ರಾಜ್ಯದಲ್ಲಿ ಲೋಕ್ ಶಕ್ತಿ ಪಕ್ಷಕ್ಕೆ ಮತ್ತೆ ಚಾಲನೆ
ಬೆಂಗಳೂರು, ಅ.2: ರಾಜ್ಯದಲ್ಲಿ ಲೋಕ್ ಶಕ್ತಿ ಪಕ್ಷಕ್ಕೆ ಗಾಂಧಿ ಜಯಂತಿ ದಿನದಂದು ಮತ್ತೆ ಚಾಲನೆ ನೀಡಲಾಗಿದೆ.
ನಗರದ ಮೌರ್ಯ ಸರ್ಕಲ್ ಬಳಿಯ ತಾಮರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಸಮ್ಮುಖದಲ್ಲಿ ಮತ್ತೆ ಲೋಕ್ ಶಕ್ತಿ ಪಕ್ಷವನ್ನು ಸಂಘಟನೆ ಮಾಡಿ ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಸಕ್ರಿಯವಾಗಿ ಸ್ಪರ್ಧಿಸಲು ನಿರ್ಧರಿಸಲಾಯಿತು.
ರಾಜ್ಯದಲ್ಲಿನ ಇಂದಿನ ರಾಜಕೀಯ ದುಸ್ಥಿತಿ ಕಂಡು ಕರ್ನಾಟಕ ಮಣ್ಣಿನ ಹಾಗೂ ಕನ್ನಡದ ಅಸ್ಮಿತೆಯನ್ನು ಹೊಂದಿರುವ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕಬೇಕೆಂಬ ಉದ್ದೇಶದಿಂದ ಅ.2ರಂದು ಲೋಕ ಶಕ್ತಿ ಪಕ್ಷಕ್ಕೆ ಚಾಲನೆ ನೀಡಲಾಗಿದೆ.
ಲೋಕ್ ಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಿಮಾಯ, ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಶಾಮಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್ ಪಾಲ್ ಸಿಂಗ್, ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಚಿಕ್ಕಾರೆಡ್ಡಿ, ರಾಜ್ಯಾಧ್ಯಕ್ಷ ಚಂದ್ರಶೇಖರ ವಿ. ಸ್ಥಾವರಮಠ, ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವೀರೇಶ್, ಉಪಾಧ್ಯಕ್ಷ ನಂದೀಶ್, ಹಿರಿಯ ಉಪಾಧ್ಯಕ್ಷ ಅಬ್ದುಲ್ ಬಷೀರ್, ಕೆ.ಎಂ.ಪಾಲಾಕ್ಷ ಮತ್ತಿತರರ ನೇತೃತ್ವದಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಲು ನಿರ್ಧರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯಾಧ್ಯಕ್ಷ ಚಂದ್ರಶೇಖರ ವಿ. ಸ್ಥಾವರಮಠ ಅವರು, ಸಿಂಧಗಿ, ಹಾನಗಲ್ ವಿಧಾನಸಭೆ, ಜಿಲ್ಲಾ ತಾಲೂಕು, ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಉದ್ದೇಶಿಸಲಾಗಿದೆ. 25 ವರ್ಷಗಳ ಹಿಂದೆ ಎನ್ಡಿಎ ಜತೆ ಹೊಂದಾಣಿಕೆ ಮಾಡಿಕೊಂಡು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಲೋಕ ಶಕ್ತಿಗೆದ್ದಿತ್ತು. ಇದೀಗ ಮತ್ತೆ ತನ್ನ ಗತ ವೈಭವವನ್ನು ಮರಳಿ ತರಲು ಪ್ರಯತ್ನಿಸಲಾಗುವುದು ಎಂದರು.
ಪ್ರಸ್ತುತ ರಾಜಕೀಯ ಸನ್ನಿವೇಶಗಳು ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಾಕಷ್ಟು ದ್ವಂದ್ವ ಮತ್ತು ಗೊಂದಲಮಯ ವಾತಾವರಣ ನಿರ್ಮಾಣ ಮಾಡಿವೆ. ಜನರ ಆಶೋತ್ತರಗಳಿಗೆ ಸ್ಪಂದಿಸಿದ ಸರಕಾರಗಳು ಜನರ ಬದುಕನ್ನು ದುಸ್ಥಿತಿಗೆ ದೂಡಿವೆ. ರಾಜಕೀಯ ಅಸ್ಥಿರತೆ ಒಂದೆಡೆಯಾದರೆ ಮತ್ತೊಂದೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸನ್ನಿವೇಶದಿಂದ ಜನರನ್ನು ಹೊರ ತರುವುದು ತಮ್ಮ ಪ್ರಥಮ ಆದ್ಯತೆಯಾಗಿದೆ ಎಂದರು.