ಬೆಳಗಾವಿಯಲ್ಲಿ ಅನೈತಿಕ ಪೊಲೀಸ್ಗಿರಿ: ಮೂವರು ಆರೋಪಿಗಳ ಬಂಧನ
ಬೆಳಗಾವಿ, ಅ.19: ಬೆಳಗಾವಿ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ನಡೆಸಿದ ಆರೋಪದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಗರದ ದಾವತ್ ಖತೀಬ್, ಆಯುಬ್, ಯುಸೂಫ್ ಪಠಾಣ್ ಬಂಧಿತ ಆರೋಪಿಗಳಾಗಿದ್ದಾರೆ.
ಆಟೋ ಚಾಲಕನಾಗಿರುವ ದಾವತ್ ಖತೀಬ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಕಳೆದ ಅ.13ರಂದು ರಾಯಬಾಗ ಮೂಲದ ಯುವಕ ಹಾಗೂ ಹುಕ್ಕೇರಿ ಮೂಲದ ಯುವತಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಇಳಿದು ಆಟೋ ಹತ್ತಿದ್ದಾರೆ. ಈ ವೇಳೆ ಯಾವುದಾದರೂ ಉದ್ಯಾನವನಕ್ಕೆ ಕರೆದುಕೊಂಡು ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆನ್ನಲಾಗಿದೆ.
ಆಟೋ ಚಾಲಕ ದಾವತ್ ಆಟೋವನ್ನು ಉದ್ಯಾನವನದ ಬದಲಾಗಿ ನಿರ್ಜನ ಪ್ರದೇಶಕ್ಕೆ ತಿರುಗಿಸಿದ್ದಾನೆ. ಬಳಿಕ ಇತರ 20 ಮಂದಿಯ ಜೊತೆಗೆ ಸೇರಿ ಇಬ್ಬರ ಮೇಲೆ ರಾಡ್ ಹಾಗೂ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು, ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ವಿಕ್ರಂ ಆಮ್ಟೆ ಅವರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ಪ್ರಮುಖ ಆರೋಪಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಇನ್ನುಳಿದ 17 ಜನರ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ 1860 ಅಡಿ 143, 147, 148, 323, 324, 307, 354, 395, 504, 506, 149 ಅಡಿ ಪ್ರಕರಣ ದಾಖಲಿಸಲಾಗಿದೆ.