ಕಲಾವಿದರಿಗೆ ಮಾಸಾಶನ ನೀಡಲು ಆದೇಶ: ಸಚಿವ ಸುನಿಲ್ ಕುಮಾರ್
Update: 2021-10-03 11:54 GMT
ಬೆಂಗಳೂರು, ಅ. 3: `ರಾಜ್ಯದ ಕಲಾವಿದರಿಗೆ ಮಾಸಾಶನ ನೀಡಲು ಆದೇಶ ಹೊರಡಿಸಲಾಗಿದ್ದು, ತ್ವರಿತಗತಿಯಲ್ಲಿ ಮಾಸಾಶನ ನೀಡಲು ಸರಕಾರ ಕ್ರಮ ವಹಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿನ ಅನೇಕ ಕಲಾವಿದರು ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಲೇವಾರಿ ತ್ವರಿತವಾಗಿ ಆಗದೇ, ಮಾಸಾಶನ ಸಿಗದೇ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಹೀಗಾಗಿ ಮಾಸಾಶನ ವಿತರಣೆಯಲ್ಲಿನ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಕಲಾವಿದರ ಅರ್ಜಿಗಳನ್ನು 3 ತಿಂಗಳಿಗೊಮ್ಮೆ ಇತ್ಯರ್ಥ ಪಡಿಸಲಾಗುವುದು ಹಾಗೂ ಮಾಸಾಶನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ವರ್ಷಕ್ಕೊಮ್ಮೆ ಪರಿಶೀಲನೆ ಮಾಡುವ ಬದಲು, 6 ತಿಂಗಳಿಗೊಮ್ಮೆ ಪರಿಶೀಲಿಸಿ ಮಾಸಾಶನ ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.