ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ಅಧಿಕಾರ ಹಿಂಪಡೆಯಿರಿ: ರಾಜ್ಯ ಸರಕಾರಕ್ಕೆ ಸಿದ್ದರಾಮಯ್ಯ ಆಗ್ರಹ

Update: 2021-10-12 15:46 GMT

ಕಲಬುರಗಿ, ಅ.12: ಗೊಂಡ, ರಾಜಗೊಂಡ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವಹಿಸಿ ಹೊರಡಿಸಿರುವ ಆದೇಶ ವಾಪಸ್ ಪಡೆಯುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷೆಯ ವರದಿ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಮಂಗಳವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ವರೆಗೆ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನೀಡುತ್ತಿತ್ತು, ಇದನ್ನು ಬಿಜೆಪಿ ಸರಕಾರ ಬದಲಾವಣೆ ಮಾಡಿ ಮೊದಲು ಸಿ.ಆರ್.ಇ ಸೆಲ್‍ಗೆ ಕಳುಹಿಸಬೇಕು, ಅವರು ಪರಿಶೀಲನೆ ಮಾಡಿ ನಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು, ಆ ವರದಿ ಆಧರಿಸಿ ಜಿಲ್ಲಾಧಿಕಾರಿ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಬದಲಾಯಿಸಿದೆ. ಈ ನಿಯಮದ ಅಗತ್ಯವೇನಿತ್ತು? ಕೂಡಲೇ ಆದೇಶವನ್ನು ವಾಪಾಸು ಪಡೆಯಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.

ಸಿ.ಆರ್.ಇ ಸೆಲ್‍ಗೆ ಕಳುಹಿಸೋದು ಎಂದರೆ ಜನರಿಗೆ ಕಿರುಕುಳ ನೀಡೋದು ಎಂದರ್ಥ. ಜನರ ದಾರಿ ತಪ್ಪಿಸಲು ಬಿಜೆಪಿಯವರು ನಾಟಕ ಮಾಡುತ್ತಾರೆ. ಎಲ್ಲೋ ಕೂತು ಹೇಳಿಕೆ ಕೊಡೋದಲ್ಲ, ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ನಾನು ಈ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಮಹತ್ವ ಸಿಗಬೇಕು ಎಂಬ ಕಾರಣಕ್ಕೆ ಕೆಪಿಎಸ್ಸಿ ಸದಸ್ಯರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನೀಡಿದೆವು. ಇದು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಮಹತ್ವದ ನಿರ್ಧಾರ ಕೈಗೊಂಡದ್ದು ನಮ್ಮ ಸರಕಾರ ಎಂದು ಅವರು ಹೇಳಿದರು.

170 ಕೋಟಿ ರೂ.ಅನುದಾನವನ್ನು ಈ ಆಯೋಗಕ್ಕೆ ನೀಡಿದೆ. 1.60 ಲಕ್ಷ ಶಿಕ್ಷಕರ ಮೂಲಕ ಅತ್ಯಂತ ವೈಜ್ಞಾನಿಕವಾಗಿ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆ ನಡೆಸಿದ ಶಿಕ್ಷಕರಲ್ಲಿ ಎಲ್ಲ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರು ಇದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಾಬ್ದಾರಿಯ ಮಾತುಗಳನ್ನು ಆಡಬಾರದು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಇದು ನಾನು ಹೇಳಿ ಬರೆಸಿದ ವರದಿ ಎಂದರೆ ಯಾರಾದ್ರೂ ನಂಬುತ್ತಾರ? ಪಟ್ಟಣ ಪ್ರದೇಶ ಹೊರತುಪಡಿಸಿ, ಗ್ರಾಮೀಣ ಕರ್ನಾಟಕದಲ್ಲಿ ನೂರಕ್ಕೆ ನೂರರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇದು ಯಾವ ಜಾತಿಯ ವಿರುದ್ಧವೂ ಅಲ್ಲ, ಪರವಾಗಿಯೂ ಅಲ್ಲ. ವರದಿಯಲ್ಲಿ ಏನಿದೆ ಎಂಬ ಬಗ್ಗೆ ನನಗೆ ಈವರೆಗೆ ಮಾಹಿತಿಯೂ ಇಲ್ಲ ಎಂದು ಅವರು ಹೇಳಿದರು.

ನಮ್ಮ ಅಧಿಕಾರಾವಧಿಯಲ್ಲಿ ವರದಿ ಪೂರ್ಣಗೊಂಡಿದ್ದರೆ ನಮ್ಮ ಸರಕಾರ ಸ್ವೀಕರಿಸುತ್ತಿರಲಿಲ್ಲವೇ? ಈಶ್ವರಪ್ಪ ಎಂಬ ಪೆದ್ದನಿಗೆ ಇಷ್ಟೂ ಅರ್ಥವಾಗಲ್ವಾ? ಸೆಕ್ರೆಟರಿ ಸಹಿ ಮಾಡಿಲ್ಲ ಎಂಬ ಕುಂಟು ನೆಪ ಕೊಡ್ತಿದ್ದಾರೆ, ಸದಸ್ಯರ ಸಹಿ ಕಡ್ಡಾಯ ಇದೆ, ಸೆಕ್ರೆಟರಿ ಸಹಿ ಅಗತ್ಯವಿಲ್ಲ. ಒಂದುವೇಳೆ ಒಬ್ಬ ಸೆಕ್ರೆಟರಿ ಹೋದರೆ ಇನ್ನೊಬ್ಬನ ಬಳಿ ಸಹಿ ಮಾಡಿಸಿ ವರದಿ ಸ್ವೀಕರಿಸಲು ಸರಕಾರಕ್ಕೆ ಬಂದಿರೋದೇನು? ಎಂದು ಸಿದ್ದರಾಮಯ್ಯ ಕಿಡಿಗಾರಿದರು.

ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ಬಳಿ ವರದಿ ಸ್ವೀಕರಿಸಿ ಎಂದು ಹೇಳಿದೆ. ಅದಕ್ಕವರು ಒಪ್ಪಿ ಸಭೆ ಕರೆದು, ವರದಿ ಸ್ವೀಕರಿಸುವ ವಿಚಾರ ಚರ್ಚೆ ನಡೆಸಿದರು. ಇದಾದ ಕೂಡಲೇ ಕುಮಾರಸ್ವಾಮಿ ಅವರು ಪುಟ್ಟರಂಗ ಶೆಟ್ಟಿಯವರನ್ನು ವರದಿ ಸ್ವೀಕರಿಸಿದರೆ ಮಂತ್ರಿ ಪದವಿಯಿಂದ ಕಿತ್ತುಹಾಕ್ತೀನಿ ಎಂದು ಹೆದರಿಸಿ, ಸ್ವೀಕರಿಸದಂತೆ ಮಾಡಿದರು ಎಂದು ಅವರು ದೂರಿದರು.

ಈಗ ಸಿದ್ದರಾಮಯ್ಯ ಅವರೇ ಹೇಳಿ ಬರೆಸಿದ್ದಾರೆ, ಇದನ್ನು ಸದನದಲ್ಲಿ ಏಕೆ ಪ್ರಸ್ತಾಪಿಸಲ್ಲ ಎಂದು ಕುಮಾರಸ್ವಾಮಿ ನನ್ನನ್ನೇ ಪ್ರಶ್ನೆ ಮಾಡ್ತಾರೆ. ಮುಂದೆ ಡಿಸೆಂಬರ್ ನಲ್ಲಿ ಅಧಿವೇಶನ ನಡೆಯುತ್ತೆ ಆಗ ಆರಂಭದಲ್ಲೇ ಈ ವಿಚಾರದ ಬಗ್ಗೆ ಪ್ರಶ್ನಿಸುತ್ತೇನೆ. ನಾನು ಹೇಳ್ತಿರೋದು ಸತ್ಯ, ಹಾಗಾಗಿ ನಾನು ಯಾರಿಗೆ ಏಕೆ ಹೆದರಲಿ? ಸತ್ಯ ಹೇಳಲು, ಸತ್ಯದ ಪರ ಹೋರಾಡಲು ಹೆದರಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಅಧಿಕಾರಕ್ಕೆ ಹಿಂಬಾಗಿಲ ರಾಜಕಾರಣ ಮಾಡಿಲ್ಲ. ಅಧಿಕಾರ ಇರಲಿ, ಹೋಗಲಿ ಎಂದೂ ನಾನು ನಂಬಿರುವ ತತ್ವ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ರಾಜಿಯಾಗಲ್ಲ. ಇಷ್ಟು ನನ್ನ ಬಗ್ಗೆ ನನಗೆ ಸ್ಪಷ್ಟತೆ ಇದೆ. ವರದಿ ಸೋರಿಕೆಯಾಗಿದೆ ಎಂಬ ಸುಳ್ಳು, ಇದರಲ್ಲಿ ಒಂದಷ್ಟು ಜಾತಿಗಳಿಗೆ ಅನ್ಯಾಯವಾಗಿದೆ ಎಂಬ ಇನ್ನೊಂದು ಸುಳ್ಳು ಹೀಗೆ ವರದಿ ಬಗ್ಗೆ ಬರೀ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಅವರು ಹೇಳಿದರು.

ವರದಿ ಸೋರಿಕೆಯಾಗಿದ್ದರೆ ಅದರ ಮಾಹಿತಿ ಮತ್ತು ಸಾಕ್ಷಿ ತೋರಿಸಿ ನೋಡೋಣ. 55 ಮಾನದಂಡಗಳನ್ನು ಆಧಾರವಾಗಿ ಇಟ್ಟುಕೊಂಡು ವರದಿ ತಯಾರಿಸಲಾಗಿದೆ. ಇಷ್ಟೊಂದು ವೈಜ್ಞಾನಿಕವಾಗಿ ಎಲ್ಲ ಜಾತಿಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿರುವುದು ಭಾರತದಲ್ಲೇ ನಮ್ಮಲ್ಲಿ ಮೊದಲು ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಅವರನ್ನು ಭೇಟಿಯಾಗಿ ಕೇಂದ್ರ ಸರಕಾರವೇ ಜಾತಿ ಆಧಾರಿತ ಸಮೀಕ್ಷೆ ನಡೆಸುವಂತೆ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಮೀಕ್ಷೆ ಮಾಡಲಾಗಿತ್ತು. ನಂತರ ಇಂತಹ ಸಮೀಕ್ಷೆ ನಡೆಯಲೇ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಬಿಟ್ಟರೆ ಬೇರೆ ಯಾವ ಜಾತಿಗಳ ಬಗ್ಗೆಯೂ ನಿರ್ಧಿಷ್ಟ ಮಾಹಿತಿ ಇಲ್ಲ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದಿವೆ. ಆದರೂ ನಮ್ಮಲ್ಲಿ ಅಸಮಾನತೆ ಜೀವಂತವಾಗಿದೆ. ಈ ತಳ ಸಮುದಾಯಗಳ ಜನರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕೋ ಬೇಡವೋ? ಅವರ ಅಭಿವೃದ್ಧಿಗೆ ಕಡೆ ನೀಡದೆ ಹೋದರೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹೇಗೆ? ಸಮ ಸಮಾಜ ನಿರ್ಮಾಣವಾಗುವುದು ಹೇಗೆ? ಇದಕ್ಕಾಗಿ ಅಂಕಿ ಅಂಶಗಳು ಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಗೊಂಡ, ರಾಜಗೊಂಡ, ಲಿಂಗಾಯತ, ವಾಲ್ಮೀಕಿ ಸಮಾಜ ಹೀಗೆ ಎಲ್ಲ ಸಮಾಜದ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಯ ಬಗ್ಗೆ ಮಾಹಿತಿ ಬೇಕು. ಆಗ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸಲು ಅನುಕೂಲವಾಗುತ್ತದೆ. ಸಮೀಕ್ಷೆಯ ಮುಖ್ಯ ಉದ್ದೇಶ ಇದೆ ಆಗಿದೆ ಎಂದು ಅವರು ಹೇಳಿದರು.

ಯಾವುದೇ ಒಂದು ಜಾತಿ ತಾವು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಬೇಕು ಎಂದು ಕೇಳಿದಾಗ ಮೊದಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಅರ್ಜಿ ಹಾಕಬೇಕು. ನಂತರ ಆಯೋಗ ಅದನ್ನು ತುಲನೆ ಮಾಡಿ, ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಈ ವರದಿ ಆಧಾರದ ಮೇಲೆ ಸರಕಾರ ನಿರ್ಧಾರ ಕೈಗೊಳ್ಳುತ್ತೆ. ಇದು ಈಗಿರುವ ಕಾನೂನು. ಈ ನಿರ್ಣಯ ಕೈಗೊಳ್ಳುವ ಹಕ್ಕನ್ನು ರಾಜ್ಯಗಳಿಗೆ ಬಿಡಬೇಕು ಎಂದು ಇತ್ತೀಚೆಗೆ ಸಂಸತ್ತಿನಲ್ಲಿ ಕಾನೂನು ಅಂಗೀಕಾರವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸಬೇಕು, ತಳವಾರ, ಪರಿವಾರ, ಕಾಡುಗೊಲ್ಲರನ್ನು ಎಸ್.ಸಿಗೆ ಸೇರಿಸಬೇಕು, ಗೊಂಡ, ರಾಜಗೊಂಡ ಸಮುದಾಯವನ್ನು ಎಸ್.ಟಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಿದ್ದು ನಮ್ಮ ಸರಕಾರ. ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ನಾನು ಮಂತ್ರಿಯಾಗಿದ್ದೆ, ಆಗ ಕೆಲವರು ಗೊಂಡ, ರಾಜಗೊಂಡ, ಕಾಡು ಕುರುಬ, ಜೇನು ಕುರುಬ, ತಳವಾರ, ನಾಯ್ಕ, ನಾಯಕ ಎಂಬ ಬೇರೆ ಬೇರೆ ಸರ್ಟಿಫಿಕೇಟ್ ತಗೊಂಡಿದ್ದಾರೆ ಎಂದು ಅವರು ಹೇಳಿದರು.

ಅವರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ, ಶಿಕ್ಷೆಗೆ ಒಳಪಡಿಸದೆ, ಕ್ರಿಮಿನಲ್ ಕೇಸ್ ಇದ್ದರೆ ಅದನ್ನು ವಾಪಸ್ ಪಡೆದು ಯಥಾಸ್ಥಿತಿಯನ್ನು ಮುಂದುವರೆಸಬೇಕು ಎಂದು ಆದೇಶ ನೀಡಲು ಶ್ರಮಿಸಿದ್ದು ನಾನು ಮತ್ತು ಸಚಿವರಾಗಿದ್ದ ವೀರಣ್ಣ. ಇದು ಜಾರಿಯಾಗಿದ್ದು ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ. 1994-95 ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲಾಯಿತು. ಇದಕ್ಕಾಗಿ ಒಂದು ಸಂಪುಟ ಉಪಸಮಿತಿ ರಚನೆ ಮಾಡಲಾಗಿತ್ತು. ಆ ಉಪಸಮಿತಿಯಲ್ಲಿ ನಾನು, ಎಂ.ಪಿ ಪ್ರಕಾಶ್, ಸಿಂಧ್ಯಾ, ನಾಣಯ್ಯ, ಬೈರೇಗೌಡ ಅವರು ಸದಸ್ಯರಾಗಿದ್ದೆವು ಎಂದು ಅವರು ಹೇಳಿದರು.

ನಾನು ಪ್ರೊ. ರವಿವರ್ಮ ಕುಮಾರ್ ಜೊತೆ ನಿರಂತರ ಚರ್ಚೆ ನಡೆಸಿ, ಮೀಸಲಾತಿ ಪ್ರಮಾಣ ನಿಗದಿ ಮಾಡಿದ್ದೆ. ಜೊತೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದ್ದು ನಮ್ಮ ಸಮಿತಿ. ಇದನ್ನು ವಿರೋಧಿಸಿದವರು ಬಿಜೆಪಿಯ ರಾಮಾ ಜೋಯಿಸ್. ಬಿಜೆಪಿ ಮೀಸಲಾತಿ ವಿರೋಧಿ ಎನ್ನಲು ಇಂತಹಾ ಸಾಕಷ್ಟು ನಿದರ್ಶನಗಳಿವೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News