ಮೈಸೂರು ವಿವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿ ಅನುಮಾನಾಸ್ಪದ ಸಾವು

Update: 2021-10-09 15:40 GMT

ಮೈಸೂರು: ಮೈಸೂರು ವಿವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಡೇನಹಳ್ಳಿಯ ಆಶಾ ಸಾವನ್ನಪ್ಪಿರುವ ಗೃಹಿಣಿ. ಇವರು ಮಳವಳ್ಳಿಯ ನಾಗಾಪ್ರಸಾದ್ ಎಂಬಾತನನ್ನು ಪ್ರೀತಿಸಿ ಕಳೆದ ಎಂಟು ವರ್ಷದ ಹಿಂದೆ ವಿವಾಹವಾಗಿದ್ದರು. ಮೈಸೂರಿನ ಜೆ.ಪಿ.ನಗರದಲ್ಲಿ ಗಂಡನೊಂದಿಗೆ ವಾಸವಾಗಿದ್ದರು.

ತವರು ಮನೆಯಿಂದ ಹಣ ತರುವಂತೆ ಗಂಡನಿಂದ ನಿರಂತರ ಕಿರುಕುಳವಾಗುತ್ತಿತ್ತು. ಈ ಬಗ್ಗೆ ಎರಡು ಬಾರಿ ಪೊಲೀಸ್ ಸ್ಟೇಷನ್‍ನಲ್ಲಿ ದೂರು ದಾಖಲಾಗಿತ್ತು. ಫ್ಯಾಮಿಲಿ ಕೋರ್ಟ್‍ನಲ್ಲಿ ಕೂಡ ರಾಜಿ ಪಂಚಾಯಿತಿ ನಡೆದಿತ್ತು ಎನ್ನಲಾಗಿದೆ.

ಗಂಡನ ಮನೆಯವರಿಂದ ಕಿರುಕುಳ ಆಗುತ್ತಿದೆ ಎಂದು ಆಶಾ ತವರು ಮನೆಯವರಿಗೆ ಕರೆ ಮಾಡಿ ಹೇಳಿದ್ದರು ಎನ್ನಲಾಗಿದೆ. ಈಗ ನಾಗಪ್ರಸಾದ್ ತನ್ನ ಪತ್ನಿ ತವರು ಮನೆಗೆ ಫೋನ್ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಾನೆ. ಆದರೆ, ಪೋಷಕರು ನಾಗಪ್ರಸಾದ್ ಕೊಲೆ ಮಾಡಿದ್ದಾನೆಂದು ದೂರು ನೀಡಿದ್ದಾರೆ.

ಈ ಸಂಬಂಧ ಮೈಸೂರಿನ ವಿದ್ಯಾರಣ್ಯಪುರಂ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News