×
Ad

‘20 ವರ್ಷಗಳಿಂದ ಒಂದೇ ಮಾತನ್ನು ಪುನರುಚ್ಛರಿಸುತ್ತಿದ್ದಾರೆ’: ಎಚ್‍ಡಿಕೆ ಗೆ ಚಲುವರಾಯಸ್ವಾಮಿ ತಿರುಗೇಟು

Update: 2021-10-05 17:43 IST

ಬೆಂಗಳೂರು, ಅ.5: ಜೆಡಿಎಸ್ ನೋಡಿ ನಮಗೆ ನಡುಕ ಆಗಿದೆ ಎಂದು ನಾವ್ಯಾರು ಹೇಳಿಲ್ಲ. ಯಾರಿಗೆ ಸೋಲಿನ ಭೀತಿ ಇರುತ್ತದೆಯೋ ಅವರು ಎಲ್ಲರಿಗೂ ಮುಂಚಿತವಾಗಿ ಯೋಚಿಸಲು ಆರಂಭಿಸುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ನಮ್ಮ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚಿಸಲಿದೆ. ಈ ಬಾರಿ ಜನ ನಮಗೆ ಅವಕಾಶ ಕೊಡದಿದ್ದರೆ ಯಾವ ಪಕ್ಷದ ಜತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು. ಕಳೆದ 20 ವರ್ಷಗಳಿಂದ ಅವರು ಈ ಒಂದೇ ಮಾತನ್ನು ಪದೇ ಪದೇ ಪುನರುಚ್ಛರಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದರೆ ಅವರು ಟೀಕೆ ಮಾಡುತ್ತಾರೆ, ಆಗ ಜನರ ಸಿಂಪತಿ ಸಿಗುತ್ತದೆ ಎಂಬ ತಂತ್ರಗಾರಿಕೆಯಿಂದ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್‍ಗೆ ಕೌಂಟರ್ ಮಾಡಿಕೊಂಡು ರಾಜಕಾರಣ ಮಾಡುವ ಪರಿಸ್ಥಿತಿ ನಮಗಿಲ್ಲ. ನಾವು ರಾಜಕಾರಣ ಮಾಡಲು ಅನೇಕ ಜನಪರ ಕಾರ್ಯಕ್ರಮಗಳು ಇವೆ. ಕಾಂಗ್ರೆಸ್ ಸರಕಾರ ಕೊಟ್ಟಿರುವ ಕಾರ್ಯಕ್ರಮಗಳೇ ನಮ್ಮ ಶಕ್ತಿ ಎಂದು ಚಲುವರಾಯಸ್ವಾಮಿ ಹೇಳಿದರು.

10 ಕೆ.ಜಿ ಅಕ್ಕಿ ಕೊಟ್ಟು ಜನರನ್ನು ಭಿಕ್ಷುಕರನ್ನಾಗಿ ಮಾಡುವುದಾದರೆ, ತಮಿಳುನಾಡಿನಲ್ಲಿ ಕೊಟ್ಟ ಕಾರ್ಯಕ್ರಮಗಳಿಂದ ಅವರು ಭಿಕ್ಷುಕರಾಗಿದ್ದಾರಾ? ಇನ್ನು ಮೋದಿ ಅವರು ಖಾತೆಗೆ 500 ರೂ. ಹಾಕಿರುವುದು ಭಿಕ್ಷೆಯೇ? ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ಅಕ್ಕಿ ಕೊಟ್ಟಿದ್ದರಿಂದಲೇ ನಾವು ಇಂದು ಊಟ ಮಾಡಿ ನೆಮ್ಮದಿಯಿಂದ ಇದ್ದೇವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಹಸಿವು ನೀಗಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಜೆಡಿಎಸ್ ಅವರು ಮೇಲ್ನೋಟಕ್ಕೆ ಬಿಜೆಪಿ ವಿರುದ್ಧ ಮಾತನಾಡುತ್ತಾರೆ, ನಂತರ ಮುಖ್ಯಮಂತ್ರಿಗಳ ಬಳಿ ಹೋಗಿ ತಮ್ಮ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಸುತ್ತಾರೆ. ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ 4 ಸೀಟು ಬಂದರೂ ಬಿಜೆಪಿ ಜತೆ ಕೈಜೋಡಿಸುತ್ತಾರೆ. ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ ಕಿತ್ತು ಬಿಜೆಪಿ ಗೆಲುವಿಗೆ ಸಹಕರಿಸಲು ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಇವರ ತಂತ್ರಗಾರಿಕೆ ಜನರಿಗೂ ಅರಿವಾಗುತ್ತಿದೆ ಎಂದು ಚಲುವರಾಯಸ್ವಾಮಿ ಹೇಳಿದರು.

ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವ ಭಯದಲ್ಲಿ ಕುಮಾರಸ್ವಾಮಿ ಈ ಎಲ್ಲ ತಂತ್ರಗಾರಿಕೆ ಮಾಡುತ್ತಿದ್ದಾರೆ. ಅವರು ಪೂರ್ಣ ಬಹುಮತಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ಕುಮಾರಸ್ವಾಮಿ ಯಾವತ್ತು ನಾವು ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ? ಕಾಂಗ್ರೆಸ್ ಹಾಗೂ ಬಿಜೆಪಿಗೆ 115ಕ್ಕಿಂತ ಹೆಚ್ಚು ಸೀಟು ಹೋಗದಂತೆ ನೋಡಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ. ಜನ ಬುದ್ಧಿವಂತರಿದ್ದು, ಇವರ ರಣತಂತ್ರಕ್ಕೆ ಬಲಿಯಾಗುವುದಿಲ್ಲ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ಔದಾರ್ಯತೆ ಇರುವುದು ನಿಜವೇ ಆಗಿದ್ದರೆ, ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಯನ್ನು ಹಿಂಪಡೆಯಲಿ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಅವರ ಮಾತು ನಿಜವೇ ಆಗಿದ್ದರೆ ಸಾಬೀತು ಮಾಡಲಿ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದರು.

ಪಕ್ಷದ ಸಂಘಟನೆ ವಿಚಾರವಾಗಿ ಕೇಂದ್ರ ನಾಯಕರು ಎಲ್ಲ ರಾಜ್ಯಗಳ ನಾಯಕರನ್ನು ಕರೆಸಿ ಮಾತನಾಡುತ್ತಿದ್ದು, ಹೀಗಾಗಿ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡಿದ್ದಾರೆ. ನಮ್ಮ ಪಕ್ಷ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಂತ್ರಗಾರಿಕೆಗಿಂತ ಜನರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಭಿನ್ನಭಿಪ್ರಾಯ ಇಲ್ಲ. ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಪರಸ್ಪರವಾಗಿ ಟೀಕೆ ಮಾಡಿದ್ದಾರಾ? ಇದು ಕೇವಲ ಊಹಾಪೋಹಗಳ ಸುದ್ದಿ. ಮಾಧ್ಯಮಗಳು ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಚಿಂತನೆಗಳ ಬಗ್ಗೆ ಆದ್ಯತೆ ನೀಡಬೇಕು. ಯಾರು ಅಧಿಕಾರಕ್ಕೆ ಬಂದರೆ ರಾಜ್ಯದ ಹಿತ ಕಾಯುತ್ತಾರೆ ಎಂಬುದನ್ನು ಆಲೋಚಿಸಿ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಪದಾಧಿಕಾರಿಗಳ ಪಟ್ಟಿಗೆ ವಿಳಂಬವಾಯಿತು. ಈಗ ಅದಕ್ಕೆ ಅನುಮತಿ ಪಡೆಯಲು ಅಧ್ಯಕ್ಷರು ದಿಲ್ಲಿಗೆ ತೆರಳಿದ ದಿನವೇ ಉಪಚುನಾವಣೆ ಪ್ರಕಟವಾಗಿದೆ. ಪ್ರತಿ ಸಮಾಜದ ನಾಯಕರನ್ನು ನೋಡಲು ಸಾಧ್ಯವಾಗುವುದು ಕಾಂಗ್ರೆಸ್‍ನಲ್ಲಿ ಮಾತ್ರ. ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮ ನೀಡಲು ಕೇವಲ ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಎಸ್.ಆರ್.ಪಾಟೀಲ್, ಈಶ್ವರ್ ಖಂಡ್ರೆ ಹೀಗೆ ಎಲ್ಲ ಸಮುದಾಯದ ಸಮರ್ಥ ನಾಯಕರೂ ಇದ್ದಾರೆ ಎಂದು ಅವರು ಹೇಳಿದರು. 

ಪಕ್ಷದ ಸಂಘಟನೆ ವಿಚಾರವಾಗಿ ಪಕ್ಷದ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರುಗಳು ಸಭೆ ನಡೆಸಿದ್ದಾರೆ. ಅದೇ ರೀತಿ ಇತರೆ ಸಮುದಾಯದ ನಾಯಕರೂ ಸಭೆ ಮಾಡಲಿದ್ದಾರೆ. ಅದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ಈ ರಾಜ್ಯದ ಎಲ್ಲ ವರ್ಗದ ಜನರ ನಾಯಕರು ಎಂದು ಚಲುವರಾಯಸ್ವಾಮಿ ತಿಳಿಸಿದರು.

ಮಾಜಿ ಸಚಿವ ಎಂ.ನರೇಂದ್ರಸ್ವಾಮಿ ಮಾತನಾಡಿ, ಯಾವ ಯಾವ ರಾಜ್ಯದಲ್ಲಿ ಯಾವ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ನಮ್ಮ ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅದನ್ನು ಈಗಾಗಲೇ ಸಾಬೀತುಪಡಿಸಿದೆ. ಕಾಂಗ್ರೆಸ್ ಎಂದಿಗೂ ಹೇಳಿಕೊಂಡು ಈ ಕೆಲಸ ಮಾಡಿಲ್ಲ. ಸರ್ವಜನಾಂಗದ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್. ನಮಗೆ ಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆ ತಪ್ಪಲ್ಲ. ಪಕ್ಷದ ತೀರ್ಮಾನ ಅಂತಿಮ. ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News