ದೇಶದ ಉಜ್ವಲ ಭವಿಷ್ಯಕ್ಕಾಗಿ ಎನ್ಇಪಿ ಜಾರಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-10-12 16:12 GMT

ಬೆಂಗಳೂರು: ದೇಶದ ಭವಿಷ್ಯ ಉಜ್ವಲವಾಗಿರಬೇಕು ಎಂದರೆ ಇಡೀ ಶಿಕ್ಷಣ ವ್ಯವಸ್ಥೆಯು ಆಮೂಲಾಗ್ರವಾಗಿ ಬದಲಾಗಬೇಕಾಗಿದೆ. ಹೀಗಾಗಿಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಮಂಗಳವಾರ ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್ಇಪಿಯನ್ನು ಜಾರಿಗೆ ತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಇದರ ಜೊತೆಯಲ್ಲೇ ಬಿ.ಇ. ಕಲಿಕೆಗೆ ರಾಜ್ಯವನ್ನು ಅತ್ಯುತ್ತಮ ತಾಣವನ್ನಾಗಿ ಬೆಳೆಸುವ ಉದ್ದೇಶದ `ಡೆಸ್ಟಿನೇಶನ್ ಕರ್ನಾಟಕ’, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಪದವಿ ಮತ್ತು ಕನ್ನಡ ಮಾಧ್ಯಮದಲ್ಲೂ ಬಿ.ಇ. ಬೋಧನೆಗೆ ಹಸಿರು ನಿಶಾನೆ ತೋರಿಸಲಾಯಿತು. 

ಶಿಕ್ಷಣ ವ್ಯವಸ್ಥೆಯನ್ನು ದಿಢೀರನೆ ಬದಲಿಸಲು ಸಾಧ್ಯವಿಲ್ಲ. ಎನ್ಇಪಿಯನ್ನು ಅನೇಕ ವರ್ಷಗಳ ಕಾಲದ ಸಂಶೋಧನೆ, ವಿಶ್ಲೇಷಣೆ, ಅಳವಡಿಸಿಕೊಳ್ಳಲು ಇರುವ ಸಾಧ್ಯತೆಗಳು ಎಲ್ಲವನ್ನೂ ಗಂಭೀರವಾಗಿ ನಡೆಸಿ, ಜಾರಿಗೆ ತರಲಾಗುತ್ತಿದೆ. ಇದೊಂದು ಅತ್ಯಂತ ಧೈರ್ಯದ ನಿರ್ಧಾರವಾಗಿದ್ದು, ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮುಂದಾಲೋಚನೆ ಇದೆ. ಕರ್ನಾಟಕವು ಇದರ ಲಾಭವನ್ನು ಪಡೆದುಕೊಳ್ಳಲು ತೀರ್ಮಾನಿಸಿದೆ ಎಂದು ಅವರು ವಿವರಿಸಿದರು. 

 ಇಂದು ತಂತ್ರಜ್ಞಾನದಿಂದಾಗಿ ಸಾಂಪ್ರದಾಯಿಕ ತರಗತಿಗಳು ಮತ್ತು ಕೋರ್ಸುಗಳು ಅಪ್ರಸ್ತುತವಾಗಿವೆ. ಇಡೀ ಸಮಾಜವೇ ಇಂದು ತಂತ್ರಜ್ಞಾನವನ್ನು ಆಧರಿಸಿದೆ. ಈ ಪ್ರಚಂಡ ಬದಲಾವಣೆಗೆ ನಾವು ತೆರೆದುಕೊಂಡು, ಮುಂದಡಿ ಇಡದಿದ್ದರೆ ಶಾಶ್ವತವಾಗಿ ಕಳೆದುಹೋಗುತ್ತೇವೆ. ಆದ್ದರಿಂದ ನಮ್ಮ ಶಾಲಾಕಾಲೇಜುಗಳು ಉಳಿದವರಿಗಿಂತ ಒಂದು ಹೆಜ್ಜೆ ಮುಂದಿರಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. 

ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತಾಧ್ಯಯನದವರೆಗೂ ನಮ್ಮಲ್ಲಿ ಬದಲಾವಣೆ ಆಗಬೇಕಿದೆ. ಇದು ಸಾಧ್ಯವಾಗಬೇಕೆಂದರೆ, ಮೊದಲು ಶಿಕ್ಷಕರ ಮನಸ್ಥಿತಿ ಬದಲಾಗಬೇಕು. ಎನ್ಇಪಿ ಯಶಸ್ಸು ಕಾಣಬೇಕೆಂದರೆ ಇದು ಅತ್ಯಂತ ಮುಖ್ಯ. ಹೀಗಾದರೆ, ವಿದ್ಯಾರ್ಥಿಗಳ ಮನಃಸ್ಥಿತಿಯನ್ನು ಬದಲಿಸುವುದು ಕಷ್ಟವಲ್ಲ ಎಂದು ಅವರು ಪ್ರತಿಪಾದಿಸಿದರು. 

ಬಹುಶಿಸ್ತೀಯ ಮಾದರಿಯ ಕಲಿಕೆಯು ಇಂದಿನ ತುರ್ತು ಅಗತ್ಯವಾಗಿದೆ. ಏಕೆಂದರೆ, ಇಂಟರ್ನೆಟ್ ತಂತ್ರಜ್ಞಾನವು ಜಗತ್ತಿನ ನಿಯಮಗಳನ್ನೇ ಬದಲಿಸಿದೆ. ಆದ್ದರಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾವು ಒತ್ತು ಕೊಡಬೇಕು. ಇದಕ್ಕೆ ರಾಜ್ಯ ಸರಕಾರದ ಸಂಪೂರ್ಣ ಒತ್ತಾಸೆ ಇದೆ ಎಂದು ಮುಖ್ಯಮಂತ್ರಿ ನುಡಿದರು. 

ಶಿಕ್ಷಣ ಕ್ರಮದಲ್ಲಿ ಈವರೆಗೂ ಕೇವಲ ಶೇಕಡಾವಾರು ಅಂಕ ಗಳಿಕೆಗೆ ಗಮನ ಕೊಡಲಾಗುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಯ ಪರ್ಸೆಂಟೇಜ್ ಪದ್ಧತಿ ಹೋಗಿ `ಪರ್ಸೆಂಟೈಲ್’ ವಿಧಾನ ಜಾರಿಗೆ ಬಂದಿದೆ. ರಾಜ್ಯದಲ್ಲಿರುವ ಶಿಕ್ಷಣ ಸಂಸ್ಥೆಗಳು ಇದನ್ನು ಗಮನಿಸಿ, ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. 

``ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಎನ್ಇಪಿಯನ್ನು ಜಾರಿಗೆ ತರುತ್ತಿರುವುದು ಚಾರಿತ್ರಿಕವಾದ ಹೆಜ್ಜೆಯಾಗಿದೆ. ತಾಂತ್ರಿಕ ಶಿಕ್ಷಣಕ್ಕೆ ರಾಜ್ಯದಲ್ಲಿ ಇದು ಹೊಸತನವನ್ನು ತರುವ ಜತೆಗೆ ಹೊಸದಿಕ್ಕನ್ನು ತೋರಿಸಲಿದೆ,’’ ಎಂದು ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದರು. 

ಇದೇ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ, ಎನ್ಇಪಿ ಆಶಯಗಳಿಗೆ ಅನುಗುಣವಾಗಿ ಐಐಟಿ ಮತ್ತು ಐಐಎಸ್ಸಿ ಗುಣಮಟ್ಟದ ಬಿ.ಇ. ಮತ್ತು ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಪದವಿ ಪಠ್ಯಗಳನ್ನು ರೂಪಿಸಲಾಗಿದೆ ಎಂದರು. 

ಈಗಾಗಲೇ 66 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿ.ಎಸ್ಸಿ(ಆನರ್ಸ್) ಆರಂಭಿಸಲು ಅನುಮತಿ ನೀಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿನಲ್ಲಿ ಒಟ್ಟು 75 ಕಾಲೇಜುಗಳಲ್ಲಿ ಈ ಪದವಿಯನ್ನು ಆರಂಭಿಸಲಾಗುವುದು. ಶಿಕ್ಷಣ ಸಂಸ್ಥೆಗಳಿಗೂ ಉದ್ಯಮಗಳಿಗೂ ನೇರವಾದ ಸಂಬಂಧವಿರಬೇಕು ಎನ್ನುವುದೇ ಎನ್ಇಪಿ ಆಶಯವಾಗಿದೆ ಎಂದು ಅವರು ಹೇಳಿದರು. 

ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯಕ್ಕೆ ದೊಡ್ಡ ಪರಂಪರೆ ಇದೆ. ಅದರಲ್ಲೂ ಬೆಂಗಳೂರು ನಗರವು ಇಡೀ ಜಗತ್ತಿನ ಗಮನ ಸೆಳೆದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವು ಉದ್ಯಮಸ್ನೇಹಿ ನೀತಿಗಳನ್ನೂ ಜಾರಿಗೆ ತರುತ್ತಿದೆ ಎಂದು ಸಚಿವರು ವಿವರಿಸಿದರು. 

ಸಮಾರಂಭದಲ್ಲಿ ಬೆಳಗಾವಿ ವಿಟಿಯು ಉಪಕುಲಪತಿ ಕರಿಸಿದ್ಧಪ್ಪ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಬಾಷ್ ಕಂಪನಿಯ ಜನರಲ್ ಮ್ಯಾನೇಜರ್ ದತ್ತಾತ್ರಿ ಸಾಲಗಾಮೆ ಮುಂತಾದವರು ಉಪಸ್ಥಿತರಿದ್ದರು. 

ಅಶ್ವತ್ಥನಾರಾಯಣ ಬಗ್ಗೆ ಸಿಎಂ ಮೆಚ್ಚುಗೆ 

ಸಮಾರಂಭದಲ್ಲಿ ಪ್ರಧಾನಿಯವರ ದೂರದೃಷ್ಟಿಯನ್ನು ಕೊಂಡಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಎನ್ಇಪಿಯನ್ನು ಪ್ರಸ್ತಾಪಿಸಿದ ಅವರು, ``ನಮ್ಮ ಸಚಿವರು ಅತ್ಯಂತ ಪ್ರಗತಿಪರ ದೃಷ್ಟಿಕೋನವನ್ನು ಹೊಂದಿದ್ದಾರೆ. ಈ ಖಾತೆಗೆ ಇಲ್ಲಿಯವರೆಗೂ ಇಂತಹ ಉತ್ಸಾಹದ ಮತ್ತು ಖಚಿತ ಮುನ್ನೋಟದ ಮಂತ್ರಿಯೊಬ್ಬರು ಬಂದಿರಲಿಲ್ಲ,’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News