''ಬಿಜೆಪಿಯವರು ಒಂದು ವೋಟಿಗೆ 2 ಸಾವಿರ ರೂ. ಕೊಡ್ತಾರೆಂಬ ಸುದ್ದಿ ಇದೆ'': ಸಿದ್ದರಾಮಯ್ಯ ಆರೋಪ

Update: 2021-10-21 11:33 GMT
ಫೋಟೊ ಕೃಪೆ: twitter@siddaramaiah

ಬೆಂಗಳೂರು, ಅ. 21: `ಬಿಜೆಪಿಯವರು ಹೇಡಿಗಳ ರೀತಿಯಲ್ಲಿ ವರ್ತಿಸುತ್ತಾರೆ. ನನಗೆ ಗೊತ್ತಿರುವ ಮಟ್ಟಿಗೆ ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸುತ್ತಿದ್ದು, ಒಂದು ವೋಟ್(ಮತಕ್ಕೆ)ಗೆ 2 ಸಾವಿರ ರೂ. ಕೊಡುತ್ತಿದ್ದಾರೆಂಬ ಸುದ್ದಿ ಇದೆ. ಏನು ಕೆಲಸ ಮಾಡಿದಾರೆಂದು ಬಿಜೆಪಿಯವರು ಜನರ ಮುಂದೆ ಮತ ಕೇಳುತ್ತಾರೆ? ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಜನ ಏಕೆ ಇವರಿಗೆ ವೋಟು ಹಾಕುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಉಪಚುನಾವಣೆ ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಸೇರಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಯಾವಾಗ ಚರ್ಚಿಸಲು ವಿಷಯಗಳು ಇಲ್ಲವೋ ಆಗ ಅವಹೇಳನಕಾರಿ ಮಾತುಗಳು ಬರುತ್ತವೆ, ನಳಿನ್ ಕುಮಾರ್ ಕಟೀಲ್ ಜೋಕರ್ ಮಟ್ಟದವರು. ಅವರಿಗೆ ತಲೆ ಕೆಟ್ಟಿದೆ ಎಂದು ಕಾಣುತ್ತದೆ. ಅವರು ಪ್ರಬುದ್ದ ರಾಜಕಾರಣಿ ಅಲ್ಲ' ಎಂದು ಟೀಕಿಸಿದರು.

`ಸಿಎಂ ಇಬ್ರಾಹಿಂ ಒಬ್ಬ ವಿಧಾನ ಪರಿಷತ್ ಸದಸ್ಯರು. ಅವರ ಬಗ್ಗೆ ಮಾತನಾಡೋದಿಲ್ಲ ನಾನು. ಪಂಚಮಸಾಲಿ ಸಮುದಾಯದವರಿಗೆ ಮೀಸಲಾತಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಮೀಸಲಾತಿ ಸೌಲಭ್ಯ ಒದಗಿಸುವುದಾಗಿ ನಾಯಕರು ಹೇಳಿದ್ದರು. ಇದೀಗ ವಾಲ್ಮೀಕಿ ಸಮುದಾಯಕ್ಕೂ ಬಿಜೆಪಿ ಆಶ್ವಾಸನೆ ಕೊಟ್ಟಿದೆ. ಅದೆಲ್ಲವನ್ನೂ ಈಗ ಸರಕಾರ ಈಡೇರಿಸಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮಯದಾಯ ಬಿಜೆಪಿಗೆ ಪಾಠ ಕಲಿಸಲಿ' ಎಂದು ಸಿದ್ದರಾಮಯ್ಯ ಹೇಳಿದರು.

`ಯಾವುದೇ ಉಪ ಚುನಾವಣೆ ಫಲಿತಾಂಶ ಸರಕಾರದ ಮೇಲೆ ಪರಿಣಾಮ ಬೀರಲ್ಲ. ಆದರೆ, ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗತ್ತೆ. ಹಣದ ಮದ ಸಚಿವ ಸುಧಾಕರ್ ಅವರಿಗೆ. ಅವರು ಕಾಂಗ್ರೆಸ್‍ನಿಂದ ಗೆದ್ದು ಬಿಜೆಪಿಗೆ ಹೋದವರು. ಇಂಥ ದುರಹಂಕಾರದ ಮಾತುಗಳಿಗೆ ಜನ ಬುದ್ಧಿ ಕಲಿಸ್ತಾರೆ. ಅಧಿಕಾರ ಶಾಶ್ವತ ಎಂದು ತಿಳಿದುಕೊಂಡಿದ್ದಾರೆ. 2023ಕ್ಕೆ ಮನೆಗೆ ಹೋಗ್ತಾರೆ. ಆಗ ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು' ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

`ಕರ್ನಾಟಕದ ಬಿಜೆಪಿಗೆ ಧಂ ಇಲ್ಲ. ಅನುದಾನವನ್ನು ನಾವು ದಿಲ್ಲಿಗೆ ಹೋಗಿ ಭಿಕ್ಷುಕರ ತರಹ ಕೇಳಬೇಕಾ? ಧಂ ಇದ್ದಿದ್ದರೆ ಪ್ರಧಾನಿ ಕಚೇರಿ ಮುಂದೆ 25 ಸಂಸದರು ಹೋಗಿ ನಿಂತು ಅನುದಾನ ವಸೂಲಿ ಮಾಡಬೇಕಿತ್ತು' ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

`ಜನರು ಸರಕಾರದ ವಿರುದ್ಧ ತಿರುಗಿ ಬೀಳದೇ ಹೋದರೆ ಹೀಗೆಯೇ ಆಗೋದು. ಬೆಲೆ ಏರಿಕೆಯನ್ನು ಜನ ಸಹಿಸಿಕೊಂಡಿದ್ದರೆ ಅವರು ಏನು ತಿಳಿದುಕೊಳ್ತಾರೆ? ಜನ ಇವತ್ತು ಬಹಳ ಕಷ್ಟದಲ್ಲಿ ಇದ್ದಾರೆ. ಬೆಲೆ ಏರಿಕೆ ಉಪ ಚುನಾವಣೆಯಲ್ಲಿ ಒಂದು ಅಂಶ. ಭ್ರಷ್ಟಾಚಾರ, ಅಭಿವೃದ್ಧಿ ಕೆಲಸ ಆಗದೇ ಇರುವುದು ಇವೆಲ್ಲವೂ ಪ್ರಚಾರದ ಅಂಶಗಳೇ. ಜನ ಸರಕಾರದ ವಿರುದ್ಧ ತಿರುಗಿಬೀಳಬೇಕು. ಎಲ್ಲವನ್ನ ಸಹಿಸಿಕೊಂಡರೆ ಹೇಗೆ. ಅದನ್ನ ಅವರು ಎನ್ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ. ಹೀಗಾಗಿ ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಅವರು ನುಡಿದರು.

`ಜೆಡಿಎಸ್ ಏನೇ ಮಾಡಿದರೂ ಕೊನೆಗೆ ಬಿಜೆಪಿ ಜೊತೆ ಸೇರಿಕೊಳ್ಳುತ್ತಾರೆ. ಜೆಡಿಎಸ್‍ನವರಿಗೆ ಯಾವುದೇ ಸಿದ್ಧಾಂತವಿಲ್ಲ. ಅಲ್ಪ ಸಂಖ್ಯಾತರು ಬುದ್ಧಿವಂತರಿದ್ದಾರೆ. ಈಗಲೂ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿಕೊಂಡು ಸರಕಾರ ಮಾಡಿದ ಮೇಲೂ ಜಾತ್ಯತೀತ ಆಗುವರೇ ಜೆಡಿಎಸ್‍ನವರು? ಅವರಿಗೆ ಅಲ್ಪಸಂಖ್ಯಾತರು ಏಕೆ ಮತ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

`ಜೆಡಿಎಸ್ ಸೆಕ್ಯುಲರ್ ಪಾರ್ಟಿ ಅಲ್ಲ. ಪ್ರಾದೇಶಿಕ ಪಕ್ಷ ನಿಜ. ಆದರೆ ಜಾತ್ಯತೀತ ಪಕ್ಷ ಅಲ್ಲ. ನಡವಳಿಕೆಯಲ್ಲಿ ಜಾತ್ಯತೀತ ಅಲ್ಲ, ಕೋಮುವಾದಿ. ಆಚಾರದಲ್ಲಿ ಜೆಡಿಎಸ್ ಕೋಮುವಾದಿ ಪಕ್ಷ. ಉಪ ಚುನಾವಣೆಯಲ್ಲಿ ಜೆಡಿಎಸ್‍ಗೆ ಗೆಲುವು ಸುಲಭವಲ್ಲ. ಆದರೆ, ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ' ಎಂದು ಸ್ಪಷ್ಟಣೆ ನೀಡಿದರು.

`ಎಂ.ಎ.ಸಲೀಂ, ವಿ.ಎಸ್.ಉಗ್ರಪ್ಪ ಅವರ ಮಾತು ಬಿಡಿ. ಯತ್ನಾಳ್ ಸರಕಾರದ ಬಗ್ಗೆಯೇ ಮಾತನಾಡಿದ್ದರು. ಅವರ ಮಾತು ಸರಕಾರದ ಮೇಲೆ, ಆಡಳಿತದ ಮೇಲೆ ಪರಿಣಾಮ ಬೀರಲ್ವಾ? ಉಗ್ರಪ್ಪ ಮಾತನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಸಲೀಂ, ಉಗ್ರಪ್ಪ ಏನು ಮಾತನಾಡಿದ್ದಾರೆಂದು ನಾನು ಕೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಮೊದಲು ಯತ್ನಾಳ್ ಹೇಳಿಕೆ ಬಗ್ಗೆ ಉತ್ತರ ಕೊಡಲಿ. ಹಿಂದೆ ಅನಂತ್ ಕುಮಾರ್, ಯಡಿಯೂರಪ್ಪ ಮಾತಾಡಿದರಲ್ಲ ಅದಕ್ಕೆ ಮೊದಲು ಉತ್ತರ ಕೊಡಲಿ' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಆರೆಸ್ಸೆಸ್ , ಕೇಸರಿ ಕಂಡರೆ ಭಯವಿಲ್ಲ 

ಕೇಸರಿ ಕಂಡರೆ, ಆರೆಸ್ಸೆಸ್ ಕಂಡರೆ ನನಗೆ ಭಯ ಇಲ್ಲ. ಆದರೆ, ಶಾಂತಿ ಕದಡಿ ಸಮಾಜ ಒಡೆಯುತ್ತಾರೆ ಎನ್ನುವ ಭಯ ನನಗೆ ಅಷ್ಟೇ. ಸಮಾಜದ ಬಗ್ಗೆ ಕಾಳಜಿ ಅಷ್ಟೇ. ಆರೆಸ್ಸೆಸ್ ಅನ್ನು ನಾನು ಟೀಕಿಸುವುದು ಅವರ ನಡವಳಿಕೆಗೆ. ಪೊಲೀಸರು ಹೋಗಿ ಕೇಸರಿ ಶಾಲು ಹಾಕಿಕೊಂಡರು. ಪೊಲೀಸರಿಗೆ ಸಮವಸ್ತ್ರ ಇರುವುದೇಕೆ? ಪೊಲಿಸರು ಕೇಸರಿ ಶಾಲು ಹಾಕಿಕೊಂಡಿದ್ದು ಪೂರ್ವ ನಿಯೋಜಿತ. 

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News