ನಾವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ಬಡವರಿಗೆ 10ಕೆ.ಜಿ ಅಕ್ಕಿ: ಸಿದ್ದರಾಮಯ್ಯ

Update: 2021-10-25 11:53 GMT

ವಿಜಯಪುರ, ಅ. 25: ‘ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ಬಂಜಾರ ಸಮುದಾಯದ ಕುಲಕಸುಬಾದ ‘ಕಸೂತಿ ವೃತ್ತಿ'ಯನ್ನು ಅಭಿವೃದ್ಧಿ ಪಡಿಸಲು 100 ಕೋಟಿ ರೂ.ಅನುದಾನ ನೀಡುತ್ತೇವೆ. ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ ತಮ್ಮ ಮತ ನೀಡುವ ಮೂಲಕ ಗೆಲ್ಲಿಸಿ ಕೊಡಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ಸಿಂದಗಿಯಲ್ಲಿ ಆಯೋಜಿಸಿದ್ದ ಬಂಜಾರ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಂಜಾರ ಸಮುದಾಯವರು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತವರು. ಆದರೆ, ಇತ್ತೀಚೆಗೆ ಬಿಜೆಪಿಯವರು ಈ ಸಮಾಜದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣದಿಂದ ಇಂದು ಸಮಾವೇಶ ನಡೆಸಿ, ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

‘2013ರಲ್ಲಿ ಬಸವಜಯಂತಿಯಂದು ಅಧಿಕಾರ ಸ್ವೀಕಾರ ಮಾಡಿದೆ. ಬಸವಣ್ಣನವರ ಸಾಮಾಜಿಕ ಸಮಾನತೆಯ ಕನಸನ್ನು ನನಸು ಮಾಡಬೇಕೆಂದು ನನ್ನ 5 ವರ್ಷಗಳ ಆಡಳಿತದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ. ಅಧಿಕಾರ ವಹಿಸಿಕೊಂಡ ಮರು ಘಳಿಗೆಯಲ್ಲೇ ಸಂಪುಟ ಸಭೆ ಕರೆದು ಎಲ್ಲ ಜಾತಿ ಧರ್ಮಗಳ ಬಡವರಿಗೆ ಉಚಿತವಾಗಿ ಅಕ್ಕಿ ನೀಡುವ ‘ಅನ್ನಭಾಗ್ಯ' ಯೋಜನೆ ಘೋಷಣೆ ಮಾಡಿದೆ. ಇದರಿಂದ ಉದ್ಯೋಗ ಅರಸಿ ಹೊಟ್ಟೆಪಾಡಿಗಾಗಿ ಗುಳೆ ಹೋಗುತ್ತಿದ್ದ ಬಂಜಾರ ಸಮಾಜದ ಜನರು ತಮ್ಮ ಊರುಗಳಲ್ಲೇ ನೆಲೆ ಕಂಡುಕೊಳ್ಳಲು ಸಾಧ್ಯವಾಯಿತು. ಆದರೆ, ಈಗಿನ ಸರಕಾರ ಅಕ್ಕಿ ಪ್ರಮಾಣವನ್ನು 5 ಕೆ.ಜಿ.ಗೆ ಇಳಿಸಿ ನೀವು ತಿನ್ನುವ ಅನ್ನ ಕಸಿದಿದೆ. 2023ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬಂದಮೇಲೆ ಪ್ರತಿ ಬಡವರಿಗೆ 10ಕೆ.ಜಿ ಅಕ್ಕಿಯನ್ನು ಕೊಡುತ್ತೇವೆ ಎಂದು ಅವರು ಭರವಸೆ ನೀಡಿದರು.

‘ದೇವರಾಜ ಅರಸು ಅವರ ಸರಕಾರದಲ್ಲಿ ಕೆ.ಪಿ.ರಾಥೋಡ್ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಬಂಜಾರ ಸಮುದಾಯ ಮೀಸಲಾತಿ ಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿತ್ತು. ಇವರನ್ನು ಹಿಂದುಳಿದ ಜಾತಿಗೆ ಸೇರಿಸಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದವರು ಅರಸು ಮತ್ತು ರಾಥೋಡ್ ಅವರು. ಈ ಎಸ್ಸಿ ಮೀಸಲಾತಿ ದೊರೆತ ಕಾರಣಕ್ಕೆ ಬಂಜಾರ ಸಮುದಾಯ ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.

‘ನಾನು ಸಿಎಂ ಆಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಲ್ಲಿದ್ದ ಬಡವರ ಸಾಲ ಮನ್ನಾ ಮಾಡಿದ್ದೆ, ಕ್ಷೀರಧಾರೆ ಯೋಜನೆಯಡಿ ಹೈನುಗಾರರಿಗೆ ಪ್ರತೀ ಲೀ.ಹಾಲಿಗೆ  5 ರೂ. ಪ್ರೋತ್ಸಾಹ ಧನ ನೀಡಿದ್ದೆ. ಬಿಜೆಪಿ ಸರಕಾರ ಬಾಕಿ ಹಣ ಪಾವತಿಸದ ಕಾರಣಕ್ಕೆ ‘ಭಾಗ್ಯಜ್ಯೋತಿ' ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಿತ್ತು, 2013ರಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ಈ ಬಾಕಿ ಹಣವನ್ನು ಮನ್ನಾ ಮಾಡಿ, ಕತ್ತಲೆಯಾಗಿದ್ದ ಮನೆಗಳಿಗೆ ಬೆಳಕು ನೀಡಿದ್ದೆವು' ಎಂದು ಸಿದ್ದರಾಮಯ್ಯ ತಿಳಿಸಿದರು.

‘ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಭೀಮಾನಾಯ್ಕ್ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. ಆಗ ನಾವು ವಾರ್ಷಿಕ 200 ಕೋಟಿ ರೂ.ಗಳನ್ನು ಸಮಾಜದ ಅಭಿವೃದ್ಧಿಗೆ ನೀಡಿದ್ದೆ. ಬಿಜೆಪಿ ಸರಕಾರ ಈ ಅನುದಾನವನ್ನು 10 ಕೋಟಿ ರೂ.ಗೆ ಇಳಿಕೆ ಮಾಡಿದೆ. ಸಂತ ಸೇವಾಲಾಲ್ ಜಯಂತಿಯನ್ನು ಸರಕಾರಿ ಜಯಂತಿಯಾಗಿ ಆಚರಣೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದು ನಮ್ಮ ಸರಕಾರ. ಎಸ್ಸಿ-ಎಸ್ಟಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ 5 ವರ್ಷಗಳಲ್ಲಿ ನಮ್ಮ ಸಡಿಕಾರ 84 ಸಾವಿರ ಕೋಟಿ ರೂ.ಖರ್ಚು ಮಾಡಿತ್ತು. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗುವಂತೆ ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆ ಜಾರಿಗೊಳಿಸಿದ್ದು ನಮ್ಮ ಸರಕಾರ' ಎಂದು ಸಿದ್ದರಾಮಯ್ಯ ನುಡಿದರು.

‘ರಾಜ್ಯದಲ್ಲಿ ತಾಂಡಗಳು, ಹಟ್ಟಿಗಳು, ಮಜರೆಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕ್ರಾಂತಿಕಾರಕ ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸಿ, ಲಕ್ಷಾಂತರ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಿದ್ದು ನಮ್ಮ ಸರಕಾರ. ಹೀಗಾಗಿ ಸಿಂದಗಿ ಕ್ಷೇತ್ರದ ಬಂಜಾರ ಸಮುದಾಯದ ಜನರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಪಕ್ಷಕ್ಕೆ ಬಲ ನೀಡಬೇಕು ಎಂದು ಸಿದ್ದರಾಮಯ್ಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News