ಆರೆಸ್ಸೆಸ್ ಅನ್ನು ಟೀಕಿಸುವ ಅಧಿಕಾರ ಎಚ್‍ಡಿಕೆ ಕುಟುಂಬಕ್ಕೆ ಇಲ್ಲ: ಸಚಿವ ಆರ್.ಅಶೋಕ್

Update: 2021-10-06 12:49 GMT

ಬೆಂಗಳೂರು, ಅ. 6: ‘ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್)ವನ್ನು ಟೀಕೆ ಮಾಡುವ ಅಧಿಕಾರವನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ಕೊಟ್ಟಿಲ್ಲ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಯಾವುದೋ ಪುಸ್ತಕವನ್ನು ಓದಿ ಹೇಳಿದ್ದಾರೆ. ಪುಸ್ತಕದಲ್ಲಿ ಬರುವುದು ಎಲ್ಲವೂ ನಿಜ ಇರುವುದಿಲ್ಲ, ಅದು ಅವರವರ ಭಾವನೆಗೆ ತಕ್ಕಂತೆ ಬರೆದಿರುತ್ತಾರೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಆರೆಸ್ಸೆಸ್ ಕಾರಣ' ಎಂದು ತಿಳಿಸಿದರು.

ಆರೆಸ್ಸೆಸ್ ಒಂದು ದೇಶಭಕ್ತ ಸಂಸ್ಥೆ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅತಿಹೆಚ್ಚು ಮಂದಿ ಆರೆಸ್ಸೆಸ್ ಕಾರ್ಯಕರ್ತರು ಕಾರಾಗೃಹ ಶಿಕ್ಷೆಗೆ ಅನುಭವಿಸಿದ್ದಾರೆ. ಐಎಎಸ್, ಐಪಿಎಸ್ ಉತ್ತೀರ್ಣರಾಗಲು ಪರೀಕ್ಷೆ ಬರೆಯಬೇಕು. ಆದರೆ, ಕುಮಾರಸ್ವಾಮಿ ಸುಖಾ ಸುಮ್ಮನೆ ತಪ್ಪು ಹುಡುಕುವುದು ಸರಿಯಲ್ಲ. ಎಚ್‍ಡಿಕೆ ಪಾಕಿಸ್ತಾನದ ವ್ಯವಸ್ಥೆಯನ್ನು ನೋಡಿ ಹೇಳಿರಬೇಕು ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ನಿಮಿಷ ನಿಮಿಷಕ್ಕೂ ಜೆಡಿಎಸ್ ನಡೆ-ನಿಲುವು ಬದಲಾಗುತ್ತಿರುತ್ತದೆ. ಈ ಹಿಂದೆ ಬಿಜೆಪಿಗೆ ರಾಜ್ಯದಲ್ಲಿ 104 ಶಾಸಕರ ಸಂಖ್ಯಾಬಲವಿತ್ತು. ಆದರೂ ಜೆಡಿಎಸ್, ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಜಾತ್ಯತೀತ ಜನತಾ ದಳ ಒಂದೇ ನಿಲುವು ಎಂದಿಗೂ ಇರುವುದಿಲ್ಲ ಎಂದು ಅಶೋಕ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು.

ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಹೋರಾಟ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲ. ಆರೆಸ್ಸೆಸ್ ಯಾವುದೇ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ. ನಾವೆಲ್ಲ ಆರೆಸ್ಸೆಸ್ ಎಂಬುದು ನಮಗೆ ಹೆಮ್ಮೆ. ಕೆಲವರು ಕಮ್ಯುನಿಷ್ಟ್ ಪಕ್ಷದ ಸಿದ್ಧಾಂತದಿಂದ ಪ್ರಭಾವಿತರಾಗಿ ಬಂದಿರುತ್ತಾರೆ. ಯಾವುದೇ ಸಂಸ್ಥೆಯ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ ಎಂದು ಅಶೋಕ್ ಆಕ್ಷೇಪಿಸಿದರು.

ಆನೆ ಕಾಲನ್ನು ಮುಟ್ಟಿ, ಬಾಳೆ ಕಂದಿನ ರೀತಿಯಲ್ಲಿದೆ ಎಂದು ಹೇಳುವುದು ತಪ್ಪು. ಸರಿಯಾಗಿ ನೋಡಿದರೆ ಆನೆ ಸ್ವರೂಪ ತಿಳಿಯುತ್ತದೆ. ಎಲ್ಲರಿಗೂ ಆರೆಸ್ಸೆಸ್ ಟಾರ್ಗೆಟ್ ಮಾಡಿದರೆ ಪ್ರಚಾರ ಸಿಗುತ್ತದೆ. ಹೀಗಾಗಿ ಎಲ್ಲರೂ ಆರೆಸ್ಸೆಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಇಂದು ಸಾಕಷ್ಟು ಜನರು ಆರೆಸ್ಸೆಸ್ ಮೂಲದಿಂದಲೇ ಬಂದಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News