ರಾಜಿ ಸಂಧಾನ; ಸಚಿವ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಅ.4: ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ಲ್ ನಲ್ಲಿ ಸಚಿವ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಹಲ್ಲೆ ಪ್ರಕರಣದಲ್ಲಿ ಸಚಿವ ಆನಂದಸಿಂಗ್ ಮತ್ತು ಶಾಸಕ ಜೆ.ಎನ್.ಗಣೇಶ್ ರಾಜಿಯಾಗಿದ್ದಾರೆ. ಈ ಕಾರಣಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಸೋಮವಾರ ಪ್ರಕರಣವನ್ನು ರದ್ದುಗೊಳಿಸಿದೆ.
ಇದು ಹಣಕಾಸಿನ ವ್ಯಾಜ್ಯಕ್ಕೆ ನಡೆದ ಜಗಳವಷ್ಟೇ. ಕೊಲೆ ಯತ್ನದ ಉದ್ದೇಶ ಅಥವಾ ಪ್ರಯತ್ನ ಇರಲಿಲ್ಲ. ಆದರೆ ಈಗಾಗಲೇ ಇಬ್ಬರೂ ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೊಲೆ ಯತ್ನ ಸೆಕ್ಷನ್ ಅನ್ವಯವಾಗುವುದಿಲ್ಲವೆಂದು ಕಂಪ್ಲಿ ಗಣೇಶ್ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು.
ಅವರ ವಾದವನ್ನು ಒಪ್ಪಿದ ಕೋರ್ಟ್ ಕೊಲೆಯತ್ನ ಪ್ರಕರಣ ಅನ್ವಯವಾಗುವುದಿಲ್ಲವೆಂದು ಆದೇಶ ನೀಡಿ ಪ್ರಕರಣವನ್ನು ರದ್ದುಗೊಳಿಸಿದೆ.
ಪ್ರಕರಣವೇನು: 2019 ಜನವರಿ 19ರ ರಾತ್ರಿ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆನಂದ್ ಸಿಂಗ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆನಂದ್ ಸಿಂಗ್ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ಗಣೇಶ್ ವಿರುದ್ಧ ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಸಂಬಂಧ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.