ಜಾನಪದ ಕಲಾವಿದ ವೀರೇಶ ಬಡಿಗೇರ ನಿಧನ
ಧಾರವಾಡ, ಅ.20: ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮರಂಗ ರೂವಾರಿ, ಜಾನಪದ ಕಲಾವಿದ, ದೊಡ್ಡಾಟ ಕಲೆಯ ಮೂಲಕ ಜನಾನುರಾಗಿಯಾಗಿದ್ದ ವೀರೇಶ್ ಬಡಿಗೇರ(50) ಬುಧವಾರ ಬೆಳಗ್ಗೆ ನಿಧನ ಹೊಂದಿದರು.
ಧಾರವಾಡ ಜಿಲ್ಲೆಯ ಜಾನಪದ ಕಲಾವಿದರಿಗೆ ಅದರಲ್ಲೂ ವಿಶೇಷವಾಗಿ ಯುವ ಕಲಾವಿದರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ವೀರೇಶ್ ಬಡಿಗೇರ್ ನಿಧನ ಜಾನಪದ ಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ.
ಅವರು ಪತ್ನಿ ಒಬ್ಬ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಚಿವ ಸುನಿಲ್ ಕುಮಾರ್, ಮಾಳವಾಡ ಸಂತಾಪ: ಬಯಲಾಟ ಪ್ರಕಾರದ ಬಹುದೊಡ್ಡ ಕಲಾವಿದ ವೀರೇಶ್ ಬಡಿಗೇರ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ತಮ್ಮ ಮಧುರ ಕಂಠದಿಂದ ಕೇಳುಗರಿಗೆ ಮಹದಾನಂದವನ್ನು ನೀಡುತ್ತಿದ್ದರು. ಇಂತಹ ಯುವ ಕಲಾವಿದ ಇಷ್ಟು ಬೇಗನೆ ಮರೆಯಾಗುತ್ತಾನೆ ಎಂದು ಭಾವಿಸಿರಲಿಲ್ಲ ಎಂದು ಖ್ಯಾತ ದೊಡ್ಡಾಟ ಕಲಾವಿದ ಮಲ್ಲೇಶ ಮಾಳವಾಡ ದುಃಖಿಸಿದ್ದಾರೆ.