ಮಡಿಕೇರಿ ಹೋಂಸ್ಟೇಯಲ್ಲಿ ಯುವತಿ ಸಾವು: ಪೊಲೀಸರಿಂದ ತನಿಖೆ

Update: 2021-10-25 13:41 GMT

ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬಂದಿದ್ದ ಬಳ್ಳಾರಿ ಮೂಲದ ಯುವತಿಯೊಬ್ಬಳು ಹೋಂಸ್ಟೇಯೊಂದರ ಬಾತ್ ರೂಂನಲ್ಲಿ ಕುಸಿದು ಬಿದ್ದು ಸಾವನಪ್ಪಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. 

ಬಳ್ಳಾರಿ ತೋರಣಗಲ್ ನಿವಾಸಿ ಮುಂಬೈನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ವಿಘ್ನೇಶ್ವರಿ ಈಶ್ವರನ್(24) ಎಂಬವರೇ ಮೃತಪಟ್ಟ ಯುವತಿಯಾಗಿದ್ದಾಳೆ. 

ನಗರದ ಅಗ್ನಿ ಶಾಮಕ ದಳದ ಕಚೇರಿ ಬಳಿ ಇರುವ ಹೋಂಸ್ಟೇಯಲ್ಲಿ ಈ ಘಟನೆ ನಡೆದಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಗ್ಯಾಸ್ ಗೀಸರ್ ನಿಂದ ಕಾರ್ಬನ್ ಸೋರಿಕೆಯಾಗಿ ಈ ಘಟನೆ ಸಂಭವಿಸಿರಬಹುದೆಂದು ಅಂದಾಜಿಸಲಾಗಿದ್ದು, ಆ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಳ್ಳಾರಿ ಮೂಲದ ಯುವತಿ ವಿಘ್ನೇಶ್ವರಿ ಈಶ್ವರನ್ ಎಂ.ಬಿ.ಎ ಪೂರೈಸಿದ್ದು, 9 ತಿಂಗಳಿಂದ ಮುಂಬೈ ಮೂಲದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು.

‘ವರ್ಕ್ ಫ್ರಂ ಹೋಂ’ ಮುಂದುವರೆದಿರುವ ಕಾರಣ ಆನ್‍ಲೈನ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ವಿಘ್ನೇಶ್ವರಿ ಮುಂಬೈನಿಂದ ಹೊರಟು ಬೆಂಗಳೂರಿಗೆ ಆಗಮಿಸಿ ಅಲ್ಲಿ ಕೆಲಸದಲ್ಲಿದ್ದ ಇತರ 4 ಮಂದಿ ಗೆಳತಿಯರ ಜೊತೆ ಶನಿವಾರ ಬೆಳಗೆ ಮಡಿಕೇರಿಗೆ ಆಗಮಿಸಿದ್ದರು. ಮಡಿಕೇರಿಗೆ ಆಗಮಿಸುವ ಮೊದಲ ಇಲ್ಲಿ ಉಳಿದುಕೊಳ್ಳಲು ನಗರದ ಅಗ್ನಿ ಶಾಮಕ ದಳದ ಕಚೇರಿ ಬಳಿ ಇರುವ ಹೋಂ ಸ್ಟೇ ಒಂದನ್ನು ಆನ್‍ಲೈನ್ ಮೂಲಕ ಬುಕ್ ಮಾಡಿದ್ದರು. ನಗರಕ್ಕೆ ಆಗಮಿಸಿದ 5 ಮಂದಿ ಯುವತಿಯರು ಹೋಂ ಸ್ಟೇ ಅಲ್ಲಿ ತಂಗಿದ್ದರಲ್ಲದೇ, ಶನಿವಾರ ಮತ್ತು ರವಿವಾರ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಈ ಯುವತಿಯರ ಬಳಗ ಸೋಮವಾರ ಬೆಳಗ್ಗೆ ಹೋಂಸ್ಟೇಯನ್ನು ಖಾಲಿ ಮಾಡಿ ಜೀಪ್‍ನಲ್ಲಿ ಮಾಂದಲ್ ಪಟ್ಟಿಗೆ ತೆರಳುವ ಸಿದ್ಧತೆಯಲ್ಲಿದ್ದರು ಎನ್ನಲಾಗಿದೆ.

ರವಿವಾರ ರಾತ್ರಿ 9 ಗಂಟೆಯ ವೇಳೆಗೆ ವಿಘ್ನೇಶ್ವರಿ ಅವರು ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ್ದರು. ಸಮಯ ಕಳೆದರು ಆಕೆ ಹೊರ ಬಾರದನ್ನು ಗಮನಿಸಿದ ಇತರ ಯುವತಿಯರು ಬಾತ್ ರೂಂಗೆ ತೆರಳಿದಾಗ ವಿಘ್ನೇಶ್ವರಿ ಕುಸಿದು ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಆಕೆಯನ್ನು ವಾಹನದಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 

ನಗರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಬಳಿಕ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ಮೃತ ಯುವತಿಯ ತಂದೆ ಈಶ್ವರನ್ ಅವರು ಸೋಮವಾರ ಬೆಳಗ್ಗೆ ಮಡಿಕೇರಿಗೆ ಆಗಮಿಸಿ, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ಗ್ಯಾಸ್ ಗೀಸರ್‍ನಿಂದ ಕಾರ್ಬನ್ ಸೋರಿಕೆಯಾಗಿ ಈ ದುರಂತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

'ಮಗಳು ಆರೋಗ್ಯವಾಗಿದ್ದಳು'

ನನ್ನ ಮಗಳು ದೈಹಿಕವಾಗಿ ಆರೋಗ್ಯವಂತಳಾಗಿದ್ದು, ಯಾವುದೇ ರೀತಿಯ ಸಮಸ್ಯೆ ಆಕೆಗೆ ಇರಲಿಲ್ಲ. ಕೊಡಗಿನ ಕಡೆ ಸ್ನೇಹಿತೆಯರ ಜೊತೆ ಪ್ರವಾಸ ಹೋಗುತ್ತಿರುವ ವಿಚಾರವನ್ನು ನಮಗೆ ಮಾಹಿತಿ ನೀಡಿದ್ದಳು. ಹೋಂಸ್ಟೇಯಲ್ಲಿರುವ ಗ್ಯಾಸ್ ಗೀಸರ್ ಸಮಸ್ಯೆಯಿಂದ ಮಗಳು ಮೃತಪಟ್ಟಿರುವ ಸಾಧ್ಯತೆ ಇದೆ.

- ಈಶ್ವರನ್, ಮೃತಳ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News