‘ಆಕಾಶವಾಣಿ-ದೂರದರ್ಶನ ಕೇಂದ್ರಗಳಿಗೆ ಬೀಗ’ ಹೇಯ ಕೃತ್ಯ: ಎಚ್.ಡಿ. ಕುಮಾರಸ್ವಾಮಿ

Update: 2021-10-19 13:03 GMT

ಬೆಂಗಳೂರು, ಅ.19: ‘ಒಂದೇ ದೇಶ, ಒಂದೇ ಭಾಷೆ’ ಎನ್ನುವ ಕರಾಳ ನೀತಿಯ ಮೂಲಕ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರಕಾರವು ಈಗ ನಮ್ಮ ನಾಡಿನ ಗ್ರಾಮೀಣ, ಜಾನಪದ, ಸಾಂಸ್ಕೃತಿಕ ಸೊಗಡಿನ ದನಿಯಾಗಿರುವ ಆಕಾಶವಾಣಿ ಮತ್ತು ದೂರದರ್ಶನದ ಪ್ರಾದೇಶಿಕ ಕೇಂದ್ರಗಳಿಗೆ ಬೀಗ ಜಡಿಯುವ ಹೇಯ ಕೃತ್ಯಕ್ಕೆ ಕೈಹಾಕಿರುವುದು ಖಂಡನೀಯ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಇಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಮತ್ತು ಸಂಪಾದಕೀಯ ಅತ್ಯಂತ ಕಳವಳಕಾರಿ. ವಿವಿಧತೆಯಲ್ಲಿ ಏಕತೆಯನ್ನು ಮೈದುಂಬಿಕೊಂಡು ಜಗತ್ತಿಗೆ ‘ಬಹುತ್ವತೆಯ ಆದರ್ಶ’ ಆಗಿರುವ ಭಾರತದ ಪ್ರಾದೇಶಿಕ ವೈವಿಧ್ಯಮಯ ಅನನ್ಯ ಸಾಂಸ್ಕೃತಿಕ, ಜಾನಪದ ಸಂಪತ್ತಿಗೆ ಕೇಂದ್ರ ಸರಕಾರ ಕೊಳ್ಳಿ ಇಡಲು ಹೊರಟಿದೆ ಎಂದು ದೂರಿದ್ದಾರೆ.

ಈಗಾಗಲೇ ಡಿಡಿ(ದೂರದರ್ಶನ), ಆಕಾಶವಾಣಿಯ ಒಂದೊಂದೇ ಪ್ರಾದೇಶಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ನಂತರ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನೂ ಮುಚ್ಚುವ ಹುನ್ನಾರ ನಡೆಸಿದೆ. ಅಕ್ಟೋಬರ್ 31ರಿಂದ ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೂ ಬೀಗ ಜಡಿಯಲು ಪ್ರಸಾರ ಭಾರತಿ ಹೊರಟಿದೆ. ಇದು ಕನ್ನಡ ವಿರೋಧಿ ನಡೆ, ಪ್ರಾದೇಶಿಕ ಭಾಷೆಗಳಿಗೆ ಚರಮಗೀತೆ ಹಾಡುವ ದಮನ ನೀತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ಭಾಷೆಗಳಲ್ಲಿ ಒಂದಾದ ಹಿಂದಿಯನ್ನೇ ಉಳಿಸಿ ಬೆಳೆಸುವ ಹಾಗೂ ಅದನ್ನೇ ಕನ್ನಡಿಗರ ಮೇಲೆ ಹೇರುವ ಏಕೈಕ ದುರಾಲೋಚನೆಯಿಂದ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು ಕಡೆಗಣಿಸಿ, ಮೂಲೋತ್ಪಾಟನೆ ಮಾಡಲು ಕೇಂದ್ರ ಸರಕಾರ ಈ ಮೂಲಕ ಹೊಂಚು ಹಾಕಿರುವುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಯಾವುದೇ ಕಾರಣಕ್ಕೂ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು, ಕಲಬುರಗಿ ಸೇರಿ ಯಾವುದೇ ಭಾಗದಲ್ಲಿರುವ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನು ಮುಚ್ಚಬಾರದು ಎನ್ನುವುದು ನನ್ನ ಒತ್ತಾಯವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News