“ಜಾತಿ ಹೋಗಬೇಕು ಅಂತಾರೆ, ಆದರೆ ಸಿಂದಗಿಯಲ್ಲಿ ಜಾತಿಗೊಂದು ಸಮಾವೇಶ ಮಾಡ್ತಾರೆ”

Update: 2021-10-25 06:59 GMT
 ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಿದರು.

ಮೈಸೂರು, ಅ.25: ಜೆಡಿಎಸ್ ಅನ್ನು ಜಾತಿ ಪಕ್ಷ ಎಂದು ಅಪಪ್ರಚಾರ ಮಾಡುವ ಸಿದ್ದರಾಮಯ್ಯ ಅವರು ಸಿಂದಗಿಯಲ್ಲಿ ಕೂತು ಜಾತಿಗೊಂದು ಸಮಾವೇಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಮೈಸೂರಿನಲ್ಲಿಂದ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು.

“ನಿನ್ನೆಯ ದಿನ ಸಿದ್ದರಾಮಯ್ಯ ಕುರುಬರಿಗೊಂದು ಪ್ರತ್ಯೇಕ ಸಮಾವೇಶ, ತಳವಾರ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ, ಕೋಳಿ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ ಮಾಡಿದ್ದಾರೆ. ಇದು ಯಾವ ಸೀಮೆಯ ಜಾತ್ಯತೀತತೆ? ಬಾಯಲ್ಲಿ ಮಾತ್ರ ಜಾತ್ಯತೀತ, ಒಳಗೆಲ್ಲ ಬರೀ ಜಾತಿ. ನಮ್ಮ ರಾಜ್ಯದಲ್ಲಿ ಜಾತಿ-ಜಾತಿಗಳ ನಡವೆ ಕಂದಕ ಸೃಷ್ಟಿ ಮಾಡುತ್ತಿರುವುದೇ ಇದೇ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

 ನಾನೂ ಕುರಿ ಸಾಕುತ್ತೇನೆ, ಬಂದು ನೋಡಲಿ:

ಮುಖ್ಯಮಂತ್ರಿ ಬೊಮ್ಮಾಯಿ ಯಾವ ಕುರಿ ಕಾಯ್ದವರೇ ಎಂದು ಲಘುವಾಗಿ ಮಾತನಾಡಿದ್ದಾರೆ ಸಿದ್ದರಾಮಯ್ಯ. ಇವರೊಬ್ಬರೇನಾ ಕುರಿ ಕಾಯ್ದವರು? ಚಿಕ್ಕ ಮಕ್ಕಳಿದ್ದಾಗ ನಾವು ಕುರಿ ಮಂದೆಯಲ್ಲೇ ಊಟ ಮಾಡಿ ಅಲ್ಲೇ ಮಲಗ್ತಿದ್ದೆವು. ನಾವು ಕೂಡ ಕುರಿ ಸಾಕಿದ್ದೇವೆ, ಈಗಲೂ ಸಾಕುತ್ತಿದ್ದೇವೆ. ಬೇಕಾದರೆ ಬಿಡದಿ ತೋಟಕ್ಕೆ ಬಂದು ನೋಡಲಿ. ಕುರಿ ಸಾಕಣೆ ಮಾಡಿದವರು ಸಿದ್ದರಾಮಯ್ಯ ಒಬ್ಬರೇ ಅಲ್ಲ ಎಂದು ಪ್ರತಿಪಕ್ಷ ನಾಯಕನಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ಮೊನ್ನೆ ಹಾನಗಲ್ʼನಲ್ಲಿ ಭಾಷಣ ಮಾಡುತ್ತಿದ್ದರು ಇದೇ ಮಹಾನುಭಾವರು. ಕುಮಾರಸ್ವಾಮಿ ನೇಗಿಲು ಹಿಡಿದವ್ನಾ? ಕೃಷಿ ಮಾಡವ್ನಾ? ಕೂಲಿ ಮಾಡವ್ನಾ? ಅವನಿಗೇನು ಗೊತ್ತು ಕೃಷಿ? ಎಂದು ಕೇವಲವಾಗಿ ಮಾತನಾಡಿದ್ದಾರೆ. ನಾನು ಯಾವ ರೀತಿ ಕೃಷಿ ಮಾಡುತ್ತಿದ್ದೇನೆ ಎನ್ನುವುದನ್ನು ಅವರು ನನ್ನ ತೋಟಕ್ಕೇ ಬಂದು ನೋಡಲಿ. ಸಿದ್ದರಾಮಯ್ಯ ಏನ್ಮಾಡಿದ್ದಾರೆ? ಅವರದ್ದು ತೋಟ ಇರಬೇಕಲ್ಲಾ? ಏನೇನು ಮಾಡಿದ್ದಾರೋ ಹೇಳಲಿ. ನಾವು ಕೂಲಿಯನ್ನೂ ಮಾಡಿದ್ದೇವೆ, ನೇಗಿಲನ್ನೂ ಹಿಡಿದಿದ್ದೇವೆ, ತಲೆಯ ಮೇಲೆ ಗೊಬ್ಬರವನ್ನೂ ಹೊತ್ತಿದ್ದೇವೆ. ಇವರೊಬ್ಬರೇ ಅಲ್ಲ ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

 ದೇವೇಗೌಡರು, ಕುಮಾರಸ್ವಾಮಿ ಅವರು ಸಿಂಧಗಿಯಲ್ಲಿ ಬೀಡುಬಿಟ್ಟಿರುವುದೇ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿಕ್ಕೆ ಎಂದು ಸಿದ್ದರಾಮಯ್ಯ ಮತ್ತು ಅವರ ಆಪ್ತರು ಆರೋಪ ಮಾಡಿದ್ದಾರೆ. ಹಾಗಾದರೆ, ಜೆಡಿಎಸ್ ಪಕ್ಷವನ್ನು ಸೋಲಿಸಲು ಅವರೂ ಕೂಡ ಸಿಂದಗಿಯಲ್ಲೇ ಬೀಡುಬಿಟ್ಟಿದ್ದಾರೆಂದು ನಾನೂ ಹೇಳಬಹುದಲ್ಲ ಎಂದ ಅವರು. ಕಾಂಗ್ರೆಸ್ ಪಕ್ಷವೆಂದೂ ಸಹ ಸಿಂದಗಿಯಲ್ಲಿ ಎರಡನೇ ಸ್ಥಾನಕ್ಕೇ ಬಂದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News