ಸರಕಾರಿ ಉದ್ಯೋಗ ಹೆಸರಿನಲ್ಲಿ ವಂಚನೆ ಆರೋಪ: ಸರಕಾರಿ ನೌಕರಿಬ್ಬರ ಸೆರೆ
ಬೆಂಗಳೂರು, ಸೆ.29: ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ಉದ್ಯೋಗದ ಆಮಿಷವೊಡ್ಡಿ 50 ಮಂದಿಯಿಂದ 1.61 ಕೋಟಿ ರೂ. ವಸೂಲಿ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರು ಸರಕಾರಿ ನೌಕರರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿವಿಚಾರಣೆಗೊಳಪಡಿಸಿದ್ದಾರೆ.
ಸರಕಾರದ ಒಳಾಡಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾಗಿದ್ದ ಶ್ರೀಲೇಖಾ ಮತ್ತು ವಿಧಾನಸೌಧದಲ್ಲಿ ಗ್ರೂಪ್ ಡಿ ನೌಕರ ಮೋಹನ್ ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?: 2019ನೆ ಸಾಲಿನಲ್ಲಿ ತಮ್ಮನ್ನು ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರೆಂದು ಪರಿಚಯಿಸಿಕೊಂಡ ರಾಧಾ ಉಮೇಶ್ ಎಂಬಾಕೆ ತಮಗೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ಕಾರ್ಮಿಕರ ಬಗೆಗಿನ ಕೆಲಸಗಳನ್ನು ಅವರಿಂದ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಗಮನಿಸಿದ ಮಂಜುನಾಥ್ ಎಂಬುವವರು ಅವರ ತಮ್ಮನಿಗೆ ಯಾವುದೇ ಉದ್ಯೋಗವಿಲ್ಲದ ಕಾರಣ ಆತನಿಗೆ ಸಚಿವಾಲಯದಲ್ಲಿ ದಿನಗೂಲಿ ನೌಕರರ ಏಜೆನ್ಸಿ ಕೊಡಿಸಿಕೊಡಿ ಎಂದು ಕೇಳಿದ್ದರು. ಇದಕ್ಕಾಗಿ ತುಂಬಾ ಹಣ ಖರ್ಚಾಗುತ್ತದೆ ಎಂದು ಹೇಳಿ ಮಂಜುನಾಥ್ ಅವರಿಂದ 4 ಕಂತುಗಳಲ್ಲಿ 15 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಏಜೆನ್ಸಿಯ ಬಗ್ಗೆ ಮಂಜುನಾಥ್ ಅವರು ಪ್ರಶ್ನಿಸಿದಾಗ, ತಮಗೆ ಸರಕಾರಿ ಒಳಾಡಳಿತ ಇಲಾಖೆಯಲ್ಲಿ ಕಡತ ನಿರ್ವಾಹಕರಾಗಿರುವ ಶ್ರೀಲೇಖಾ ಎಂಬುವವರ ಪರಿಚಯವಿದೆ, ಅವರು ನಿಮ್ಮ ಏಜೆನ್ಸಿ ಕೆಲಸ ಮಾಡಿಕೊಡುತ್ತಾರೆ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ.
ಶ್ರೀಲೇಖಾ ಅವರು ಏಜೆನ್ಸಿ ಕೊಡಿಸಲು ತಡವಾಗಲಿದ್ದು, ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕಿರಿಯ ಸಹಾಯಕರು, ಹಿರಿಯ ಸಹಾಯಕರು ಮತ್ತು ಅಧೀಕ್ಷಕರ ಹುದ್ದೆಗಳ ನೇಮಕಾತಿಗಳನ್ನು ನಿಮಗೆ ಪರಿಚಯವಿರುವವರಿಗೆ ಮಾಡಿಸಿಕೊಡುತ್ತೇನೆಂದು ನಂಬಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ನಂಬಿದ ಮಂಜುನಾಥ್ ಅವರು ಉದ್ಯೋಗಾಕಾಂಕ್ಷಿಗಳಿಗೆ ಸರಕಾರಿ ಉದ್ಯೋಗ ಕೊಡಿಸಬಹುದು ಎಂದು ಸುಮಾರು 55 ಮಂದಿಯನ್ನು ಸಂಪರ್ಕಿಸಿ ಆ.15 ರಿಂದ ಸೆ.20ರವರೆಗೆ 76.54 ಲಕ್ಷ ರೂ.ಗಳನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಜತೆಗೆ, 56.40 ಲಕ್ಷ ರೂ.ಗಳನ್ನು ಶ್ರೀಲೇಖಾ ಅವರಿಗೆ ನಗದು ರೂಪದಲ್ಲಿ ಕೊಟ್ಟಿರುತ್ತಾರೆ ಎಂದು ತಿಳಿದುಬಂದಿದೆ.
ಇದಾದ ಬಳಿಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿಗಳನ್ನು ವಿಕಾಸಸೌಧದಲ್ಲಿ ಕೆಲಸ ಮಾಡುವ ಮೋಹನ್ ಎಂಬುವವರು ಮಂಜುನಾಥ್ ಅವರಿಗೆ ತಂದುಕೊಟ್ಟಿದ್ದಾರೆ. ಇತ್ತೀಚಿಗೆ ಅಲ್ಲಿನ ಸಿಬ್ಬಂದಿ ಆದೇಶ ಪತ್ರವನ್ನು ಪರಿಶೀಲಿಸಿ ಈ ರೀತಿ ಯಾವುದೇ ನೇಮಕಾತಿಗಳನ್ನು ಇಲಾಖೆಯಲ್ಲಿ ಮಾಡುತ್ತಿಲ್ಲವೆಂದು ತಿಳಿಸಿ ಇದೊಂದು ನಕಲಿ ಆದೇಶ ಪತ್ರವೆಂದು ಹೇಳಿದ್ದಾರೆ.
ತಕ್ಷಣ ಅಭ್ಯರ್ಥಿಯೊಬ್ಬರು ಮಂಜುನಾಥ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.