ದೇಶದಲ್ಲಿಯೇ ಪ್ರಥಮ ಬಾರಿಗೆ ಉದ್ಯೋಗ ನೀತಿ ಜಾರಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-11 13:24 GMT

ಬೆಂಗಳೂರು, ಅ. 11: `ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ರೂಪಿಸಲಾಗುವುದು. ಈ ನೀತಿಯ ಅಡಿ ಉದ್ಯೋಗ ಸೃಜನೆ ಆಧಾರದ ಮೇಲೆ ಹೆಚ್ಚು  ಪ್ರೋತ್ಸಾಹ ಸವಲತ್ತು ನೀಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ನಗರದ ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಿರುವ `ಉದ್ಯಮಿಯಾಗು-ಉದ್ಯೋಗ ನೀಡು' ಕಾರ್ಯಾಗಾರದಲ್ಲಿ ಮಾತನಾಡಿದ ಅವರು, `ಉದ್ಯೋಗ ನೀತಿಯ ರಚನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಗರಿಷ್ಠ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪ್ರೋತ್ಸಾಹಕಗಳನ್ನು ರಾಜ್ಯದಲ್ಲಿ ನೀಡಲಾಗುವುದು ಎಂದರು.

`ಕರ್ನಾಟಕ ಉದ್ಯಮಸ್ನೇಹಿ ರಾಜ್ಯ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ರಾಜ್ಯದಲ್ಲಿ ಸಾಧ್ಯವಾಗಿಸಿದೆ. ಉದ್ಯಮಗಳು ಸ್ಥಾಪನೆಯಾಗಲು ಸೂಕ್ತ ವಾತಾವರಣ ನಿರ್ಮಾಣ ಮಾಡಿ, ಅವಕಾಶಗಳನ್ನು ಕಲ್ಪಿಸಲಾಗಿದೆ. 180ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ಆರ್ ಎಂಡ್ ಡಿ ಸೆಕ್ಟರ್ ರಾಜ್ಯದಲ್ಲಿದೆ. ಬಯೋಟೆಕ್ನಾಲಜಿ, ಇಂಜಿನಿಯರಿಂಗ್, ಸ್ಪೇಸ್ ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳ ಆರ್ ಎಂಡ್ ಡಿ ಸೆಕ್ಟರ್ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿದೆ. ಕೈಗಾರಿಕಾ ಅಭಿವೃದ್ಧಿ ಮತ್ತು ಇದರಿಂದ ಕೌಶಲ್ಯಭರಿತ ಮಾನವ ಸಂಪನ್ಮೂಲ ಬರಲು ಸಹಕಾರಿ. ಇದರ ಮುಖಾಂತರ ಹೊಸ ಉದ್ಯಮಗಳು ಬರುತ್ತವೆ' ಎಂದರು.

`ಸ್ಟಾರ್ಟ್ ಅಪ್ ನೀತಿ, ಆರ್ ಅಂಡ್ ಡಿ ಎಲ್ಲ ವಲಯಗಳಲ್ಲಿ ತರಲಾಗುತ್ತಿದೆ. ಶೇ.34ರಷ್ಟು 2ನೆ ಮತ್ತು 3ನೆ ಸ್ತರದ ನಗರಗಳಲ್ಲಿ ಪ್ರಾರಂಭಿಸಲಾಗಿದೆ. ಸ್ಟಾರ್ಟ್ ಅಪ್ ಪ್ರಾರಂಭಿಸಿದರೆ, 50ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡುವ ಏಕೈಕ ರಾಜ್ಯ ಕರ್ನಾಟಕ. ವಲಯವಾರು ತರಬೇತಿಯನ್ನು ನೀಡುವ ತೀರ್ಮಾನವನ್ನು ಕೈಗಾರಿಕಾ ಇಲಾಖೆ ಕೈಗೊಂಡಿದೆ. ಯುವಕರಲ್ಲಿ ಹೊಸ ಉತ್ಸಾಹ, ಚೈತನ್ಯ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ತುಂಬುವ ಕೆಲಸ ಮಾಡುತ್ತಿದ್ದು, ಯುವಜನರಲ್ಲಿ ಸಮಯ ಪ್ರಜ್ಞೆ, ಶ್ರಮ, ದುಡಿಮೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಯುವಕರು ಉದ್ಯಮವನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಬೇಕು ಎಂದು ಕರೆ ನೀಡಿದರು.

`ಕೈಗಾರಿಕಾ ಅದಾಲತ್ ಆಯೋಜಿಸಲಾಗಿದೆ. ಉದ್ಯಮ ಸ್ಥಾಪನೆಗೆ ಸೂಕ್ತ ತಂತ್ರಜ್ಞಾನ, ಹಣಕಾಸಿನ ನೆರವನ್ನು ನೀಡಲಾಗುವುದು, ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳೂ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉದ್ಯಮಿಗಳಾಗಬೇಕು. ಮಹಿಳೆಯರು ದೇಶದ ಜಿಡಿಪಿಗೆ ಕೊಡುಗೆ ನೀಡುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News