ನ. 1ರಿಂದ ‘ಜನಸೇವಕ’ ಜಾರಿ: ಸಿಎಂ ಬೊಮ್ಮಾಯಿ

Update: 2021-10-16 17:32 GMT

ದಾವಣಗೆರೆ, ಅ.16: ಜನರ ಬಳಿಗೆ ಸರಕಾವೇ ತಲುಪುವುದೇ ಜನಪರ ಸರಕಾರ. ಈ ನಿಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ಪಡಿತರ ಅಕ್ಕಿ, ಗೋಧಿ ಸೇರಿದಂತೆ ಆಹಾರಧಾನ್ಯವನ್ನು ತಲುಪಿಸುವ ಜನಸೇವಕ ಯೋಜನೆ ಜ. 26ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ವೊದಲ ಹಂತದಲ್ಲಿ ಬೆಂಗಳೂರು ಭಾಗದ 28 ವಿಧಾನಸಭಾ ಕ್ಷೇತ್ರಗಳಲ್ಲಿ ನ. 1ರಂದು ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಜಿಲ್ಲೆಯ ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟೆ, ಶಂಕುಸ್ಥಾಪನೆ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

ಜನರಿರುವ ಕಡೆ ಅಭಿವೃದ್ಧಿ ತಲುಪಿದಾಗಲೇ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ, ಆಗ ಮಾತ್ರ ವಿವಿಧ ಸೌಲಭ್ಯಗಳಿಗಾಗಿ ಜನರು ಸರಕಾರಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಈ ದಿಸೆಯಲ್ಲಿ ಪಡಿತರ ಅಕ್ಕಿ ಸೇರಿದಂತೆ ರೇಷನ್ ಅನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸು ಜನಸೇವಕ ಯೋಜನೆಯನ್ನು ಜ. 26ರಿಂದ ರಾಜ್ಯಾದ್ಯಂತ ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆ. ಎಲ್ಲ ಬಗೆಯ ಪ್ರಮಾಣಪತ್ರಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಿಗುವಂತಾಗಬೇಕು, ಇದಕ್ಕಾಗಿ ಜನರು ತಾಲೂಕು, ಜಿಲ್ಲಾಮಟ್ಟದ ಕೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಎಲ್ಲ ೇವೆಗಳು ಪ್ರತಿ ಗ್ರಾಮ ಮಟ್ಟದಲ್ಲಿ ಜನರ ಮನೆಬಾಗಿಲಿಗೆ ತಲುಪಿಸುವ ಕಾರ್ಯ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಸ್ವಚ್ಛ, ದಕ್ಷ, ಜನಪರ ಆಡಳಿತ ಕೊಡುತ್ತೇವೆ. ಗಾಂಧೀಜಿಯ ಗ್ರಾಮರಾಜ್ಯದ ಪರಿಕಲ್ಪ ನೆಯಿಂದ ಹಿಡಿದು, ಅಟಲ್‌ಬಿಹಾರಿ ವಾಜಪೇಯಿ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಯೋಜನೆ ರೂಪಿಸುತ್ತೇವೆ. ುುಂದಿನ ಒಂದೂವರೆ ವರ್ಷದೊಳಗೆ 4 ಲಕ್ಷ ುನೆಗಳನ್ನು ನಿರ್ಮಿಸುವ ಸಂಕಲ್ಪ  ಮಾಡಿದ್ದೇವೆ, ಇದು ಕೇವಲ ಘೋಷಣೆಯಲ್ಲ, ಇದಕ್ಕೆ ಬೇಕಿರುವ ಅನುದಾನವನ್ನೂ ಮೀಸಲಿಡುತ್ತೇವೆ. ಸ್ಲಂ ಪ್ರದೇಶಗಳಲ್ಲಿ ಈ ವರ್ಷ 1 ಲಕ್ಷ ಮನೆ ನಿರ್ಮಿಸಲು ಮಂಜೂರಾತಿ ನೀಡಿ, ಹಣ ಬಿಡುಗಡೆ ಕೂಡ ಮಾಡುತ್ತೇವೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ಶುದ್ಧ ನೀರು ತಲುಪಿಸಲು 2 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. 750 ಗ್ರಾಮಗಳನ್ನು ಗುಡಿಸಲು ಮುಕ್ತವಾಗಿಸಲು ಕ್ರಮ ವಹಿಸಿದ್ದು, 75 ಸಾವಿರ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ದೊರಕುವಂತೆ ಮಾಡಲು ಸಂಕಲ್ಪಮಾಡಿದ್ದೇವೆ. ರಾಜ್ಯದ 180 ಐಟಿಐ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಿದ್ದು, ಉಳಿದ ಎಲ್ಲ ಐಟಿಐ ಹಾಗೂ ಪಾಲಿಟೆಕ್ನಿಕ್‌ಗಳನ್ನೂ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಮನವಿಯಂತೆ ನ್ಯಾಮತಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡುವಂತಾಗಲು ಸಾಮರ್ಥ್ಯ ಸೌಧ (ಮಿನಿವಿಧಾನಸೌಧ) ಮಂಜೂರು ಮಾಡಲಾಗುವುದು ಎಂದು ಇದೇ ವೇಳೆ ಪ್ರಕಟಿಸಿದರು.

ಕಂದಾಯ ಸಚಿವ ಆರ್. ಅಶೋಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಂಸದ ಡಾ. ಜಿ.ಎಂ. ಸಿದ್ದೇಶ್ವರ್, ಮಾತನಾಡಿದರು.

ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರ, ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್, ಎಸ್‌ಪಿ ಸಿ.ಬಿ. ರಿಷ್ಯಂತ್, ಸುರಹೊನ್ನೆ ಗ್ರಾ.ಪಂ. ಅಧ್ಯಕ್ಷ ಹಾಲೇಶಪ್ಪ ಎಚ್, ಉಪಾಧ್ಯಕ್ಷೆ ರುಕ್ಮೀಣಿಯಮ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ 26 ಘನತ್ಯಾಜ್ಯ ವಿಲೇವಾರಿ ವಾಹನಗಳ ಉದ್ಘಾಟನೆ ನೆರವೇರಿಸಿದರು . ಅಲ್ಲದೆ ಸಮಾರಂಭದ ಆವರಣದಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಲಾಗಿದ್ದ ವಸ್ತುಪ್ರದರ್ಶನ ಮಳಿಗೆಗಳನ್ನು ಕೂಡ ಉದ್ಘಾಟಿಸಿದರು. ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ಸವಲತು್ತಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News