ನಳಿನ್‍ ಕುಮಾರ್ ಕಟೀಲ್ ಶತಮಾನದ ಶ್ರೇಷ್ಠ ಅವಿವೇಕಿ: ದಿನೇಶ್ ಗುಂಡೂರಾವ್

Update: 2021-10-19 13:10 GMT

ಬೆಂಗಳೂರು, ಅ.19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಕೇವಲ ಜೋಕರ್ ಮಾತ್ರ ಅಲ್ಲ, ಸಂಸ್ಕಾರವೇ ಇಲ್ಲದ ಅತ್ಯಂತ ತುಚ್ಛ ವ್ಯಕ್ತಿ ಕೂಡ ಹೌದು. ಶತಮಾನದ ಶ್ರೇಷ್ಠ ಅವಿವೇಕಿಯಂತೆ ವರ್ತಿಸುವ ಕಟೀಲ್‍ರವರಿಗೆ ಬಹುಶಃ ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವಿರಬಹುದು. ಆ ಡ್ರಗ್ಸ್ ನಶೆಯಲ್ಲೇ ಇಂತಹ ಅಸಂಬದ್ಧ ಮಾತುಗಳನ್ನು ಆಡುತ್ತಾರೇನೋ? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಕಟೀಲ್‍ರವರು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಭ್ಯತೆಯಿಂದ ಮಾತನಾಡುವ ಸಂಸ್ಕೃತಿ ಕಲಿಯಲಿ. ಇಲ್ಲವೇ ಈ ರೀತಿ ಮಾತನಾಡುವುದು ಆರೆಸ್ಸೆಸ್ ಕಲಿಸಿದ ಸಂಸ್ಕಾರ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ. ಕುಲವಂ ನಾಲಗೆ ನುಡಿಯಿತು ಎಂಬಂತೆ ಕಟೀಲ್‍ರವರ ಸಂಸ್ಕಾರ ಮತ್ತು ಸಂಸ್ಕೃತಿಯೇನು ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಕಟೀಲ್‍ರವರ ಕೊಳಕು ಮನಃಸ್ಥಿತಿಯನ್ನು ಅನಾವರಣ ಮಾಡಿದೆ. ಸಂಸ್ಕೃತಿ ಮತ್ತು ದೇವರ ಬಗ್ಗೆ ಮಾತನಾಡುವ ಬಿಜೆಪಿಯವರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ. ಆ ಬಗ್ಗೆ ಕ್ರಮವೇನು? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಕಟೀಲ್‍ರವರಿಗೆ ಯಾವ ನೈತಿಕತೆಯಿದೆ. ರಾಜೀವ್ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು? ಕಟೀಲ್‍ರವರ ಕೊಡುಗೆಯೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿಯವರಿಗೆ ಸಂಸ್ಕಾರದ ಗಂಧ ಗಾಳಿ ಗೊತ್ತಿದ್ದರೆ, ಹಾಗೂ ಸಾರ್ವಜನಿಕ ಭಾಷಾ ಪ್ರಯೋಗದ ಅರಿವಿದ್ದರೆ, ಅವಿವೇಕತನದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಕಟೀಲ್‍ರಂತಹ ಶುದ್ಧ ಅಜ್ಞಾನಿಗಳಿಗೆ ಅಧ್ಯಕ್ಷ ಪಟ್ಟ ಕೊಟ್ಟ ತಮ್ಮ ಅಜ್ಞಾನವನ್ನು ಬಿಜೆಪಿಯವರು ಇನ್ನಾದರೂ ತಿದ್ದಿಕೊಳ್ಳಲಿ. ಇದು ಬಿಜೆಪಿಯ ನೈತಿಕತೆಯ ಪ್ರಶ್ನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News