ಶಿವಮೊಗ್ಗದ ಉದ್ಯಮಿಗೆ ಶಂಕಿತ ಉಗ್ರನಿಂದ ಬೆದರಿಕೆ ಕರೆ; ಮಹಿಳೆಯ ಬಂಧನ

Update: 2021-10-23 06:35 GMT

ಶಿವಮೊಗ್ಗ : ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ ಪ್ರಕರಣ ಸಂಬಂಧ ಶಂಕಿತ ಉಗ್ರನ ಪತ್ನಿಯನ್ನು ಶಿವಮೊಗ್ಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಟ್ಕಳದ ಸಾಹಿರಾ ಬಾನು ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಜುಲೈ 14ರಂದು ಇಂಟರ್ನೆಟ್ ಕಾಲ್ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಕುಖ್ಯಾತ ರೌಡಿಶೀಟರ್ ಹೆಬ್ಬೆಟ್ ಮಂಜ ಎಂದು ಪರಿಚಯಿಸಿಕೊಂಡಿದ್ದು, ತನಗೆ 5 ಲಕ್ಷ ರೂ. ಹಣ ಬೇಕಿದೆ ಎಂದು ಬೆದರಿಸಿದ್ದಾನೆ. ಅಷ್ಟೊಂದು ಹಣವಿಲ್ಲ ಎಂದು ಉದ್ಯಮಿ ಹೇಳಿದರೂ ಕೇಳದೆ ಜೀವ ಬೆದರಿಕೆ ಒಡ್ಡಿದ್ದು, ಕೊನೆಗೆ ಕರೆ ಮಾಡಿದ್ದ ವ್ಯಕ್ತಿ ಹೇಳಿದ ಬ್ಯಾಂಕ್ ಖಾತೆಗೆ ಉದ್ಯಮಿ 50 ಸಾವಿರ ರೂ. ಹಣ ವರ್ಗಾಯಿಸಿದ್ದಾರೆ ಎಂದು ದೂರಲಾಗಿದೆ.

ಉದ್ಯಮಿಗೆ ಇತ್ತೀಚೆಗೆ ಮತ್ತೆ ಅಪರಿಚಿತ ಮೊಬೈಲ್ ನಂಬರ್’ಗಳಿಂದ ಕರೆ ಮತ್ತು ಮೆಸೇಜುಗಳು ಬರಲು ಆರಂಭವಾಗಿದ್ದವು. ಆತಂಕಗೊಂಡ ಉದ್ಯಮಿ ಶಿವಮೊಗ್ಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಭಟ್ಕಳಕ್ಕೆ ತೆರಳಿ ಸಾಹೀರಾ ಬಾನು ಎಂಬಾಕೆಯನ್ನು ಬಂಧಿಸಿದ್ದಾರೆ.

ಸಾಹೀರಾ ಬಾನು ಪತಿ ಸದ್ದಾಮ್ ಹುಸೈನ್ ಎಂಬಾತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಬೆಂಗಳೂರು ಬಾಂಬ್ ಸ್ಫೋಟಕ್ಕೆ ಸ್ಫೋಟಕಗಳನ್ನು ಪೂರೈಕೆ ಮಾಡಿದ ಆರೋಪವಿದ್ದು, ಏಳು ವರ್ಷದಿಂದ ವಿಚಾರಣಾಧೀನ ಕೈದಿಯಾಗಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಈತ ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿ, ಪತ್ನಿಯ ಖಾತೆಗೆ ಹಣ ವರ್ಗಾಯಿಸಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಸಿಇಎನ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News