''ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ಮಾಡುತ್ತೇವೆ'': ಡಿ.ಕೆ ಶಿವಕುಮಾರ್

Update: 2021-10-16 06:59 GMT

ಕಲಬುರಗಿ: ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ಮಾಡುತ್ತೇವೆ. ಅಲ್ಪಸಂಖ್ಯಾತರು ಪ್ರಜ್ಞಾವಂತ ಮತದಾರರು. ಯಾರಿಗೆ ಮತ ಹಾಕಿದರೆ ಅನುಕೂಲ ಎಂಬುದು ಅವರಿಗೆ ಗೊತ್ತಿದೆ. ಕೇವಲ ಒಂದು ವರ್ಗ ಎಂಬುದಿಲ್ಲ. ಎದುರಾಳಿ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತವೆ. ಅದಕ್ಕೆ ಮತದಾರ ತಕ್ಕ ಹಾಗೂ ಸೂಕ್ಷ್ಮ ಉತ್ತರ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಸಿಂದಗಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನನ್ನ ಕಣ್ಣಾರೆ ಜನರ ಅಭೂತಪೂರ್ವ ಬೆಂಬಲ ನೋಡಿದೆ. ನಾನು ನನ್ನ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ಇದ್ದುದ್ದಕ್ಕಿಂತ ಹೆಚ್ಚಿನ ಪ್ರೋತ್ಸಾಹವನ್ನು ಇಲ್ಲಿನ ಜನ ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಣದಲ್ಲಿದ್ದ ಅನೇಕ ಅಭ್ಯರ್ಥಿಗಳು ಅಶೋಕ್ ಮನಗೂಳಿ ಅವರೇ ತಮ್ಮ ತಂದೆ ಸ್ಥಾನವನ್ನು ತುಂಬಬೇಕು ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿರುವ ಕಾಂಗ್ರೆಸ್ ಪಕ್ಷದ ಸಮೂಹ ಅಶೋಕ್ ಮನಗೂಳಿ ಅವರ ಹಿಂದೆ ನಿಂತಿದೆ. ಮನಗೂಳಿ ಅವರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ಸಿಂದಗಿ ಕ್ಷೇತ್ರದ ಜನರ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಜನ ಬಿಜೆಪಿ ಆಡಳಿತ ನೋಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಶಾಸಕರ ಆಡಳಿತದ ಅವಶ್ಯಕತೆ ಇದೆ ಎಂದು ಜನ ಭಾವಿಸಿದ್ದಾರೆ ಎಂದು ತಿಳಿಸಿದರು. 

''ಸಿಂದಗಿ ರೀತಿಯಲ್ಲೇ ಹಾನಗಲ್ ನಲ್ಲೂ ಜನ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಅಲ್ಲಿ ಬಿಜೆಪಿಯಲ್ಲಿನ ಗೊಂದಲವನ್ನು ಎಲ್ಲರೂ ನೋಡಿದ್ದಾರೆ. ಎರಡೂ ಕ್ಷೇತ್ರದಲ್ಲೂ ನಾವು ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದು, ಶುಭವಾರ್ತೆ ತೆಗೆದುಕೊಂಡು ಹೋಗುತ್ತೇವೆ'' ಎಂದರು. 

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಮನ್ನಣೆ ಇಲ್ಲ ಎಂಬ ಸಿಎಂ ಇಬ್ರಾಹಿಂ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ, ಅವರ ಮಾತುಗಳನ್ನು ನಾನು ನೋಡಿಲ್ಲ, ಕೇಳಿಲ್ಲ. ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ.

ಮನಗೂಳಿ ಅವರು ಭೇಟಿಯಾಗಿದ್ದಕ್ಕೆ ಅವರ ಪುತ್ರನೇ ಸಾಕ್ಷಿ:

ಮನಗೂಳಿ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ಸುಳ್ಳು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಮನಗೂಳಿ ಅವರು ಇಂದು ನಮ್ಮ ಜತೆ ಇಲ್ಲ. ಅವರು ಬಂದು ನಮ್ಮ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಹೇಳಿದ್ದು ನಿಜ. ಅದಕ್ಕೆ ಅವರ ಪುತ್ರ ಅಶೋಕ್ ಮನಗುಳಿ ಅವರೇ ಸಾಕ್ಷಿ. 15 ದಿನ ಮೊದಲು ಭೇಟಿ ಮಾಡಿದ್ದರು ಎಂದರೆ ಮೀಟರ್ ಹಾಕಿ, ಲೆಕ್ಕ ಮಾಡಿ ಹೇಳಲು ಆಗುತ್ತಾ? ಅವರು ಬಂದಿದ್ದು ನಿಜ. ಮಗನ ಬಗ್ಗೆ ಹೇಳಿದ್ದೂ ನಿಜ. ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News