ಶಿವಮೊಗ್ಗ: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ; ಗ್ರಾಮ ಪಂಚಾಯತ್ ಅಧ್ಯಕ್ಷೆ ವಶಕ್ಕೆ

Update: 2021-10-22 15:47 GMT

ಶಿವಮೊಗ್ಗ ,ಅ.22: ಕಾಮಗಾರಿಯ ಬಿಲ್ ಮೊತ್ತವನ್ನು ಮಂಜೂರುಮಾಡಿಕೊಡಲು ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಹಣದ ಅರ್ಧ ಭಾಗವನ್ನು ಸ್ವಿಕರಿಸುತ್ತಿದ್ದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದಾರೆ. 

ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ (47) ಎಸಿಬಿ ಬಲೆಗೆ ಬಿದ್ದವರು. 

ಮುದ್ದಿನಕೊಪ್ಪ ಗ್ರಾಮದ ನಿವಾಸಿಯೊಬ್ಬರು ಗುತ್ತಿಗೆದಾರರೊಬ್ಬರ ಪರವಾಗಿ ಕಟ್ಟಡ ಕಾಮಗಾರಿಯೊಂದನ್ನು ಪೂರ್ಣಗೊಳಿಸಿದ್ದರು. 2020ರ ಜನವರಿಯಲ್ಲೇ ಕಾಮಗಾರಿ ಮುಕ್ತಾಯವಾಗಿತ್ತು. 

ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು 50 ಸಾವಿರ ರೂ. ಕೊಡುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ ಬೇಡಿಕೆ ಇಟ್ಟಿದ್ದರು. ಅದರಂತೆ ಇಂದು 25 ಸಾವಿರ ರೂ.ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಮುದ್ದಿನಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ವೇಣಿ ಕಣ್ಣನ್ ಅವರನ್ನು ಬಂಧಿಸಿ, ಪ್ರಕರಣ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News