×
Ad

ರೇಖಾ ಕದಿರೇಶ್ ಕೊಲೆ ಪ್ರಕರಣ: ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ ಪೊಲೀಸರು

Update: 2021-09-29 18:53 IST
 ರೇಖಾ ಕದಿರೇಶ್

ಬೆಂಗಳೂರು, ಸೆ.29: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್(45) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್‍ಪೇಟೆ ಠಾಣೆ ಪೊಲೀಸರು ನಗರದ 31ನೆ ಎಸಿಎಂಎಂ ಕೋರ್ಟ್‍ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಪತಿಯ ಸಹೋದರಿ ಮಾಲಾ ಸೇರಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈ ಎಲ್ಲ ಆರೋಪಿಗಳ ವಿರುದ್ಧ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಆಂಜನಪ್ಪ ಗಾರ್ಡನ್ ನಿವಾಸಿ, ಮಾಜಿ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್(43) ಅವರು ಕಳೆದ ಜೂನ್ 24ರಂದು ಬೆಳಗ್ಗೆ 10.30ರ ಸುಮಾರಿನಲ್ಲಿ ದಿನಸಿ ಕಿಟ್‍ಗಳನ್ನು ವಿತರಿಸಿ ಕಚೇರಿಯಿಂದ ಮನೆಗೆ ತೆರಳುವಾಗ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಕಾಟನ್‍ಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿ ಮೊದಲು ಇಬ್ಬರು ಆರೋಪಿಗಳನ್ನು ಬಂಧುಸಿ ವಿಚಾರಣೆ ನಡೆಸಿ ನಂತರ ಉಳಿದ ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳಾದ ಆಂಜನಪ್ಪ ಗಾರ್ಡನ್ ನಿವಾಸಿ ರೇಖಾ ಕದಿರೇಶ್ ಅವರ ಪತಿಯ ಸಹೋದರಿ ಮಾಲಾ(60) ಮತ್ತು ಪೀಟರ್(46), ಸೂರ್ಯ(20), ಸ್ಟೀಫನ್(21), ಪುರುಷೋತ್ತಮ್(22), ಅಜಯ್(21), ಅರುಣ್‍ಕುಮಾರ್(36) ಮತ್ತು ಸಿಲ್ವರಾಜ್(36) ಎಂಬುವರ ವಿರುದ್ಧ ಕಾಟನ್‍ಪೇಟೆ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಾದ ಮಾಲಾ ಮತ್ತು ಸೆಲ್ವರಾಜ್ ಅವರು ಜಾಮೀನು ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇವರಿಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News