ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ

Update: 2021-10-22 16:08 GMT

ಶಿವಮೊಗ್ಗ, ಅ.22:ನಳಿನ್ ಕುಮಾರ್ ಕಟೀಲ್ ಅವರಿಗೆ ಸೀರೆ ಉಡಿಸಿದರೆ ಅವರು ಗಂಡಸು ಅಲ್ಲ,ಹೆಂಗಸು ಅಲ್ಲ ಎಂದು ಕಾಂಗ್ರೆಸ್ ವಕ್ತಾರ,ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ವ್ಯಂಗವಾಡಿದ್ದಾರೆ.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ದ ಹೇಳಿಕೆ ನೀಡಿದ  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹರಿಹಾಯ್ದರು.ಬಿಜೆಪಿಯಲ್ಲಿ ಕೊಳೆತು ನಾರುವಷ್ಟು ವಿಷಯಗಳಿವೆ,ನಮ್ಮ ನಾಯಕರ ವಿರುದ್ದ  ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಟೀಕಿಸಿದರು.

ರೇಪ್ ಮಾಡಿದವರು ಸದನದಲ್ಲಿ ಬ್ಲೂ ಫಿಲಂ ನೋಡಿದವರು, ಭ್ರಷ್ಟಾಚಾರ ಮಾಡಿದವರು ಬಿಜೆಪಿಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಅವರನ್ನು ಟೀಕಿಸಲಿ ಎಂದ ಅವರು, ಸಚಿವ ಕೆ.ಎಸ್ ಈಶ್ವರಪ್ಪನವರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಅವರು ಕೂಡಾ ಕಾಂಗ್ರೆಸ್ ನಾಯಕರ ಬಗ್ಗೆ ಮಿತಿಮೀರಿ ಬೈಯುತ್ತಿದ್ದಾರೆ. ಆದರೆ, ಅವರಿಗೆ ನೆನಪಿರಲಿ ಬೇಳೂರಿಗೆ ಬೈಯಲು ಆಗುವುದಿಲ್ಲವೆಂದೆನೂ ಅಲ್ಲ ಎಂದರು.

ಕಾಂಗ್ರೆಸ್ ಪಕ್ಷವನ್ನು ಬಿಜೆಪಿಯವರು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ.ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವರು ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷ ಇರುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ.ಹಾಗೆಲ್ಲ ಹೇಳುತ್ತಿರುವವರೇ ಮುಂದಿನ ಚುನಾವಣೆಗೆ ಇರುವುದಿಲ್ಲ.ಬಿಜೆಪಿಯಲ್ಲಿ ಮೂಲೆಗುಂಪಾಗುತ್ತಾರೆ ಎಂದರು.

ನೈತಿಕ ಪೊಲೀಸ್‌ಗಿರಿ ಕೆಲವು ಸಂದರ್ಭದಲ್ಲಿ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.ರಾಜ್ಯವನ್ನು ಮುನ್ನೆಡೆಸುವವರು ಈ ರೀತಿ ಹೇಳಿಕೆ ನೀಡುವುದು ಎಷ್ಟರ ಮಟ್ಟಿ ಸರಿ ಎಂದು ಪ್ರಶ್ನಿಸಿದ ಅವರು,ಸಿಎಂ ಹೇಳಿಕೆಯಿಂದ ಎಲ್ಲಾ ಜಾತಿ,ಧರ್ಮದ ನೈತಿಕ ಪೊಲೀಸ್‌ಗಿರಿ ಹೆಚ್ಚಳವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮುಸ್ಲಿಂ ಮತಕ್ಕಾಗಿ ಹೇಳಿಕೆ:

ಆರ್‌ಎಸ್‌ಎಸ್ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೇಳೂರು,ಮುಸ್ಲಿಂ ಸಮುದಾಯದ ಮತಕ್ಕಾಗಿ ಕುಮಾರ ಸ್ವಾಮಿ ಈರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಳಸಂತೆಯಲ್ಲಿ ಗೊಬ್ಬರ ಮಾರಾಟ:

ಮಲೆನಾಡು ಭಾಗದಲ್ಲಿ ಅಡಿಕೆಗೆ ಎಲೆ ಚುಕ್ಕೆ ರೋಗ ಬಂದಿದೆ. ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಮತ್ತು ರೈತರಿಗೆ ಅಗತ್ಯವಾಗಿ ಬೇಕಾದ ರಸಗೊಬ್ಬರ ಕೂಡಾ ಇಲಾಖೆಯಲ್ಲೂ ಸಿಗುತ್ತಿಲ್ಲ, ಸರ್ಕಾರದಲ್ಲೂ ಕೂಡ ಇಲ್ಲ. ಆದರೆ, ಖಾಸಗಿಯಲ್ಲಿ ಮಾತ್ರ ಗೊಬ್ಬರ ಸಿಗುತ್ತದೆ. ಕಳ್ಳ ಸಂತೆಯಲ್ಲಿ ಗೊಬ್ಬರ ಮಾರಾಟ ಆಗುತ್ತಿದ್ದರೂ ಕೂಡ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಟೀಕಿಸಿದರು.

ಸರ್ಕಾರಿ ನೌಕರರ ರಾಜ್ಯಾಧ್ಯಕ್ಷರ ಬಗ್ಗೆ ತೀವ್ರ ತರಾಟೆ :

ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡ ಬೇಳೂರು ಈತ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾನೆ. ವರ್ಗಾವಣೆ ದಂಧೆಯಲ್ಲಿ ಈತನೇ ರೂವಾರಿಯಾಗಿದ್ದಾನೆ. ರಾಘವೇಂದ್ರ, ವಿಜಯೇಂದ್ರ, ಉಮೇಶ ಅವರ ಜೊತೆ ಸೇರಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಉಪ್ಪಾರ ಪೇಟೆಯ ಇನ್ಸ್ ಪೆಕ್ಟರ್ ಅಂತಹ ಚಿಕ್ಕ ಹುದ್ದೆಯ ವರ್ಗಾವಣೆಗೂ ಲಕ್ಷಾಂತರ ರೂ. ಪಡೆಯುತ್ತಾರೆ ಎಂದರೆ ಅದೆಷ್ಟು ಹಣ ಲೂಟಿ ಮಾಡಿದ್ದಾರೆ ಎಂದು ತಿಳಿದುಕೊಳ್ಳಬೇಕು. ಮೊದಲು ಈತನ ಮನೆ ಮೇಲೆ ಇಡಿ ರೈಡ್ ಆಗಬೇಕು. ಇದರ ಮೇಲೆ ಚುನಾವಣೆಗೆ ನಿಲ್ಲಲು ಹೊರಟಿದ್ದಾನೆ ಎಂಬ ಸುದ್ದಿಯೂ ಇದೆ. ಹಡಬೆ ದುಡ್ಡಿನಲ್ಲಿ ಇದೆಲ್ಲ ಮಾಡುತ್ತಿದ್ದಾನೆ ಎಂದು ಹರಿಹಾಯ್ದರು.

ಜಿಲ್ಲಾಧಿಕಾರಿಗಳಿಂದ ಗ್ರಾಮ ವಾಸ್ತವ್ಯದ ನಾಟಕ :

ಜಿಲ್ಲಾಧಿಕಾರಿಗಳು ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಗ್ರಾಮ ವಾಸ್ತವ್ಯವನ್ನು ಶಿವಮೊಗ್ಗದಿಂದ ಕೇವಲ ೮ ಕಿ,ಮೀ ಇರುವ ಗಾಜನೂರಿನಲ್ಲಿ ಮಾಡಿದ್ದಾರೆ. ಇದೊಂದು ಕಾಟಾಚಾರದ ಕ್ರಿಯೆ ಆಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶದಲ್ಲಿ ಬಸ್ ಗಳಿಲ್ಲದ ರಸ್ತೆಗಳಿಲ್ಲದ, ವಿದ್ಯುತ್ ಇಲ್ಲದ, ಆಸ್ಪತ್ರೆ ಇಲ್ಲದ ಗ್ರಾಮಗಳಿಗೆ ಭೇಟಿಕೊಟ್ಟರೆ ವಾಸ್ತವ್ಯಕ್ಕೂ ಒಂದು ಅರ್ಥ ಬರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ ಮಂಜುನಾಥ್, ಶಾಂತವೀರ ನಾಯ್ಕ್, ರಾಜ್ ಕುಮಾರ್, ಸೋಮಶೇಖರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News