ವೃದ್ಧಾಶ್ರಮಗಳ ನಿರ್ವಹಣೆಗೆ ಸರಕಾರದ ಅನುದಾನ 15 ಲಕ್ಷ ರೂ.ಗಳಿಗೆ ಹೆಚ್ಚಳ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-01 13:36 GMT

ಬೆಂಗಳೂರು, ಅ. 1: `ವೃದ್ಧಾಶ್ರಮಗಳ ನಿರ್ವಹಣೆಗೆ ಕೇಂದ್ರ ಸರಕಾರದ ಅನುದಾನವನ್ನು 25 ಲಕ್ಷ ರೂ.ಗಳಿಗೆ ನಿಗದಿಪಡಿಸಿದ್ದು, ಈ ಯೋಜನೆಗೆ ರಾಜ್ಯ ಸರಕಾರದಿಂದ ನೀಡಲಾಗುತ್ತಿದ್ದ 8 ಲಕ್ಷ ರೂಪಾಯಿಗಳ ಅನುದಾನವನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶುಕ್ರವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಉದ್ಘಾಟಿಸಿ ಮಾತನಾಡಿದ ಅವರು, `ಸರಕಾರ ಬಹಳ ಸಂವೇದನಾಶೀಲವಾಗಿ ಹಿರಿಯರಿಗೆ ಸ್ಪಂದಿಸುತ್ತದೆ. ಅವರ ವೈಯಕ್ತಿಕ ಬದುಕಿಗೆ ಆತ್ಮಸ್ಥೈರ್ಯ, ಲವಲವಿಕೆ, ಜೀವಂತಿಕೆಯನ್ನು ತುಂಬುವ ಕೆಲಸ ಮಾಡಿ, ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಸರಕಾರ ನಿಮಗೆ ಆಶ್ರಯಗೋಲಾಗುತ್ತದೆ, ಆಧಾರವಾಗುತ್ತದೆ' ಎಂಬ ಭರವಸೆ ನೀಡಿದರು.

`ಹಿರಿತನ ಒಂದು ಸ್ಥಿತಿ. ವಯಸ್ಸು, ಅನುಭವ ಹಾಗೂ ನಡವಳಿಕೆಯಿಂದ ಹಿರಿತನ ತೀರ್ಮಾನವಾಗುತ್ತದೆ. ಮಾನಸಿಕವಾಗಿ ನಾವು ಗಟ್ಟಿ ಇದ್ದು, ಸಮಾಜಕ್ಕೆ ಕೊಡುಗೆ ನೀಡಬಹುದು ಎಂಬ ಮನಸ್ಥಿತಿ ಇದ್ದರೆ, ಹಿರಿತನವನ್ನು ಅರ್ಥಪೂರ್ಣವಾಗಿ ಕಳೆಯಬಹುದು. ಈ ಮನೋಸ್ಥಿತಿ ಪಡೆಯಲು ದೈಹಿಕ ಆರೋಗ್ಯ, ಕುಟುಂಬದ ವಾತಾವರಣ, ಸಮಾಜದ ಸಹಾಯ ಅಗತ್ಯ. ಹಿರಿಯರು ಸಂತೋಷವಾಗಿ, ಸುರಕ್ಷಿತವಾಗಿ ಹಾಗೂ ಆರೋಗ್ಯವಂತರಾಗಿ ಬದುಕಲು ಸಾಧ್ಯ. ಸರಕಾರ, ವ್ಯವಸ್ಥೆ, ಕುಟುಂಬ ಮತ್ತು ಸಮಾಜ ಎಂಬ ನಾಲ್ಕು ಕಂಬಗಳು ಹಿರಿಯ ಜೀವಿಗಳಿಗೆ ಆಶ್ರಯ ಕೊಡುತ್ತವೆ. ಈ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕು ಎಂದು ಅವರು ತಿಳಿಸಿದರು.

ಸ್ಥಿತಪ್ರಜ್ಞರಾಗಿ ಬದುಕನ್ನು ಎದುರಿಸಿ: `ಹಿರಿಯರ ಬದುಕಿನಲ್ಲಿ ಹಾಸ್ಯ ಟಾನಿಕ್ ಇದ್ದಂತೆ. ನಮ್ಮ ಬದುಕಿನಲ್ಲಿ ಎಲ್ಲವನ್ನೂ ನಿಯಂತ್ರಣ ಮಾಡುತ್ತೇವೆ ಎನ್ನುವುದು ತಪ್ಪು. ಸ್ಥಿತಪ್ರಜ್ಞರಾಗಿ ಬದುಕನ್ನು ಎದುರಿಸಬೇಕಾಗುತ್ತದೆ ಎಂದ ಬಸವರಾಜ ಬೊಮ್ಮಾಯಿ, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಅಗತ್ಯ. ಮಾಡಿದ್ದನ್ನು ಸರಿಯಾಗಿ ಮಾಡಿದ್ದೇನೆ ಸಂತೃಪ್ತಿಯ ಭಾವ ಇರಬೇಕು. ಆತ್ಮಚೈತನ್ಯವನ್ನು ಸದಾಕಾಲ ಜೀವಂತವಾಗಿಡಬೇಕು. ಕರ್ನಾಟಕದಲ್ಲಿನ 54ಲಕ್ಷ ಹಿರಿಯರು ಸಂತೋಷದಿಂದಿರಬೇಕು ಎನ್ನುವುದು ನನ್ನ ಆಶಯ ಎಂದು ನುಡಿದರು.

ಹಿರಿಯರು ಅನುಭವದ ಭಂಡಾರ: `ಹಿರಿಯರು ಅನುಭವದ ಭಂಡಾರ, ಸಂಪತ್ತು ಇದ್ದಂತೆ. ಈ ಸಂಪತ್ತು ನಾಡು ಕಟ್ಟುವುದರಲ್ಲಿ, ಸಮಾಜ ಕಟ್ಟಲು, ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಲು ಹಿರಿಯರ ಅನುಭವ ಬಳಕೆಯಾಗಬೇಕು. ಯಾವ ಸಮಾಜದಲ್ಲಿ ಯುವಕರು ಹಿರಿಯರನ್ನು ಗೌರವಿಸಿ ಆಧಾರವಾಗುತ್ತಾರೋ, ಆಶ್ರಯಗೋಲಾಗುತ್ತಾರೋ ಆ ಸಮಾಜ ಅತ್ಯಂತ  ಧನ್ಯತಾಪೂರ್ಣ ಸಮಾಜವಾಗುತ್ತದೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಮನೆಯಲ್ಲಿ ಹಿರಿಯರನ್ನು ಇಟ್ಟುಕೊಂಡು ಗೌರವಿಸುವುದು ಭಾರತೀಯರ ಸಂಸ್ಕøತಿ ಎಂದು ತಿಳಿಸಿದರು.  

ಈ ವೇಳೆ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿಯನ್ನು ಸಿಎಂ ಉದ್ಘಾಟಿಸಿ, ಹಿರಿಯ ನಾಗರಿಕರನ್ನು ಸನ್ಮಾನಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ, ಹಿರಿಯ ನಾಗರಿಕರ ಸಬಲಿಕರಣ ಸಚಿವ ಹಾಲಪ್ಪ ಆಚಾರ್, ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಉದಯ್ ಗರುಡಾಚಾರ್, ಪೂರ್ಣಿಮಾ ಶ್ರೀನಿವಾಸ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News