಾಶಿರ್ವಾದಯಾತ್ರೆ ನಡೆಸಿ ಅಕ್ರಮ ಬಂದೂಕಿನಲ್ಲಿ ಗುಂಡು ಹಾರಿಸಿದ್ದು, ನಶೆಯಲ್ಲಿ ಕಾರು ಗುದ್ದಿಸಿ ಯುವಕರಿಬ್ಬರನ್ನ ಕೊಂದು ಅವರ ಕುಟುಂಬಕ್ಕೆ ಬೆದರಿಕೆಯೊಡ್ಡಿ ಸುಮ್ಮನಿರಿಸಿದ್ದು ನಿಮ್ಮ ಹಾಗೂ ನಿಮ್ಮ ಪಕ್ಷದ ತಾಲಿಬಾನ್ ಸಂಸ್ಕೃತಿಯಲ್ಲವೇ ಸಿ.ಟಿ.ರವಿ? ಎಂದು ಪ್ರಶ್ನಿಸಿದೆ.

ಸರ್ದಾರ್ ಪಟೇಲರಿಂದ ಭಾರತದಲ್ಲಿ ನಿಷೇಧಿಸಲ್ಪಟ್ಟ ಮೊದಲ ಸಂಘಟನೆಯಾದ ಆರೆಸೆಸ್ಸ್ ಎಂಬ ದೇಶವಿರೋಧಿ ಸಂಘಟನೆ ಐಸಿಸ್‍ನಷ್ಟೇ ಅಪಾಯಕಾರಿ. ಬಿಜೆಪಿ ಪಕ್ಷ ಹಾಗೂ ತಾಲಿಬಾನ್ ಒಂದೇ ನಾಣ್ಯದ ಎರಡು ಮುಖಗಳು. ಇವೆರೆಡೂ ದೇಶವಿರೋಧಿಗಳ ಕೂಟ, ಪಟೇಲರು ಇಂದು ಇದ್ದಿದ್ದರೆ ಆರೆಸೆಸ್ಸ್‍ನಂತೆಯೇ ಬಿಜೆಪಿಯನ್ನೂ ನಿಷೇಧಿಸುತ್ತಿದ್ದರು ಎಂದು ಕಾಂಗ್ರೆಸ್ ಹೇಳಿದೆ.

ಪ್ರತಿ ಬಿಜೆಪಿಗನೂ ಆರೆಸೆಸ್ಸ್ ಅನ್ನು ಒಪ್ಪಲೇಬೇಕು. ಯಾವ ಬಿಜೆಪಿಗನೂ ಮೋದಿ-ಶಾ ಜೋಡಿಯ ಯಾವುದೇ ತಪ್ಪುಗಳನ್ನು ವಿರೋಧಿಸಲಾಗದು. ಪ್ರತಿ ಬಿಜೆಪಿಗನೂ ಮೋದಿ ಮುಖಸ್ತುತಿ ಮಾಡುವುದು ಕಡ್ಡಾಯ. ಪ್ರತಿ ಬಿಜೆಪಿಗನೂ ಮೊ-ಶಾ ಜೋಡಿಯ ಮುಂದೆ ಕೈಕಟ್ಟಿ ನಿಲ್ಲಲೇಬೇಕು. ಬಿಜೆಪಿ ಪಕ್ಷ ಗುಲಾಮರನ್ನ ಸೃಷ್ಟಿಸುತ್ತದೆಯೇ ಹೊರತು ನಾಯಕರನ್ನಲ್ಲ ಎಂದು ಕಾಂಗ್ರೆಸ್ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News