'ಹಿಂದೂ ಕಾರ್ಯಕರ್ತರ ಹತ್ಯೆ' ಕುರಿತಾದ ಬಿಜೆಪಿ ಆರೋಪಕ್ಕೆ ಟ್ವಿಟರ್ ನಲ್ಲಿ ದಾಖಲೆ ಬಿಡುಗಡೆಗೊಳಿಸಿದ ಸಿದ್ದರಾಮಯ್ಯ

Update: 2021-10-14 15:45 GMT
ಸಿದ್ದರಾಮಯ್ಯ 

ಬೆಂಗಳೂರು: ಅನೈತಿಕ ಪೊಲೀಸ್ ಗಿರಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಳಿಕ ಟ್ವಿಟರ್ ನಲ್ಲಿ ಬಿಜೆಪಿ- ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರ ನಡೆಯುತ್ತಿದ್ದು, ಇದೀಗ 'ಹಿಂದೂ ಕಾರ್ಯಕರ್ತರ ಹತ್ಯೆ' ಕುರಿತಾದ ಸಿಎಂ ಬೊಮ್ಮಾಯಿ ಆರೋಪಕ್ಕೆ ದಾಖಲೆ ಬಿಡುಗಡೆಗೊಳಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಪ್ರಕರಣಗಳ ತನಿಖೆ ಮಾಡಿ ಜನರಿಗೆ ಸತ್ಯ ತಿಳಿಸಿ' ಎಂದು ಒತ್ತಾಯಿಸಿದ್ದಾರೆ  , 

ಸಿದ್ದರಾಮಯ್ಯ ಅವರ ಟ್ವಿಟ್ ಇಂತಿದೆ 

''ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ. ಇಂತಹ ಬೇಜವಾಬ್ದಾರಿ ಹೇಳಿಕೆಗಿಂತ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು. ಈ ಆರೋಪಕ್ಕಾಗಿ ನಾನು ಕಾನೂನುಕ್ರಮಕ್ಕೆ ಮುಂದಾಗಬಹುದು. ಕಿರಿಯರಿದ್ದೀರಿ ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ'' ಎಂದು ಹೇಳಿದ್ದಾರೆ. 

''ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ಬೊಮ್ಮಾಯಿ ಅವರೇ, ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆಯ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ, ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸಿ ಒಬ್ಬ ಹಿಂದು ಯುವಕನ ಸಾವಿಗೆ ನ್ಯಾಯಕೊಡಿಸಲು ಪ್ರಯತ್ನಿಸುವಿರಾ?'' ಎಂದು ಪ್ರಶ್ನಿಸಿದ್ದಾರೆ.

''ಬಸವರಾಜ ಬೊಮ್ಮಾಯಿ ಅವರೇ, ನೀವು ಗೃಹಸಚಿವರಾಗಿದ್ದವರು, ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದೀರಿ. ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ-ಗುಬ್ಬಕ್ಕ ಕತೆ ಹೇಳುತ್ತಾ ಕೂರಬೇಡಿ, ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿ ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯ ತಿಳಿಸಿ'' ಎಂದು ಒತ್ತಾಯಿಸಿದ್ದಾರೆ.

''2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ/ಪಿಎಫ್ಐ ಸಂಘಟನೆಯವರು. ಹನ್ನೊಂದು ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಗೆ ಸೇರಿದವರು'' ಎಂದಿದ್ದಾರೆ. 

''ಮಂಗಳೂರಿನ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನರೇಶ್ ಶೆಣೈಯ ಖಾಸಾ ದೋಸ್ತ್ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು,  ಕಟ್ಟಾ ಹಿಂದೂ ಆಗಿದ್ದ ಬಾಳಿಗಾ ಅವರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಸೋದರಿಯರಿಗೆ ದಯವಿಟ್ಟು ನೀವಿಬ್ಬರೂ ಕೂಡಿ ನ್ಯಾಯ ಕೊಡಿಸಿ ಬೊಮ್ಮಾಯಿ ಅವರೇ'' ಎಂದು ಒತ್ತಾಯಿಸಿದ್ದಾರೆ. 

''ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್, ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳನ್ನು ಕೂಡಾ ದಯವಿಟ್ಟು ಶಿಕ್ಷಿಸಿ. ಬೊಮ್ಮಾಯಿ 
ಅವರೇ, ಇವರೆಲ್ಲರೂ ಹಿಂದುಗಳು ಎನ್ನುವುದು ನೆನಪಲ್ಲಿರಲಿ'' ಎಂದಿದ್ದಾರೆ. 

''ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನನ್ನಿಂದ ಆಡಳಿತವನ್ನಾಗಲಿ, ಪೊಲೀಸಿಂಗ್ ಆಗಲಿ ಕಲಿಯಬೇಕಿಲ್ಲ ಎಂದು ಹೇಳಿದ್ದೀರಿ, ಧನ್ಯವಾದಗಳು. ನನ್ನಿಂದಾಗಲಿ, ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಂದಾಗಲಿ ನೀವು ಏನಾದರೂ ಕಲಿತಿದ್ದರೆ, ಕೇವಲ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆ ಹೇಗೆ ಸೇರಿಕೊಳ್ಳುತ್ತಿದ್ದೀರಿ ಅಲ್ಲವೇ?'' ಎಂದು ಪ್ರಶ್ನಿಸಿದ್ದಾರೆ.  

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News