ಮಧುಗಿರಿ ಕೋರ್ಟ್‍ನಿಂದ ಜಾಮೀನು ರಹಿತ ವಾರೆಂಟ್: ಸಂಕಷ್ಟದಲ್ಲಿ ಕವಿ ವರವರರಾವ್

Update: 2021-10-22 11:49 GMT
 ಕವಿ ವರವರರಾವ್

ಬೆಂಗಳೂರು, ಅ. 22: ‘ಪ್ರಚೋದನಕಾರಿ ಭಾಷಣ ಮಾಡಿದ ಆರೋಪ'ದ ಮೇಲೆ ಬಂಧಿತರಾಗಿದ್ದ ಆಂಧ್ರದ ಖ್ಯಾತಕವಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ವರವರ ರಾವ್ ಅವರಿಗೆ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಮುಂಬೈ ಬಿಟ್ಟುಹೊರ ಹೋಗದಂತೆ ಷರತ್ತು ವಿಧಿಸಿದೆ. ಆದರೆ, ಈ ನಡುವೆ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ ಆರ್ ಪಿ ತುಕಡಿಯ ಮೇಲಿನ ದಾಳಿ ಪ್ರಕರಣ ಸಂಬಂಧ ಮಧುಗಿರಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿರುವುದು ರಾವ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಸುಮಾರು 82 ವರ್ಷ ವಯಸ್ಸಾಗಿರುವ ರಾವ್ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ಜಾಮೀನಿನ ಮೇಲೆ ಮುಂಬೈನಲ್ಲಿ ಇದ್ದಾರೆ. ಮಹಾರಾಷ್ಟ್ರದ ‘ಎಲ್ಗರ್ ಪರಿಷದ್ ಸಮಾವೇಶ'ದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದರು. ಈ ಮಧ್ಯೆ ರಾವ್ ಅವರ ಕುಟುಂಬ ಹಣಕಾಸಿನ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟು ಹೈದರಾಬಾದ್‍ಗೆ ಅವರನ್ನು ಕರೆತರಲು ಮನವಿ ಮಾಡಿದರೂ ಕೋರ್ಟ್ ಅದನ್ನು ಪುರಸ್ಕರಿಸಿಲ್ಲ. ಅ.28ರಂದು ಅವರ ಜಾಮೀನು ಮುಂದುವರಿಕೆಯ ಅರ್ಜಿ ವಿಚಾರಣೆಗೆ ಬರಲಿದೆ.

ಆದರೆ, ಈ ಮಧ್ಯೆ 2005ರ ಮತ್ತೊಂದು ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಕೋರ್ಟ್ ಅವರಿಗೆ ಹಲವು ಬಾರಿ ಸಮನ್ಸ್ ಕಳುಹಿಸಿತ್ತು. ಆದರೆ, ರಾವ್ ಅವರು ವಿಚಾರಣೆಗೆ ಗೈರು ಹಾಜರಾಗಿರುವ ಕಾರಣ ನೀಡಿ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿ(ಭದ್ರತೆ) ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿರುವುದು ರಾವ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮುಂಬೈ ಹೈಕೋರ್ಟ್ ವರವರರಾವ್ ಅವರಿಗೆ ಜಾಮೀನು ನೀಡುವ ವೇಳೆ ಮುಂಬೈ ಬಿಟ್ಟು ಹೊರಹೋಗಬಾರದೆಂದು ಷರತ್ತು ವಿಧಿಸಿದೆ. ಹೀಗಾಗಿ ಅವರು ಮಧುಗಿರಿ ಕೋರ್ಟ್‍ನಲ್ಲಿ ನಡೆದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಿರುವಾಗ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ, ಅವರ ಶ್ಯೂರಿಟಿ ಮುಟ್ಟುಗೋಲು ಹಾಕಿಕೊಂಡು, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲು ಹೇಗೆ ಸಾಧ್ಯ ಎಂಬುದು ಕುಟುಂಬ ಸದಸ್ಯರ ಪ್ರಶ್ನೆ.

ಏನಿದು ಪ್ರಕರಣ: 2005ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಅವರ ಎನ್‍ಕೌಂಟರ್ ನಡೆದಿತ್ತು. ಘಟನೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ವರವರ ರಾವ್ ಹಾಗೂ ತೆಲುಗಿನ ಗಾಯಕ ಗದ್ದರ್ ಪಾಲ್ಗೊಂಡಿದ್ದರು. ಆ ಬಳಿಕ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲೀಯರ ತಂಡವೊಂದು ಕೆಎಸ್ರ್ಸಾಪಿ ತುಕಡಿ ಮೇಲೆ ದಾಳಿ ಮಾಡಿದ್ದರಿಂದ 7 ಮಂದಿ ಪೊಲೀಸರು ಹತ್ಯೆಯಾಗಿದ್ದಾರೆಂಬ ಆರೋಪ ಮಾಡಲಾಗಿತ್ತು.

ನಕ್ಸಲರ ಈ ದಾಳಿಗೆ ವರವರ ರಾವ್ ಮತ್ತು ಗದ್ದರ್ ಅವರು ಬೆಂಗಳೂರಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದೆ ಪ್ರೇರಣೆ ಎಂದು ದೂರಿ ಅವರಿಬ್ಬರ ಮೇಲೆ ಪ್ರಕರಣ ದಾಖಲಾಗಿತ್ತು. ವಿಚಿತ್ರವೆಂದರೆ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ 22 ಮಂದಿ ಪ್ರಕರಣದಿಂದ ಖುಲಾಸೆಯಾಗಿದ್ದರೂ ವರವರರಾವ್ ಮತ್ತು ಗದ್ದರ್ ಮೇಲಿನ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ರಾವ್ ಅವರಿಗೆ 2021ರ ಫೆ.22ರಂದು ಮುಂಬೈ ಹೈಕೋರ್ಟ್ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಸೆ.5ರಂದು ನ್ಯಾಯಾಂಗ ಬಂಧನಕ್ಕೆ ಮರಳುವಂತೆ ನಿರ್ಧರಿಸಲಾಗಿತ್ತು. ಆದರೆ, ಕೋರ್ಟ್ ಸಮಯಾವಕಾಶವಿಲ್ಲದ ಕಾರಣದಿಂದ ಅ.28ರವರೆಗೆ ಅವರ ವೈದ್ಯಕೀಯ ಜಾಮೀನು ಅವಧಿ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News