ಮುಸ್ಲಿಮರಿಗೆ ಅಂಗೈಯಲ್ಲಿ ಸ್ವರ್ಗ ತೋರಿಸುತ್ತಿರುವ ಬಿಎಸ್‍ವೈ-ಎಚ್‍ಡಿಕೆ: ನಸೀರ್ ಅಹ್ಮದ್

Update: 2021-10-24 10:53 GMT

ಸಿಂದಗಿ, ಅ. 24: ಸಿಂದಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ, ಮುಸ್ಲಿಮರಿಗೆ ಅಂಗೈಯಲ್ಲಿ ಸ್ವರ್ಗವನ್ನು ತೋರಿಸಿ ಅವರ ಮತಗಳನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಟೀಕಿಸಿದ್ದಾರೆ.

ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮುಸ್ಲಿಮರಿಗೆ ತಮ್ಮ ನೈಜ ಮಿತ್ರ ಹಾಗೂ ಶತ್ರು ಯಾರು ಎಂಬುದು ಬಹಳ ಸ್ಪಷ್ಟವಾಗಿ ಗೊತ್ತಿದೆ. ಮುಸ್ಲಿಮರು ರಾಜಕೀಯ ವಿಚಾರಗಳ ಬಗ್ಗೆ ಅತ್ಯಂತ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದಾರೆ ಎಂದರು.

ಸಿಂದಗಿಯಲ್ಲಿ ಅಶೋಕ್ ಮನಗೂಳಿಗೆ ಮುಸ್ಲಿಮರು ತಮ್ಮ ಮತ ನೀಡುವ ಮೂಲಕ ಜಾತ್ಯತೀತ ಶಕ್ತಿಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಎಂಬ ಸ್ಪಷ್ಟ ಸಂದೇಶವನ್ನು ಇಡೀ ದೇಶಕ್ಕೆ ನೀಡಲಿದ್ದಾರೆ. ರಾಜ್ಯದಲ್ಲಿ ಶೇ.14ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಮರ ಒಬ್ಬನೇ ಒಬ್ಬ ಪ್ರತಿನಿಧಿಯೂ ಯಡಿಯೂರಪ್ಪ ಹಾಗೂ ಈಗಿರುವ ಬೊಮ್ಮಾಯಿ ಸರಕಾರದ ಭಾಗವಾಗಿಲ್ಲ ಎಂದು ಅವರು ಟೀಕಿಸಿದರು.

ಜೆಡಿಎಸ್ ಪಕ್ಷದವರು ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಿಂದಗಿ ಹಾಗೂ ಹಾನಗಲ್ ಎರಡು ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಜಾತ್ಯತೀತ ಮತಗಳನ್ನು ವಿಭಜನೆ ಮಾಡಿ, ಬಿಜೆಪಿಗೆ ಅನುಕೂಲ ಮಾಡಲು ಹೊರಟಿದ್ದಾರೆ. ಇವರ ನಕಲಿ ಜಾತ್ಯತೀತ ತತ್ವಕ್ಕೆ ಮನ್ನಣೆ ನೀಡದೆ ಮುಸ್ಲಿಮರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ರಹೀಮ್ ಖಾನ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News