ಕೋಮು ಪ್ರಚೋದನೆಗೆ ಕ್ರಮ ವಹಿಸದಿದ್ದರೆ, ಉಗ್ರ ಹೋರಾಟ: ಪಿಎಫ್ಐ ಕಾರ್ಯದರ್ಶಿ ಎ.ಕೆ. ಅಶ್ರಫ್
ಬೆಂಗಳೂರು, ಅ.20: ಸಂಘ ಪರಿವಾರದ ಕಾರ್ಯಕರ್ತರು ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ನಡೆಸಿರುವುದು ಕಾನೂನುಬಾಹಿರವಾಗಿದೆ. ಅಲ್ಲದೇ, ಅದನ್ನು ಸಮರ್ಥಿಸಿಕೊಳ್ಳಲು ಕೋಮು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ದುಷ್ಕøತ್ಯಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೂಡಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಧ್ಯಪ್ರವೇಶಿಸಿ, ಇಂತಹ ಕೋಮು ಪ್ರಚೋದನಾ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ. ಅಶ್ರಫ್ ಎಚ್ಚರಿಸಿದ್ದಾರೆ.
ಬುಧವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ವಿಜಯದಶಮಿ ಮತ್ತು ಆಯುಧ ಪೂಜೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಸಹಿತ ಸಂಘಪರಿವಾರದ ಸಂಘಟನೆಗಳು ತ್ರಿಶೂಲ ದೀಕ್ಷೆ ಕಾರ್ಯಕ್ರಮ, ದುರ್ಗಾದೌಡ್, ಹಿಂದು ಶಕ್ತಿ ಸಂಚಲನ ಹೆಸರಿನಲ್ಲಿ ಶೋಭಯಾತ್ರೆ, ಸಭಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ರಾಜ್ಯದ ವಿವಿಧ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ತಲವಾರು, ಬಂದೂಕು, ಕೋವಿಯಂತಹ ಮಾರಕಾಸ್ತ್ರಗಳನ್ನು ಪ್ರದರ್ಶಿಸಲಾಗಿತ್ತು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲವನ್ನೂ ವಿತರಿಸಲಾಗಿದ್ದು, ಚೂರಿ ಇರಿತ ಪ್ರಕರಣದ ಆರೋಪಿಗೂ ತ್ರಿಶೂಲ ವಿತರಿಸಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಳ್ಳಬೇಕಾದ ಪೋಲೀಸ್ ಇಲಾಖೆಯು ನಿಷ್ಕ್ರಿಯೆಯಾಗಿದೆ ಎಂದು ಆರೋಪಿಸಿದರು.
ಕಾರ್ಯಕ್ರಮಗಳಲ್ಲಿ ಸಂಘ ಪರಿವಾರದವರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡುವ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಅಲ್ಲದೇ ಅವರು ಮುಸ್ಲಿಂ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸುವ ಬಹಿರಂಗ ಬೆದರಿಕೆಯನ್ನು ಒಡ್ಡಿದ್ದಾರೆ. ಇದರ ಹಿಂದೆ ಧರ್ಮ-ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂಚು ನಡೆಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಇದುವರೆಗೂ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂದರು.
ಆದರೆ, ಬೆಳಗಾವಿಯಲ್ಲಿ ಸಾರ್ವಜನಿಕ ರ್ಯಾಲಿ ನಡೆಸಿ ಮಾರಕಾಸ್ತ್ರ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಜನಾಕ್ರೋಶವನ್ನು ತಣಿಸುವ ನಿಟ್ಟಿನಲ್ಲಿ ಪೊಲೀಸರು ಸಂಘಪರಿವಾರದವರ ಮೇಲೆ ದುರ್ಬಲ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ಸಾಕ್ಷಿ ಇದ್ದರೂ ಪ್ರಾಥಮಿಕ ವರದಿಯಲ್ಲಿ ವ್ಯತಿರಿಕ್ತ ಮಾಹಿತಿಯನ್ನು ದಾಖಲಿಸಿ, ಪೊಲೀಸರು ಮೃದುಧೋರಣೆ ತಾಳಿರುವುದು ಮತ್ತಷ್ಟು ಆತಂಕಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಪೆÇಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುವ ಮೂಲಕ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದರು.
ರಾಜ್ಯದಲ್ಲಿ ಮುಸ್ಲಿಮ್ ಸಮುದಾಯನ್ನು ಗುರಿಪಡಿಸಿಕೊಂಡು ನಡೆಯುತ್ತಿರುವ ದುಷ್ಕøತ್ಯಗಳು ಆಘಾತಕಾರಿಯಾಗಿದೆ. ಬೆಳಗಾವಿಯಲ್ಲಿ ಅರ್ಬಾಝ್ ಎಂಬ ಯುವಕನ ಬರ್ಬರ ಹತ್ಯೆ, ಬಾಗಲಕೋಟೆಯ ಇಲಕಲ್ನಲ್ಲಿ ನಡೆದ ಮುಸ್ಲಿಮ್ ವಿದ್ಯಾರ್ಥಿಯ ಮೇಲಿನ ಮಾರಣಾಂತಿಕ ಹಲ್ಲೆ, ಗದಗದಲ್ಲಿ ಐತಿಹಾಸಿಕ ಮಸ್ಜಿದ್ ಕೆಡಹುವ ಬೆದರಿಕೆಗಳು ಸೇರಿದಂತೆ ಸಂಘಪರಿವಾರದ ನಾಯಕರು ವಿವಿಧೆಡೆ ಮಾಡುತ್ತಿರುವ ದ್ವೇಷಪೂರಿತ ಪ್ರಚೋದನಾಕಾರಿ ಭಾಷಣಗಳು, ಪ್ರವಾದಿ ವಿರುದ್ಧ ಅವಹೇಳನ, ಮಿತಿಮೀರಿರುವ ಅನೈತಿಕ ಪೊಲೀಸ್ಗಿರಿ ಜನರಲ್ಲಿ ಕೋಮುಭಾವನೆಯನ್ನು ಪ್ರಚೋದಿಸುತ್ತಿವೆ. ಆದ್ದರಿಂದ ಅಲ್ಪಸಂಖ್ಯಾತರಲ್ಲಿ ಭೀತಿ ಸೃಷ್ಟಿಸುವ ಇಂತಹ ದುರುದ್ದೇಶಪೂರಿತ ಕೃತ್ಯಗಳ ವಿರುದ್ಧ ಸರಕಾರವು ನಿಷ್ಪಕ್ಷಪಾತವಾಗಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳಾದ ಇಲ್ಯಾಸ್ ಮೊಹಮ್ಮದ್, ಅಬ್ದುಲ್ ರಝಾಕ್ ಕೆಮ್ಮಾರ ಭಾಗಿಯಾಗಿದ್ದರು.